ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಫಲಿತಾಂಶ; ಚುನಾವಣಾ ಪ್ರಚಾರ ತಂತ್ರ ರೂಪಿಸಿದ ಪ್ರಮುಖ ನಾಯಕರಿವರು

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಬುಧವಾರ ಮತದಾನ ಮುಕ್ತಾಯವಾಗಿದ್ದು, ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಉತ್ಸಾಹದ ಪ್ರಚಾರ ನಡೆಸಿದ ಐವರು ನಾಯಕರು ಇವರಾಗಿದ್ದಾರೆ. 
ಕಾಂಗ್ರೆಸ್ ಬಾವುಟ
ಕಾಂಗ್ರೆಸ್ ಬಾವುಟ

ಬೆಂಗಳೂರು: 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಬುಧವಾರ ಮತದಾನ ಮುಕ್ತಾಯವಾಗಿದ್ದು, ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಉತ್ಸಾಹದ ಪ್ರಚಾರ ನಡೆಸಿದ ಐವರು ನಾಯಕರು ಇವರಾಗಿದ್ದಾರೆ. 

ಪ್ರಣಾಳಿಕೆಯಿಂದ ಆಕ್ರಮಣಕಾರಿ ಪ್ರಚಾರದವರೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಹೈಲೈಟ್ ಮಾಡಿದ ಎಲ್ಲಾ ಅಂಶಗಳು ದಕ್ಷಿಣ ರಾಜ್ಯದ ಜನರ ತಕ್ಷಣದ ಗಮನವನ್ನು ಗಳಿಸಿದವು.

ಆದರೆ, ರಾಜ್ಯದಲ್ಲಿ ಯಶಸ್ವಿ ಪ್ರಚಾರದ ಹಿಂದೆ ಪಕ್ಷದ ಮುಖಂಡರಾದ ಜಿ. ಪರಮೇಶ್ವರ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಂ.ಬಿ. ಪಾಟೀಲ್, ಶಶಿಕಾಂತ್ ಸೆಂಥಿಲ್ ಮತ್ತು  ಸುನೀಲ್ ಕಾನುಗೋಲು ಪ್ರಮುಖ ಪಾತ್ರ ವಹಿಸಿದ್ದರು.

ರಣದೀಪ್ ಸಿಂಗ್ ಸುರ್ಜೆವಾಲಾ: 2020 ರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರನ್ನು ಬದಲಿಸುವ ಮೂಲಕ ಸುರ್ಜೇವಾಲಾ ಅವರನ್ನು ಕರ್ನಾಟಕ ಉಸ್ತುವಾರಿಯಾಗಿ ನೇಮಿಸಲಾಯಿತು. ಇವರು ರಾಜ್ಯ ಉಸ್ತುವಾರಿಯಾಗಿ ನೇಮಕಗೊಳ್ಳುವ ಮೊದಲು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಘಟಕದ ಮುಖ್ಯಸ್ಥ ಡಿ.ಕೆ. ಶಿವಕುಮಾರ್ ಅವರ ನಡುವೆ ರಾಜ್ಯ ನಾಯಕತ್ವದಲ್ಲಿನ ಭಿನ್ನಾಭಿಪ್ರಾಯಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು.

ಆದಾಗ್ಯೂ, ಈ ಇಬ್ಬರು ಪ್ರಮುಖ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಚುನಾವಣೆಗೆ ಮುಂಚೆಯೇ ಕೊನೆಗೊಳ್ಳುವಂತೆ ಸುರ್ಜೇವಾಲಾ ಮಾಡಿದರು ಮತ್ತು ಕಳೆದ ವರ್ಷ ರಾಜ್ಯದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿಯವರೊಂದಿಗೆ ಇಬ್ಬರು ನಾಯಕರನ್ನು ಒಟ್ಟಿಗೆ ತಂದರು. 

ಸುರ್ಜೇವಾಲಾ ಅವರು ಚುನಾವಣಾ ಪೂರ್ವದಲ್ಲಿ ಪಕ್ಷದ ನಾಯಕತ್ವದಲ್ಲಿ ಒಗ್ಗಟ್ಟಿನ ಸಂದೇಶವನ್ನು ನೀಡುತ್ತಲೇ ಇದ್ದರು ಮತ್ತು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಒಟ್ಟಿಗಿರುವ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇದ್ದರು.

