social_icon

ಮಾತಲ್ಲೇ ಮಂಡಕ್ಕಿ ತಿನ್ನಿಸುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು: ಭಂಡ ಸರ್ಕಾರದ ಒಣ ರಾಜಕೀಯವನ್ನು ಕನ್ನಡಿಗರು ಕ್ಷಮಿಸಲ್ಲ ಸ್ವಾಮಿ!

ಕರ್ನಾಟಕದಲ್ಲಿ ದುರಾದೃಷ್ಟವಶಾತ್ 10 ವರ್ಷದ ಬಳಿಕ ಮತ್ತೆ ಬರದ ಛಾಯೆ ಆವರಿಸಿದೆ. ಮುಂಗಾರಿನಲ್ಲಿ ಬಂದ ಅಲ್ಪ ಮಳೆಯನ್ನೇ ನಂಬಿ ಕಾವೇರಿ ಒಡಲಿನ ಎರಡೂ ಮಡಿಲುಗಳಲ್ಲಿ ರೈತರು ಬಿತ್ತನೆ ಮಾಡಿ ಬೆಳೆಗಾಗಿ ಕಾಯುತ್ತಿದ್ದಾರೆ. 

Published: 23rd August 2023 02:50 PM  |   Last Updated: 23rd August 2023 02:58 PM   |  A+A-


Bjp Tweet

ಬಿಜೆಪಿ ಟ್ವೀಟ್

Posted By : Shilpa D
Source : Online Desk

ಬೆಂಗಳೂರು: ಅಕ್ಕಿ, ದುಡ್ಡು, ಜ್ಯೋತಿ ಎಂದೆಲ್ಲಾ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅನ್ನದ ಪ್ರತಿ ಅಗುಳಿನಿಂದ ಹಿಡಿದು ಕಾವೇರಿ ನೀರಿನ ಪ್ರತಿ ಹನಿಯವರೆಗೂ ರಾಜ್ಯದ ಜನತೆಗೆ ಮಾಡಿದ ಮಹಾದ್ರೋಹ ಮಾಡಿದೆ ಎಂದು ಬಿಜೆಪಿ ಹರಿಹಾಯ್ದಿದೆ.

ಈ ಸಂಬಂಧ ಸರಣಿ  ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್  ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಮುಂಗಾರು ಕೈಕೊಟ್ಟು ರಾಜ್ಯದಲ್ಲಿ ಬರದ ಛಾಯೆ ಆವರಿಸತೊಡಗಿತು. ತಕ್ಷಣಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಿದ್ದ ಸಿದ್ದರಾಮಯ್ಯ ಅವರ ಸರ್ಕಾರ, ವರ್ಗಾವಣೆ ದಂಧೆ, ಮರಳು ಮಾಫಿಯಾ, ಬೆಲೆ ಏರಿಕೆಯಲ್ಲೇ ಆಸಕ್ತಿ ತೋರಿಸಿ ಕಾಲಹರಣ ಮಾಡಿತು. ಇದೀಗ 120 ತಾಲೂಕುಗಳಲ್ಲಿ ಬರ ಬಂದಿದೆ. ಆದರೂ ಇನ್ನು ಸಮೀಕ್ಷೆ, ಸಂಶೋಧನೆ ಅಂತ #ATMSarkara ಕಾಲ ಕಳೆಯುತ್ತ ಅನ್ನದಾತನ ಬದುಕನ್ನು ದುಸ್ತರವಾಗಿಸಿದೆ.

ಕರ್ನಾಟಕದಲ್ಲಿ ದುರಾದೃಷ್ಟವಶಾತ್ 10 ವರ್ಷದ ಬಳಿಕ ಮತ್ತೆ ಬರದ ಛಾಯೆ ಆವರಿಸಿದೆ. ಮುಂಗಾರಿನಲ್ಲಿ ಬಂದ ಅಲ್ಪ ಮಳೆಯನ್ನೇ ನಂಬಿ ಕಾವೇರಿ ಒಡಲಿನ ಎರಡೂ ಮಡಿಲುಗಳಲ್ಲಿ ರೈತರು ಬಿತ್ತನೆ ಮಾಡಿ ಬೆಳೆಗಾಗಿ ಕಾಯುತ್ತಿದ್ದಾರೆ.  ಆದರೆ ಅನ್ನ, ಹಣ, ಬೆಳಕು ಎಂದೆಲ್ಲಾ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಕ್ಕಿಯ ಪ್ರತಿ ಅಗಳಿನಿಂದ ಹಿಡಿದು ಕಾವೇರಿ ನೀರಿನ ಪ್ರತಿ ಹನಿಯವರೆಗೂ ರಾಜ್ಯದ ಜನತೆಗೆ ಮತ್ತು ಅನ್ನದಾತ ರೈತನಿಗೆ ಮಾಡಿದ್ದು ನಯವಂಚನೆ ಮಾಡಿದ ಎಂದು ಬಿಜೆಪಿ ಕಿಡಿಕಾರಿದೆ.

