ಹುಬ್ಬಳ್ಳಿ: ರಾಷ್ಟ್ರೀಯ ಪಕ್ಷಗಳ ದೂತರು ಮೈತ್ರಿಗೆ ಬಂದಿದ್ದರು ಎಂದಿರುವ ಜೆಡಿಎಸ್ ನಾಯಕ ಎಚ್.ಡಿ. ದೇವೇಗೌಡ ಅವರು, ಮೈತ್ರಿಗೆ ಬಂದಿದ್ದವರ ಹೆಸರು ಬಹಿರಂಗಪಡಿಸಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಪತ್ರಿಕೆಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡರು, ರಾಷ್ಟ್ರೀಯ ಪಕ್ಷಗಳ ದೂತರು ಮೈತ್ರಿ ಮಾತುಕತೆ ಮಾಡಲು ಬಂದಿದ್ದಾರೆಂದು ಕುಮಾರಸ್ವಾಮಿ ಹೇಳಿರುವುದು ನಿಜ. ಅವರು ಮೊದಲ ನನ್ನ ಬಳಿ ಬಂದಿದ್ದರು. ವಯಸ್ಸಿನ ಕಾರಣ ನೀಡಿ, ಇದೆಲ್ಲವನ್ನು ಕುಮಾರಸ್ವಾಮಿಗೆ ವಹಿಸಿದ್ದೇನೆ. ನೀವು ಅವರ ಬಳಿ ಮಾತನಾಡಿ ಎಂದು ಹೇಳಿ ಕಳುಹಿಸಿದೆ' ಎಂಬುದಾಗಿ ಹೇಳಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಮೈತ್ರಿಗೆ ಬಂದಿದ್ದ ದೂತರ ಹೆಸರನ್ನು ದೇವೇಗೌಡರು ಬಹಿರಂಗ ಪಡಿಸಬೇಕು ಎಂದಿದ್ದಾರೆ.
ಪಕ್ಷದ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ನನ್ನ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ, ನಾನೇ ಮುಖ್ಯಮಂತ್ರಿ ಎಂಬ ಮಾತುಗಳನ್ನಾಡಿದ್ದಾರೆ. ಅವರ ಮಾತಿಗೆ ನಾನು ಚಿರಋಣಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರವಾಹ ಬಂದಾಗ ಕರ್ನಾಟಕಕ್ಕೆ ಬರದ ಪ್ರಧಾನಿ, ಚುನಾವಣೆ ಸಂದರ್ಭದಲ್ಲಿ ಬಂದಿದ್ದಾರೆ ಎಂಬ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಪ್ರವಾಹ ಬಂದಾಗ ಹೆಚ್ಚಿನ ಅನುದಾನ ಕೊಟ್ಟಿದ್ದು ಮೋದಿ ಸರ್ಕಾರ. ಕಾಂಗ್ರೆಸ್ ಸರ್ಕಾರ ಮನೆ ಬಿದ್ದರೆ 2 ಸಾವಿರ ಕೊಡುತ್ತಿತ್ತು. ನಮ್ಮ ಸರ್ಕಾರ ಅತಿವೃಷ್ಟಿ ಪರಿಹಾರ ಹೆಚ್ಚಿಸಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿತ್ತು. ಆಗ, ಪ್ರಿಯಾಂಕಾ ಅಥವಾ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಸಾಂತ್ವನ ಹೇಳಿದ್ರಾ? ಎಂದು ತಿರುಗೇಟು ನೀಡಿದರು.
Advertisement