ಎಂ.ಬಿ. ಪಾಟೀಲ್: ರಾಜ್ಯದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿರುವ ಪ್ರಬಲ ಲಿಂಗಾಯತ ನಾಯಕ ಎಂಬಿ ಪಾಟೀಲ್ ಅವರು ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಉತ್ಸಾಹಭರಿತ ಪ್ರಚಾರ ನಡೆಸಿದರು. ಪಕ್ಷದ ಒಳಗಿನವರ ಪ್ರಕಾರ, ಪ್ರಬಲ ಲಿಂಗಾಯತ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಕರೆತರುವಲ್ಲಿ ಪಾಟೀಲ್ ಮುಖ್ಯ ಪಾತ್ರ ವಹಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆಗಳು, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಾರ್ವಜನಿಕ ಸಭೆಗಳು ಮತ್ತು ರೋಡ್ ಶೋಗಳ ಮೂಲಕ ರಾಜ್ಯದಲ್ಲಿ ಆಕ್ರಮಣಕಾರಿ ಪ್ರಚಾರವನ್ನು ರೂಪಿಸುವ ಹಿಂದೆ ಎಂಬಿ ಪಾಟೀಲ್ ಇದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ರಾಜ್ಯದ ಮತದಾರರನ್ನು ಓಲೈಸಲು ಪಕ್ಷದ ಮನೆ-ಮನೆ ಪ್ರಚಾರದತ್ತಲೂ ಗಮನ ಹರಿಸಿದರು. ಪಾಟೀಲರ ಪ್ರಯತ್ನದಿಂದಾಗಿಯೇ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ನಾಲ್ಕು ವರ್ಷಗಳ ನಂತರ ರಾಜ್ಯದಲ್ಲಿ ಚುನಾವಣಾ ಸಾರ್ವಜನಿಕ ಸಭೆ ನಡೆಸಿದರು.

ಪಾಟೀಲ್ ಅವರು ಸಿದ್ದರಾಮಯ್ಯ ಅವರಿಗೆ ಆಪ್ತರು ಎಂದು ಪರಿಗಣಿಸಲಾಗಿದೆ ಮತ್ತು ಈ ಹಿಂದೆ ರಾಜ್ಯ ಸರ್ಕಾರದಲ್ಲಿ ಹಲವಾರು ಪ್ರಮುಖ ಖಾತೆಗಳನ್ನು ಸಹ ನಿರ್ವಹಿಸಿದ್ದಾರೆ.

ಜಿ. ಪರಮೇಶ್ವರ್: ಇವರನ್ನು ಕರ್ನಾಟಕ ಕಾಂಗ್ರೆಸ್ ಪ್ರಣಾಳಿಕೆ, ನೀತಿ ಮತ್ತು ದೂರದೃಷ್ಟಿ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ಪಿಎಫ್‌ಐ ಮತ್ತು ಬಜರಂಗದಳದಂತಹ ಸಂಘಟನೆಗಳನ್ನು ನಿಷೇಧಿಸುವ ಕುರಿತು ಮಾತನಾಡಿದ ಕಾಂಗ್ರೆಸ್‌ನ ಪ್ರಣಾಳಿಕೆಯು ಶೀಘ್ರದಲ್ಲೇ ಜನರ ಗಮನವನ್ನು ಸೆಳೆಯಿತು ಮತ್ತು ಹಲವಾರು ವಲಯಗಳಿಂದ ಟೀಕೆಗೆ ಗುರಿಯಾಯಿತು.
ಮಾಜಿ ಉಪಮುಖ್ಯಮಂತ್ರಿ ಮತ್ತು ಮಾಜಿ ರಾಜ್ಯ ಘಟಕದ ಮುಖ್ಯಸ್ಥ ಪರಮೇಶ್ವರ್ ಅವರು ರಾಜ್ಯದ ಜನರಿಗೆ ಪಕ್ಷದ ಐದು ಭರವಸೆಗಳನ್ನು ಪ್ರಸ್ತಾಪಿಸಿದರು. ಅದು ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಶಶಿಕಾಂತ್ ಸೆಂಥಿಲ್: 2008ರ ಬ್ಯಾಚ್ ಐಎಎಸ್ ಅಧಿಕಾರಿ. 2019ರಲ್ಲಿ ಸಿಎಎಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ಸೆಂಥಿಲ್ ಅವರನ್ನು ಚುನಾವಣೆಗೆ ಒಳಪಡುವ ರಾಜ್ಯದಲ್ಲಿ ಕಾಂಗ್ರೆಸ್ ವಾರ್ ರೂಮ್‌ನ ಉಸ್ತುವಾರಿಯನ್ನಾಗಿ ಮಾಡಲಾಯಿತು. 
ಅವರು ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡುವುದಲ್ಲದೆ, ಪಕ್ಷವು ಫ್ಯಾಕ್ಟ್ ಚೆಕ್ಕಿಂಗ್ ಮೇಲ್ವಿಚಾರಣೆ ಮತ್ತು ಸಮಸ್ಯೆಗಳ ಬಗ್ಗೆ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಮತ್ತು ಮೂಲೆಗುಂಪು ಮಾಡಲು ಪಕ್ಷದ ನಾಯಕರಿಗೆ ಬೆಂಬಲವನ್ನು ನೀಡುವತ್ತ ಕೆಲಸ ಮಾಡಿದರು. ಸೆಂಥಿಲ್ ನೇತೃತ್ವದಲ್ಲಿ ಕಾಂಗ್ರೆಸ್ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಪ್ರಚಾರದ ಮೇಲೆ ನಿಗಾ ಇರಿಸಿತ್ತು.