ಅಧಿಕಾರದ ಲಾಲಸೆ, ದುರಾಸೆಗೆ ಬಿದ್ದ ಕರ್ನಾಟಕ ಕಾಂಗ್ರೆಸ್, ಯಾವ ಯೋಜನೆಯನ್ನು ಹೇಗೆ ಅನುಷ್ಠಾನ ಮಾಡಬೇಕೆಂಬ ಕಿಂಚಿತ್ತೂ ಪರಿಕಲ್ಪನೆ ಇಲ್ಲದೆ ಮನಸೋಯಿಚ್ಛೆ ಯೋಜನೆಗಳನ್ನು ಘೋಷಿಸಿತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಆ ಯಾವ ಯೋಜನೆಯನ್ನೂ ಸರಿಯಾಗಿ ಅನುಷ್ಠಾನ ಮಾಡದೆ ರಾಜ್ಯದ ಜನತೆಯ ಕಿವಿ ಮೇಲೆ ಹೂ ಇಡಲಾಯಿತು, ಮನೆಯ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಕೊಡುತ್ತೇವೆಂದು ಕನ್ನಡಿಗರನ್ನು ನಂಬಿಸಿ ವಂಚಿಸಲಾಯಿತು.

ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ನಿತ್ಯ 24 ಸಾವಿರ ಕ್ಯೂಸೆಕ್ಸ್‌ ನೀರು ಹರಿಸಲು ತಮಿಳುನಾಡು ಮನವಿ, ಆ.25ಕ್ಕೆ ಸುಪ್ರೀಂಕೋರ್ಟ್ ವಿಚಾರಣೆ

ಇದರ ಜತೆಗೆ ಅಕ್ಕಿಯಲ್ಲೂ ಸಿದ್ದರಾಮಯ್ಯ ಅವರ ಭಂಡ ಸರ್ಕಾರದ ಒಣ ರಾಜಕೀಯ ಬೇರೆ. ಆದರೆ ಜನತೆ ಇದಕ್ಕೆ ಸೊಪ್ಪು ಹಾಕವುದಿಲ್ಲ ಎಂದು ತಿಳಿದ ಮೇಲೆ ಹಣ ತಿಂದು ಹೊಟ್ಟೆ ತುಂಬಿಸ್ಕೊಳಿ ಅಂತ ಬರೇ ನೂರಾ ಎಪ್ಪತ್ತು ರೂಪಾಯಿ ಕೊಟ್ಟು ನಕ್ಕುಬಿಟ್ಟಿತು ಘನತವೆತ್ತ #ATMSarkara ..! ಕ್ಷಮಿಸಲ್ಲಾ ಸ್ವಾಮಿ, ನಿಮ್ಮನ್ನ ಜನ ಕ್ಷಮಿಸಲ್ಲ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.

ರಾಜ್ಯದ ಮನೆಮನೆಗೂ 200 ಯೂನಿಟ್ ಫ್ರೀ ವಿದ್ಯುತ್ ಅಂತ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬರೆದ ಇಂಕೇ ಇನ್ನೂ ಮಾಸಿಲ್ಲ, ಆಗ್ಲೇ ಮೋಸ ಮಾಡ್ಬಿಟ್ಟಿತ್ತು. ಉಚಿತ 200 ಯೂನಿಟ್ ಕೊಡೋದಲ್ಲ, ಬದಲಾಗಿ #ATMSarkara ತಂದಿರೋ ಲೋಡ್ ಶೆಡ್ಡಿಂಗ್ ಅನ್ನೋ ಭೂತ ಇದ್ದಿದ್ದನ್ನೂ ಕಿತ್ತುಕೊಂಡಿದೆ.

