ಕಾಂಗ್ರೆಸ್ ತನ್ನ ಪರಿಸ್ಥಿತಿ ಸರಿಮಾಡಿಕೊಳ್ಳಲಿ, ಕರ್ನಾಟಕ ಚುನಾವಣೆ 2024 ಲೋಕಸಭೆ ಚುನಾವಣೆಗೆ ದಿಕ್ಸೂಚಿ: ಹೆಚ್ ಡಿ ದೇವೇಗೌಡ

ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಕಾಂಗ್ರೆಸ್ ಮೊದಲು ತನ್ನ ಪಕ್ಷದೊಳಗೆ ಪರಿಸ್ಥಿತಿಯನ್ನು ಸರಿಮಾಡುವ ಬಗ್ಗೆ ಪ್ರಯತ್ನಿಸಲಿ ಎಂದು ಹೇಳಿದ್ದಾರೆ. 
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ

ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ಮೊದಲು ಬಿಜೆಪಿ ಎದುರು ವಿರೋಧ ಪಕ್ಷಗಳೆಲ್ಲ ಒಟ್ಟಾಗಲಿವೆ ಎಂದು ಹೇಳಲಾಗುತ್ತಿದೆ. ಈ ಮಾತುಕತೆ, ಊಹಾಪೋಹಗಳ ನಡುವೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಕಾಂಗ್ರೆಸ್ ಮೊದಲು ತನ್ನ ಪಕ್ಷದೊಳಗೆ ಪರಿಸ್ಥಿತಿಯನ್ನು ಸರಿಮಾಡುವ ಬಗ್ಗೆ ಪ್ರಯತ್ನಿಸಲಿ ಎಂದು ಹೇಳಿದ್ದಾರೆ. 

ಪಿಟಿಐಗೆ ಅವರು ಇಂದು ನೀಡಿದ ಸಂದರ್ಶನದಲ್ಲಿ, ವಿರೋಧ ಪಕ್ಷಗಳ ಮುಂದೆ ಹಲವು ಆಯ್ಕೆಗಳಿವೆ. ಭಾರತ ದೇಶವು ನಾಯಕತ್ವದ ಸಂಪತ್ತನ್ನು ಹೊಂದಿದೆ ಎಂದಿದ್ದಾರೆ. 

ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ನಿರೀಕ್ಷೆಗಳ ಬಗ್ಗೆ ಉತ್ಸುಕರಾಗಿರುವ ಹಿರಿಯ ನಾಯಕ, ವಯೋಸಹಜ ಕಾಯಿಲೆಗಳಿಂದಾಗಿ ಸಕ್ರಿಯ ಪ್ರಚಾರದಿಂದ ಹಿಂದೆ ಸರಿದಿದ್ದು, ಈ ವರ್ಷ ಇತರ ರಾಜ್ಯಗಳ ಚುನಾವಣೆಗಳಿಗೆ ಮತ್ತು 2024 ರಲ್ಲಿ ನಡೆಯುವ ಸಂಸತ್ತಿನ ಚುನಾವಣೆಗಳಿಗೆ ಇದು ಮುನ್ಸೂಚನೆ ಎಂಬುದನ್ನು ದೇವೇಗೌಡರು ಹೇಳುತ್ತಾರೆ. 

1. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಭವಿಷ್ಯವನ್ನು ನೀವು ಹೇಗೆ ನೋಡುತ್ತೀರಿ? ಜೆಡಿ(ಎಸ್) ತಂತ್ರ ಮತ್ತು ಪ್ರಚಾರದ ಕೇಂದ್ರಬಿಂದು ಏನಾಗಲಿದೆ?
ನಮ್ಮ ಪಕ್ಷ ಕರ್ನಾಟಕದಾದ್ಯಂತ ಉತ್ತಮ ಸಾಧನೆ ಮಾಡಲಿದೆ ಎಂಬ ವಿಶ್ವಾಸ ನನಗಿದೆ. ಎರಡು ರಾಷ್ಟ್ರೀಯ ಪಕ್ಷಗಳತ್ತ ಮಾತ್ರ ಗಮನಹರಿಸುವ ಜನರ ಸಿನಿಕತನ ಕಂಡು ಅಚ್ಚರಿಯಾಗುತ್ತದೆ. ನಾವು ವಿಭಜಕ ಅಜೆಂಡಾಕ್ಕಾಗಿ ಮತ ಕೇಳುತ್ತಿಲ್ಲ. ನಾವು ಎಲ್ಲರನ್ನೂ ಒಳಗೊಳ್ಳುವ ಸಾಮಾಜಿಕ ಮತ್ತು ಅಭಿವೃದ್ಧಿ ದೃಷ್ಟಿ ನಮ್ಮದು. ಪಂಚರತ್ನ ಕಾರ್ಯಕ್ರಮದ ಹೆಸರಿನಲ್ಲಿ ಮತ ಕೇಳುತ್ತಿದ್ದೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದ್ದು, ಪ್ರಚಾರ ವೇಳೆ ಜನರಿಗೆ ನೀಡುವ ಭರವಸೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತೇವೆ.

