ಉಡುಪಿ: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ಬರೋಬ್ಬರಿ ಮೂರು ತಿಂಗಳು ಕಳೆದಿದ್ದರೂ ರಾಜ್ಯ ಬಿಜೆಪಿಗೆ ಮಾತ್ರ ಇಂದಿಗೂ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ. ವಿಪಕ್ಷ ನಾಯಕನಿಲ್ಲದೆ ಬಜೆಟ್ ಅಧಿವೇಶನವೂ ಕೊನೆಗೊಂಡಿತು. ಇದೇ ವಿಚಾರವಾಗಿ ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಿಡಿಕಾರಿದ್ದು, ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಬಿಜೆಪಿಯಲ್ಲಿ ನಾಯಕರಿಲ್ಲದಂತಾಗಿದೆ ಎಂದಿದ್ದಾರೆ.
'ಕರ್ನಾಟಕ ಬಿಜೆಪಿಯಲ್ಲಿ ನಾಯಕರಿಲ್ಲದ ಕಾರಣದಿಂದ ಇಲ್ಲಿಯವರೆಗೆ ಹೊಸ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಹದಗೆಟ್ಟಿದ್ದು, ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಲಿದೆ' ಎಂದು ಭವಿಷ್ಯ ನುಡಿದರು.
ಮಣಿಪಾಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶೆಟ್ಟರ್, ಬಿಜೆಪಿಯಲ್ಲಿ ಅನೇಕ ನಾಯಕರು ನೋವು ಅನುಭವಿಸಿದ್ದಾರೆ ಮತ್ತು ಅವರಲ್ಲಿ ಅನೇಕರು ಆ ಪಕ್ಷದಿಂದ ಹೊರಬರಲು ಬಯಸುತ್ತಾರೆ. ಬಿಜೆಪಿ ನಾಯಕರು ರಾಜ್ಯದ ವಿವಿಧೆಡೆ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಂತಹ ಯಾವುದೇ ಬೆಳವಣಿಗೆಯನ್ನು ನಿರಾಕರಿಸಿದರು ಮತ್ತು ಆ ಪಕ್ಷದ ಹೈಕಮಾಂಡ್ನಿಂದ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿದರು.
ಬಿಜೆಪಿ ಹೈಕಮಾಂಡ್ನಿಂದ ನನಗೆ ಯಾವುದೇ ಕರೆ ಇಲ್ಲದಿರುವಾಗ ನಾವು ಈಗ ಏಕೆ ಆ ವಿಚಾರವನ್ನು ಚರ್ಚಿಸಬೇಕು. ಒಂದು ವೇಳೆ ಅವರಿಂದ (ಬಿಜೆಪಿ ಹೈಕಮಾಂಡ್) ನನಗೆ ಕರೆ ಬಂದರೆ ಕೂಡಲೇ ಮಾಧ್ಯಮದವರಿಗೆ ತಿಳಿಸುತ್ತೇನೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. 'ಕರ್ನಾಟಕದಿಂದ ಕಾಂಗ್ರೆಸ್ ಸುಮಾರು 12 ರಿಂದ 15 ಸ್ಥಾನಗಳನ್ನು ಪಡೆಯುತ್ತದೆ ಮತ್ತು ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ಕಾಂಗ್ರೆಸ್ 15ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಬಹುದು. ಇದು ಆಶ್ಚರ್ಯ ಪಡಬೇಕಿರುವ ವಿಚಾರವಲ್ಲ. ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಸೇರಲು ಜನ ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದರು.
Advertisement