ಲೋಡ್ ಶೆಡ್ಡಿಂಗ್ ಮೂಲಕ ಕರೆಂಟೇ ಇಲ್ಲದಂತೆ ಮಾಡಿದ್ದರೂ ಕೂಡ ವಿದ್ಯುತ್ ದರ ಮಾತ್ರ ಶಾಕ್ ಹೊಡಿಯುತ್ತಿದೆ. ಹೊಸ ಹೊಸಾ‌ ಸ್ಲ್ಯಾಬುಗಳನ್ನ ಮಾಡಿ ಒಂದೇ ಸಲಕ್ಕೆ ಸಾವಿರಾರು ರೂಪಾಯಿ ಜಡಿದದ್ದನ್ನ ಗಮನಿಸೋಕಾಗದಷ್ಟು ಕನ್ನಡಿಗರು ದಡ್ಡರಲ್ಲ. ಬದಲಾಗಿ ಇವನ್ನೆಲ್ಲಾ ನೆನಪಿಟ್ಟು ಕಾದು ಕೂರುವ ಗುಣದವರು ನಮ್ಮವರು.

ಇದರ ನಡುವೆ ಶಕ್ತಿ ಹೆಸರಲ್ಲಿ ಮಹಿಳೆಯರಿಗೆ ಉಚಿತ ಅಂತ ಹೇಳಲಾಯ್ತು, ಆದರೆ ಸಾರಿಗೆ ನಿಗಮಗಳು ಹಳ್ಳ ಹಿಡಿದವು. ಪಾಲಿಗೆ ಬರಬೇಕಾದ ದುಡ್ಡು ಈ ಸರಕಾರ ಮೂರು ತಿಂಗಳಾದರೂ ಇನ್ನೂ ನೀಡಿಲ್ಲ. ಇದರಿಂದಾಗಿ ಸಾರಿಗೆ ನಿಗಮ ಸಂಕಷ್ಟದ ಕಡೆಗೆ ಸಾಗ್ತಾ ಇದೆ. ಸಾರಿಗೆ ನೌಕರರು ಸರಿಯಾದ ಸಮಯಕ್ಕೆ ಸಂಬಳ ಸಿಗದೆ ಡಿಪೋದಲ್ಲೇ ಕಾಲ ಕಳೆದರು. ದುರಸ್ತಿಗೂ ದುಡ್ಡಿಲ್ಲದೆ ರಸ್ತೆಗಿಳಿತಾ ಇರೋ ಬಸ್ಸುಗಳು ಯಮನ ಕಿಂಕರರ ಸ್ವರೂಪಗಳಾಗುತ್ತಿವೆ. ಇದರ ನಡುವೆ ಎಲ್ಲಾ ಇಲಾಖೆಗಳಲ್ಲೂ ವರ್ಗಾವಣೆ ದಂಧೆ ಮಿತಿ ಮೀರಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಮರಳಿನಂತ ಮಾಫಿಯಾಗಳು ರಾಜ್ಯದಲ್ಲಿ ವಿಜೃಂಭಿಸುತ್ತಿವೆ.

ಇದನ್ನೂ ಓದಿ: ಕಾವೇರಿ ತೀರದಲ್ಲಿ ಆರದ ಕಿಚ್ಚು: ನೂರಾರು ವರ್ಷಗಳ ಹಿಂದೆಯೇ ಆರಂಭವಾದ ಜಲ ವಿವಾದದ ಇತಿಹಾಸ!

ಇಷ್ಟೆಲ್ಲಾ ಆದಮೇಲೂ ಗಾಯದ ಮೇಲೆ ಉಪ್ಪು ಸುರಿಯೋದು ಅಂತಾರಲ್ಲಾ, ಅದನ್ನೇ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ನಮ್ಮ ರೈತರ ಕಣ್ಣೆದುರೇ ಕಾವೇರಿಯನ್ನು ತಮಿಳುನಾಡಿಗೆ ಹರಿಬಿಟ್ಟು, ಸಂಕಟವನ್ನು 100 ಪಟ್ಟು ಹೆಚ್ಚು ಮಾಡಿದೆ.  ಕಾವೇರಿ ನ್ಯಾಯಾಧಿಕರಣವೇ ನಿಗದಿ ಮಾಡಿದ್ದಕ್ಕಿಂತಲೂ ಎರಡು ಪಟ್ಟು ನೀರನ್ನು ಈಗಾಗಲೇ ಹರಿಬಿಟ್ಟಿದ್ದಾರೆ. ರಾಜ್ಯದ ರೈತರ ಹಿತಕ್ಕಿಂತಲೂ, ಕಾಂಗ್ರೆಸ್ ಸ್ನೇಹಿತರಾದ ಸ್ಟಾಲಿನ್ ಅವರಿಗೆ ಅನುಕೂಲ ಮಾಡಿಕೊಡುವುದು ಸಿದ್ದರಾಮಯ್ಯರವರ ಗುರಿ. ಹಾಗಾಗಿ ಈಗ ಪ್ರತಿನಿತ್ಯವೂ 15,000 ಕ್ಯೂಸೆಕ್ಸ್ ನೀರನ್ನು ಬಿಡಲಾಗ್ತಾ ಇದೆ. ಅಲ್ಲದೆ 32 tmc ನೀರು ಬಿಡಬೇಕು ಅನ್ನೋ ನ್ಯಾಯಾಧಿಕರಣದ ಆದೇಶವನ್ನೂ ಮೀರಿ 60 tmc ನೀರನ್ನು ತಮಿಳುನಾಡಿಗೆ ಹರಿಸಲಾಗ್ತಿದೆ. ಅಂದ್ಹಾಗೆ 60 tmc ಅಂದ್ರೆ ಎಷ್ಟು ಗೊತ್ತಾ? ಸುಮಾರು ನಾಲ್ಕು ಲಕ್ಷ ಹೆಕ್ಟೇರ್‌ ಬೆಳೆಗೆ ಆಗೋವಷ್ಟು ನೀರು..!