ಈ ಕಾರ್ಯಕ್ರಮವನ್ನು ಪ್ರಚಾರ ಮಾಡಲು ನಮ್ಮ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ಪ್ರವಾಸವನ್ನು ಮುಗಿಸಿದ್ದಾರೆ. ಅವರಿಗೆ ಸಿಕ್ಕಿರುವ ಪ್ರತಿಕ್ರಿಯೆ ಉತ್ತಮವಾಗಿದೆ. ನಮ್ಮ ಪಕ್ಷದ ಕಾರ್ಯತಂತ್ರವು ತುಂಬಾ ಸರಳವಾಗಿದೆ - ಕಷ್ಟಪಟ್ಟು ಕೆಲಸ ಮಾಡಿ ಮತ್ತು ಜನರೊಂದಿಗೆ ಪ್ರಾಮಾಣಿಕವಾಗಿರಿ, ಜನರ ಮೇಲೆ ಬೊಟ್ಟು ಮಾಡಿ ತೋರಿಸಿ ಅವರನ್ನು ವಿಭಜಿಸಬೇಡಿ. 

2. ಹಳೆಯ ಮೈಸೂರಿನಿಂದಾಚೆಗೆ ಜೆಡಿಎಸ್ ತನ್ನ ನೆಲೆಯನ್ನು ಗಣನೀಯವಾಗಿ ವಿಸ್ತರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಅಭಿಪ್ರಾಯ ಕೆಲವೆಡೆ ಇದೆ, ಆ ನಿಟ್ಟಿನಲ್ಲಿ ಏನು ಮಾಡಲಾಗುತ್ತಿದೆ?
ನಾವು ಮೈಸೂರು ಪ್ರದೇಶಕ್ಕೆ ಸೀಮಿತವಾಗಿದ್ದೇವೆ ಎಂಬುದು ರಾಷ್ಟ್ರೀಯ ಪಕ್ಷಗಳ ಜಾಣ ಪ್ರಚಾರ. ನಾವು ಯಾವಾಗಲೂ ರಾಜ್ಯಾದ್ಯಂತ ಮತ್ತು ಸಮುದಾಯಗಳಿಂದ ಶಾಸಕರನ್ನು ಹೊಂದಿದ್ದೇವೆ. ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಯಾರಾದರೂ 1999 ರಿಂದ ಶಾಸಕರು ಮತ್ತು ಕ್ಷೇತ್ರಗಳ ಪಟ್ಟಿಯನ್ನು ಪರಿಶೀಲಿಸಬೇಕು.

 ಮೈಸೂರು ಪ್ರದೇಶದ ಜನರು ನಮಗೆ ಹೆಚ್ಚಿನ ಬೆಂಬಲ ನೀಡುತ್ತಾರೆ. ಅದಕ್ಕೆ ನಾವು ಕೃತಜ್ಞರಾಗಿದ್ದೇವೆ. ಈ ಬಾರಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚು ಯಶಸ್ವಿಯಾಗಲಿದ್ದೇವೆ. ಸಚಿವ, ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಾಗಿ ನಾನು ಎಲ್ಲರಿಗಾಗಿ ಕೆಲಸ ಮಾಡಿದ್ದೇನೆ, ನಾನು ಎಂದಿಗೂ ಪ್ರದೇಶಗಳ ನಡುವೆ ಭೇದಭಾವ ಮಾಡಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ನನ್ನ ವೃತ್ತಿಜೀವನದಲ್ಲಿ, ಸುಳ್ಳನ್ನು ಎದುರಿಸಲು ನಾನು ಎಂದಿಗೂ ದುಬಾರಿ ಪಿಆರ್ ಏಜೆನ್ಸಿಗಳನ್ನು ನೇಮಿಸಿಕೊಂಡಿಲ್ಲ. 60 ವರ್ಷಗಳಿಂದ ನನ್ನನ್ನು ಬೆಳೆಸಿದ ದೇವರಿಗೆ ಮತ್ತು ಜನರಿಗೆ ಸತ್ಯ ತಿಳಿದಿದೆ.