ಸುನೀಲ್ ಕಾನುಗೋಲು: ಕಾಂಗ್ರೆಸ್‌ಗೆ ರಣತಂತ್ರ ರೂಪಿಸುವ ಕೆಲಸ ಮಾಡುತ್ತಿರುವ ಕಾನುಗೋಲು ಅವರು ಸಮೀಕ್ಷೆ, ಪ್ರಚಾರ, ಅಭ್ಯರ್ಥಿಗಳ ಆಯ್ಕೆ ನಿರ್ಧಾರ, ಗೆಲುವಿನ ತಂತ್ರಗಾರಿಕೆಯ ಹೊಣೆ ಹೊತ್ತಿದ್ದರು. ಪಕ್ಷದ ನಾಯಕರ ಪ್ರಕಾರ, ಬಹುತೇಕ ತೆರೆಮರೆಯಲ್ಲಿಯೇ ಇದ್ದ ಕಾನುಗೋಲು ಅವರು ರಾಜ್ಯದ ಪ್ರತಿ ವಿಧಾನಸಭಾ ಸ್ಥಾನಕ್ಕೆ ರಣತಂತ್ರವನ್ನು ಸಿದ್ಧಪಡಿಸಿದ್ದಾರೆ. ಕರ್ನಾಟಕದಲ್ಲಿ ತ್ರಿಕೋನ ಸ್ಪರ್ಧೆಯಾಗದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಮೂಲೆಗುಂಪು ಮಾಡಲು ಅವರು ತಂತ್ರವನ್ನು ಸಿದ್ಧಪಡಿಸಿದ್ದಾರೆ.

ಪಕ್ಷದ ನಾಯಕರ ಪ್ರಕಾರ, ಆಡಳಿತಾರೂಢ ಬಿಜೆಪಿ ವಿರುದ್ಧ ರೇಟ್ ಕಾರ್ಡ್ ಬಿಡುಗಡೆ, ಪೇ-ಸಿಎಂ ಮತ್ತು 40 ಪರ್ಸೆಂಟ್ ಕಮಿಷನ್ ಸರ್ಕಾರ್ ಮುಂತಾದ ಕಾಂಗ್ರೆಸ್ ಪ್ರಚಾರಗಳಿಗೆ ಕಾನುಗೋಲು ಕಾರಣ. ಈ ಹಿಂದೆ ಬಿಜೆಪಿಯ ಪ್ರಚಾರದ ಭಾಗವಾಗಿ ಕಾನುಗೋಲು ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡಿದ್ದರು. ಅವರನ್ನು ಮೇ 2022 ರಲ್ಲಿ ಕಾಂಗ್ರೆಸ್ ತೆಕ್ಕೆಗೆ ತರಲಾಯಿತು.

ಬಳಿಕ ಕಾಂಗ್ರೆಸ್‌ಗೆ ರಣತಂತ್ರ ಹೆಣೆಯಲು ಆರಂಭಿಸಿದರು. ಅವರು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಕೊಡುಗೆ ನೀಡಿದ್ದಾರೆ. ಅವರು ಉತ್ತರ ಪ್ರದೇಶದಲ್ಲಿ ಬಿಜೆಪಿಗಾಗಿ ಕೆಲಸ ಮಾಡಿದ್ದರು ಮತ್ತು 2017 ರಲ್ಲಿ ಯೋಗಿ ಆದಿತ್ಯನಾಥ್ ಅವರ ಅದ್ಭುತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗುತ್ತದೆ. 2014ರಲ್ಲಿ ಪ್ರಶಾಂತ್ ಕಿಶೋರ್ ಜೊತೆ ಕಾನುಗೋಲು ಅವರು ಕೆಲಸ ಮಾಡಿದ್ದರು.

224 ಸದಸ್ಯ ಬಲದ ವಿಧಾನಸಭೆಯ ಮತ ಎಣಿಕೆ ಮೇ 13ರಂದು ನಡೆಯಲಿದೆ. 2018 ರಲ್ಲಿ ಕಾಂಗ್ರೆಸ್ ಕೇವಲ 80 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆಡಳಿತಾರೂಢ ಬಿಜೆಪಿ 104 ಮತ್ತು ಜೆಡಿಎಸ್ 37 ಸ್ಥಾನಗಳನ್ನು ಗಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com