
ಬೆಂಗಳೂರು: ರೂ.1000 ಕೋಟಿ ಕಲೆಕ್ಷನ್ ಮೇಲ್ವಿಚಾರಣೆ ನಡೆಸಲು ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆಂದು ಬಿಜೆಪಿ ಆರೋಪಿಸಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಕಲೆಕ್ಷನ್ ಜೋರಾಗಿದೆ. ರಾಜ್ಯವನ್ನು ದೋಚುವ ಸ್ಪರ್ಧೆ ತೀವ್ರವಾಗಿದೆ. ಕನ್ನಡಿಗರ ಹಣ ಪಂಚ ರಾಜ್ಯಗಳ ಪಾಲಾಗುತ್ತಿದೆ. ಕನ್ನಡಿಗರ ಬದುಕು ಪಂಚರ್ ಆಗಿದೆ ಎಂದು ಕಿಡಿಕಾರಿದೆ.
ಇದೇ ವೇಳೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿ ವಿಡಿಯೋವೊಂದನ್ನೂ ಪೋಸ್ಟ್ ಮಾಡಿದೆ.
ಮತ್ತೊಂದು ಟ್ವೀಟ್ ನಲ್ಲಿ ರಣದೀಪ್ ಸುರ್ಜೇವಾಲಾ ಅವರನ್ನು ಕಲೆಕ್ಷನ್ ಏಜೆಂಟ್ ಹಾಗೂ ಕೆಸಿ ವೇಣುಗೋಪಾಲ್ ಅವರನ್ನು ಕಮಿಷನ್ ಏಜೆಂಟ್ ಎಂದು ಟೀಕೆ ಮಾಡಿದೆ.
ರೂ.1000 ಕೋಟಿ ಕಲೆಕ್ಷನ್ನ ಮೇಲ್ವಿಚಾರಣೆ ನಡೆಸಲು, ನಿಗಮ ಮಂಡಳಿಗಳ ನೇಮಕಾತಿಗೆ ರೇಟ್ ಫಿಕ್ಸ್ ಮಾಡಲು, ಪಂಚ ರಾಜ್ಯ ಚುನಾವಣೆಗೆ ಹಣ ಸಾಗಣೆಯ ಸ್ಥಿತಿಗತಿ ತಿಳಿಯಲು, ಗುತ್ತಿಗೆದಾರರಿಗೆ ಹೆಚ್ಚುವರಿ ಪರ್ಸೆಂಟೇಜ್ ಫಿಕ್ಸ್ ಮಾಡಲು ಮತ್ತು ಅಧಿಕಾರಿಗಳಿಂದ ವಸೂಲಿಯ ವಾಸ್ತವ ಸ್ಥಿತಿ ಅರಿಯುವ ಸಲುವಾಗಿ ವೇಣುಗೋಪಾಲ್ ಹಾಗೂ ಸುರ್ಜೇವಾಲಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆಂದು ಆರೋಪಿಸಿದೆ.
Advertisement