3. ಸ್ವತಂತ್ರ ಸರ್ಕಾರ ರಚಿಸಲು ಜೆಡಿಎಸ್ 123 ಸ್ಥಾನಗಳ ಗುರಿಯನ್ನು ಹೊಂದಿದೆ. ಇದು ಸಾಧ್ಯವಿಲ್ಲ ಎಂದು ಕೆಲವು ವಿಮರ್ಶಕರು ಹೇಳುತ್ತಾರೆ. ಅದನ್ನು ಸಾಧಿಸಬಹುದು ಎಂಬ ವಿಶ್ವಾಸವಿದೆಯೇ?
ನಮ್ಮ ಕಠಿಣ ಪರಿಶ್ರಮ ಮತ್ತು ಅಭಿವೃದ್ಧಿ ದೃಷ್ಟಿ ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ರಾಜಕೀಯ ವಿರೋಧಿಗಳ ಸಿನಿಕತನಕ್ಕೆ ನಾನು ಹೆದರುವುದಿಲ್ಲ.

4. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಬಗ್ಗೆ ನಿಮ್ಮ ನಿಲುವು ಏನು, ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದರೇ?
ನಾನು ಈ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಮ್ಮ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಮತ್ತು ಸಿ ಎಂ ಇಬ್ರಾಹಿಂ (ಜೆಡಿಎಸ್ ರಾಜ್ಯಾಧ್ಯಕ್ಷ) ಈ ಬಗ್ಗೆ ಸರಿಯಾದ ವಿಶ್ಲೇಷಣೆ ನೀಡಬಹುದು. ರಾಷ್ಟ್ರೀಯ ಪಕ್ಷಗಳು ಸುಳ್ಳು ಆಶ್ವಾಸನೆ, ಭರವಸೆ ನೀಡುವ ಅಭ್ಯಾಸವನ್ನು ಹೊಂದಿವೆ ಎಂದು ನಾನು ಹೇಳಬಲ್ಲೆ. 

5. ಕರ್ನಾಟಕ ಚುನಾವಣೆಗಳು ಎಷ್ಟು ಮುಖ್ಯ ಮತ್ತು ರಾಷ್ಟ್ರೀಯ ರಾಜಕೀಯ ರಂಗದಲ್ಲಿ ಅದರ ಫಲಿತಾಂಶದ ಪರಿಣಾಮ ಏನಾಗಲಿದೆ?
ಕರ್ನಾಟಕವು ಈ ವರ್ಷ ಇತರ ರಾಜ್ಯಗಳ ಚುನಾವಣೆಗಳಿಗೆ ಮತ್ತು 2024 ರಲ್ಲಿ ಸಂಸತ್ತಿನ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ. ಈ ಹಿಂದೆಯೂ ಕರ್ನಾಟಕ ಅದನ್ನು ತೋರಿಸಿಕೊಂಡು ಬಂದಿದೆ, ಈ ಬಾರಿ ಕೂಡ ಅದೇ ಆಗಲಿದೆ. 

6. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕಾರ್ಯವೈಖರಿ ಬಗ್ಗೆ ನಿಮ್ಮ ಅಭಿಪ್ರಾಯ, ಅವರು ಶೀಘ್ರದಲ್ಲೇ ಪ್ರಧಾನಿಯಾಗಿ 9 ವರ್ಷ ಪೂರೈಸಲಿದ್ದಾರೆ. ಅವರ ಆಡಳಿತದಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ನಡೆಯುತ್ತಿರುವ ಚರ್ಚೆ ಏನಿದೆ?
ಕೃಷಿ ಸಮಸ್ಯೆಗಳು, ಕೃಷಿ ಕಾನೂನುಗಳು, ಕೋವಿಡ್, ಕೇಂದ್ರ ಬಜೆಟ್‌ಗಳು, ಆರ್ಥಿಕತೆ, ಈಶಾನ್ಯ ರಾಜ್ಯ, ಕಾಶ್ಮೀರ ಸಮಸ್ಯೆ ಇತ್ಯಾದಿ ಎಲ್ಲಾ ವಿಷಯಗಳ ಬಗ್ಗೆ ನಾನು ರಾಜ್ಯಸಭೆಯಲ್ಲಿ ಕಲಾಪದಲ್ಲಿ ಭಾಗವಹಿಸಿದ್ದೇನೆ ವಿವರವಾಗಿ ಮಾತನಾಡಿದ್ದೇನೆ ಕೂಡ. ಇದು ಸಂಸತ್ತಿನಲ್ಲಿ ಮತ್ತು ನನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ದಾಖಲೆಯಾಗಿದೆ. ಕೇಂದ್ರದ ಬಿಜೆಪಿ ಸರ್ಕಾರದ ಬಗ್ಗೆ ನನ್ನ ಮೌಲ್ಯಮಾಪನ ಏನೆಂದು ಅದರಿಂದ ತಿಳಿಯುತ್ತದೆ. ನಾನು ಯಾವಾಗಲೂ ನನ್ನ ಕೆಲಸವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಈ 91 ನೇ ವಯಸ್ಸಿನಲ್ಲಿ ಅದನ್ನು ಮುಂದುವರಿಸುತ್ತೇನೆ. ಕಾಂಗ್ರೆಸ್ ಪಕ್ಷವು ಈ ದೇಶದ ಏಕೈಕ ವಿರೋಧ ಪಕ್ಷವಲ್ಲ. 

7. 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಪಕ್ಷಗಳ ಒಗ್ಗಟ್ಟನ್ನು ರೂಪಿಸುವಲ್ಲಿ ಕಾಂಗ್ರೆಸ್ ಯಾವ ಪಾತ್ರವನ್ನು ವಹಿಸಬೇಕು ಎಂದು ನೀವು ಯೋಚಿಸುತ್ತೀರಿ?
ಮೊದಲು ಕಾಂಗ್ರೆಸ್ ತನ್ನ ಪರಿಸ್ಥಿತಿಯನ್ನು ಸುಸ್ಥಿತಿಗೆ ತರಬೇಕು. ವಿರೋಧ ಪಕ್ಷಗಳ ಮುಂದೆ ಹಲವು ಆಯ್ಕೆಗಳಿವೆ. ಈ ರಾಷ್ಟ್ರವು ನಾಯಕತ್ವದ ಸಂಪತ್ತನ್ನು ಹೊಂದಿದೆ.

8. ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಸಾಬೀತಾದ ನಂತರ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾನು ಪ್ರತ್ಯೇಕವಾಗಿ ಹೇಳಿಕೆ ನೀಡಲು ಬಯಸುವುದಿಲ್ಲ. ನಮ್ಮ ಪಕ್ಷದ ಹಿರಿಯ ನಾಯಕರು ಈಗಾಗಲೇ ಈ ಬಗ್ಗೆ ಮಾತನಾಡಿದ್ದಾರೆ. ಇದು ತುಂಬಾ ದುರದೃಷ್ಟಕರ ಎಂದು ನಾನು ಹೇಳಬಲ್ಲೆ.

9. ಜನತಾ ಪರಿವಾರ ಮತ್ತು ತೃತೀಯ ರಂಗದ ಪುನರುಜ್ಜೀವನದ ಸಾಧ್ಯತೆ ಇದೆ ಎಂದು ನಿಮಗೆ ಅನಿಸುತ್ತಿದೆಯೇ ಅಥವಾ ಅದು ಮುಗಿದ ಅಧ್ಯಾಯವೇ?
ಎಲ್ಲವೂ ಸಾಧ್ಯ. ಎಲ್ಲದರಿಂದಲೂ ನಾನು ಎಲ್ಲವನ್ನೂ ಅರ್ಥೈಸುತ್ತೇನೆ. ನನಗೆ ತೃತೀಯ ಅಥವಾ ನಾಲ್ಕನೇ ರಂಗದಲ್ಲಿ ನಂಬಿಕೆ ಇಲ್ಲ, ನಾವು ಏನೇ ಮಾಡಿದರೂ ಈ ರಾಷ್ಟ್ರ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಮೊದಲ ಭಾಗವಾಗಬೇಕು ಎಂಬುದು ನನ್ನ ನಂಬಿಕೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com