ಬೆಂಗಳೂರು: ಎಷ್ಟೇ ನಾಯಕರು ಬಿಜೆಪಿ ತೊರೆದರೂ 2024ರ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳ ಉಳಿಸಿಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ಸಾಕು ಎಂದು ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಂಗಳವಾರ ಹೇಳಿದರು.
ಕೆಲ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆಂಬ ಊಹಾಪೋಹಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಷ್ಟೇ ನಾಯಕರು ಬಿಜೆಪಿ ತೊರೆದರೂ ರಾಜ್ಯದಲ್ಲಿ ಕನಿಷ್ಠ 25 ಸ್ಥಾನಗಳನ್ನು ಉಳಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಸಾಕು ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತವಾಗಿ. ಪಕ್ಷವು ಯಾವುದೇ ನಾಯಕನ ಮೇಲೆ ಅವಲಂಬಿತವಾಗಿಲ್ಲ. ಪಕ್ಷವು ಜಾಗತಿಕ ಐಕಾನ್ ಮೋದಿ ನೇತೃತ್ವದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ದೇಶದ ಹಿಸಾಸಕ್ತಿ ಕಾಪಾಡುವಲ್ಲಿ ಹಾಗೂ ಪ್ರಗತಿ ಖಚಿತಪಡಿಸಲು ಪ್ರಧಾನಿ ಮೋದಿ ಅತ್ಯುತ್ತಮ ವ್ಯಕ್ತಿ ಎಂದ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ಭಾವಿಸಿದ್ದು, ಹೀಗಾಗಿ ಪಕ್ಷವನ್ನು ಗೆಲ್ಲಿಸಬೇಕೆಂಬ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್ ಶೀಟ್ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.
ನಾವು ಹಲವಾರು ವೈಫಲ್ಯಗಳನ್ನು ಪಟ್ಟಿ ಮಾಡಿದ್ದೇವೆ. ಅದಕ್ಕೆ ಕಾಂಗ್ರೆಸ್ ನಾಯಕರು ಸಮಾಧಾನಕರ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿ. ವಿರೋಧ ಪಕ್ಷದ ನಾಯಕರ ನೇಮಕಕ್ಕೂ ಚಾರ್ಜ್ ಶೀಟ್ ಗೂ ಯಾವುದೇ ಸಂಬಂಧವಿಲ್ಲ. ಸರ್ಕಾರ ಕ್ಯಾಶ್ ಪೋಸ್ಟಿಂಗ್ (ವರ್ಗಾವಣೆ) ಹಗರಣದಿಂದ ಮುಕ್ತವಾಗಬೇಕು, ಯಾರಿಗೂ ಉಪಯೋಗಕ್ಕೆ ಬಾರದ ವಂಚಕ ಯೋಜನೆಗಳ (ಐದು ಖಾತರಿ) ಬಿಟ್ಟು, ಗುತ್ತಿಗೆದಾರರಿಗೆ ಬಾಕಿ ಉಳಿಸಿ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
Advertisement