ಅಸಮರ್ಥ #ATMSarkara ದ ಪರಿಣಾಮವಾಗಿ ಕೆ‌ಆರ್‌ಎಸ್‌ನಲ್ಲಿ ನೀರಿನ ಮಟ್ಟ 100 ಅಡಿಗಿಂತ ಕೆಳಗೆ ಇಳಿಯೋ ಅಪಾಯದಲ್ಲಿದೆ. ಬಂಗಾರದ ಬೆಳೆ ಭಸ್ಮವಾಗುವ ಆತಂಕದಲ್ಲಿ ನಮ್ಮ ರೈತರಿದ್ದಾರೆ.

ಇನ್ನೇನು ಕೆಲವೇ ತಿಂಗಳು ಕಳೆದರೆ ಬೆಂಗಳೂರಲ್ಲಿ ಕುಡಿಯೋ ನೀರಿಗೂ ತತ್ವಾರ ಶುರುವಾಗೋದಿದೆ. ನಿಯಮಗಳನ್ನು ಮಾತನಾಡುವವರಿಗಾದರೂ ಇದನ್ನು ಅರ್ಥ ಮಾಡಿಸಬಹುದು. ಆದರೆ ನಿಯತ್ತೇ ಇಲ್ಲದವರಿಗೆ ಅರ್ಥಮಾಡಿಸೋದು ಹೇಗೆ? ನ್ಯಾಯಾಲಯದ ಆದೇಶವನ್ನು ಮೀರಿ ಕಳ್ಳತನದಿಂದ ಕಾವೇರಿಯನ್ನು ಹರಿ ಬಿಟ್ಟರೆ ಪಾಪದ ರೈತ ಇನ್ಯಾರ ಮೊರೆ ಹೋಗಬೇಕು ಹೇಳಿ? ನಮ್ಮ ನಾಡಿಗೆ ದ್ರೋಹ ಬಗೆದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ... ಧಿಕ್ಕಾರ..! ಎಂದು ಬಿಜೆಪಿ ಹರಿಹಾಯ್ದಿದೆ.

ಮಾತಲ್ಲೇ ಮಂಡಕ್ಕಿ ತಿನ್ನಿಸುವುದರಲ್ಲಿ ಸಿದ್ದರಾಮಯ್ಯ ಅವರು ನಿಸ್ಸೀಮರು. ಅವರ ಮಾತು ಬರೀ ಮಂಡಕ್ಕಿ ಎಂಬುದು ಅವರು ಕೊಡದೆ ಕೈಯೆತ್ತಿದ ಹತ್ತು ಕೆಜಿ ಅಕ್ಕಿ ಹೇಳುತ್ತದೆ. ಆದರೂ, 13 ಬಾರಿ ರಾಜ್ಯ ಬಜೆಟ್ ಮಂಡಿಸಿ ಅನುಭವ ಇರುವ ಕಾರಣ, ಅಂಕಿ ಸಂಖ್ಯೆಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ತಿರುಚಿ ಗೊಂದಲ ಸೃಷ್ಟಿಸಿ ಬಿಡುತ್ತಾರೆ. ಕೊಟ್ಟ ಭರವಸೆ ಈಡೇರಿಸುವ ಬದಲಾಗಿ ಆರೋಪಗಳನ್ನು ಮಾಡುತ್ತಾ ದಿನಗಳೆಯುವುದು ಸಿದ್ದರಾಮಯ್ಯರವರ ಐತಿಹಾಸಿಕ ಜಾಯಮಾನ.


Stay up to date on all the latest ರಾಜಕೀಯ news
Poll
N R narayana Murty

ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp