ಬಿಜೆಪಿ ಸದಸ್ಯರ ನಡುವೆ ಸಭಾತ್ಯಾಗ ಗೊಂದಲ: ಸಂವಹನ ಕೊರತೆ ಕಾರಣ ಎಂದ ಆರ್.ಅಶೋಕ್

ಬಿಜೆಪಿ ನಾಯಕರ ನಡುವಿನ ಗೊಂದಲ ಬೆಳಗಾವಿ ಅಧಿವೇಶನದಲ್ಲಿ ಬಹಿರಂಗವಾಗಿದ್ದು, ಈ ಬಗ್ಗೆ  ಕೆಲವು ಬಿಜೆಪಿ ಶಾಸಕರು ತಮ್ಮ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. 
ಆರ್.ಅಶೋಕ್
ಆರ್.ಅಶೋಕ್

ಬೆಳಗಾವಿ: ಬಿಜೆಪಿ ನಾಯಕರ ನಡುವಿನ ಗೊಂದಲ ಬೆಳಗಾವಿ ಅಧಿವೇಶನದಲ್ಲಿ ಬಹಿರಂಗವಾಗಿದ್ದು, ಈ ಬಗ್ಗೆ  ಕೆಲವು ಬಿಜೆಪಿ ಶಾಸಕರು ತಮ್ಮ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. 

ಸಭಾತ್ಯಾಗಕ್ಕೆ ಸಂಬಂಧಿಸಿದಂತೆ ತಮ್ಮ ಪಕ್ಷದ ಶಾಸಕರ ನಡುವಿನ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು, ಸಮನ್ವಯದ ಕೊರತೆ ಇದೆ ಎಂದು ಒಪ್ಪಿಕೊಂಡಿದ್ದಾರೆ. ಹಿಂದಿನ ಬೆಂಚುಗಳಲ್ಲಿ ಕುಳಿತಿರುವ ಪಕ್ಷದ ಸದಸ್ಯರಿಗೆ ಸಭಾತ್ಯಾಗದ ನಿರ್ಧಾರ ತಿಳಿಸಲಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲಿನ ಹಲ್ಲೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ರಕ್ಷಿಸಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಗುರುವಾರ ಬಿಜೆಪಿ ಆರೋಪಿಸಿತು ಮತ್ತು ಈ ಕುರಿತು ಗೃಹ ಸಚಿವರ ಉತ್ತರದಿಂದ ತೃಪ್ತಿರಾಗ ಬಿಜೆಪಿ ಸದಸ್ಯರು ಧರಣಿಗೆ ಮುಂದಾದರು. ಇದೇ ವೇಳೆ ಆರ್ ಅಶೋಕ್ ನೇತೃತ್ವದಲ್ಲಿ ಕೆಲವು ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು.

"ಬಿಜೆಪಿಯಲ್ಲಿ ಗೊಂದಲದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ನಾನು ಆ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತೇನೆ - ನಿನ್ನೆ ನಾವು ಪ್ರತಿಭಟನೆ ನಡೆಸಬೇಕೇ ಅಥವಾ ಸದನದಿಂದ ಹೊರನಡೆಯಬೇಕೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ, ನಮ್ಮ ಪಕ್ಷದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಾವು ಪ್ರತಿಭಟನೆ ನಡೆಸಿದರೆ ಬರಗಾಲದ ಕುರಿತ ಚರ್ಚೆಗೆ ಅಡ್ಡಿಯಾಗುತ್ತದೆ. ಸಭಾತ್ಯಾಗ ಮಾಡೋಣ ಎಂದು ಹೇಳಿದರು.

ಯತ್ನಾಳ್ ಅವರ ಸಲಹೆಯನ್ನು ತಾವು ಸದನದ ಮುಂದಿನ ಸಾಲಿನಲ್ಲಿ ಕುಳಿತಿದ್ದ ಇತರ ಹಿರಿಯ ಬಿಜೆಪಿ ಶಾಸಕರಾದ ಸಿ ಎನ್ ಅಶ್ವಥ್ ನಾರಾಯಣ್, ಸಿ ಸಿ ಪಾಟೀಲ್, ಆರಗ ಜ್ಞಾನೇಂದ್ರ, ಸುರೇಶ್ ಕುಮಾರ್ ಮತ್ತು ವಿಜಯೇಂದ್ರ ಅವರೊಂದಿಗೆ ಚರ್ಚಿಸಿದೆ ಮತ್ತು ಅದರಂತೆ ಸಭಾತ್ಯಾಗ ಮಾಡಲಾಯಿತು ಎಂದರು.

ವಿಧಾನಸಭೆಯಲ್ಲಿ ಬರ ಮತ್ತು ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶ ನೀಡುವ ಸದುದ್ದೇಶದಿಂದ ಸದನದೊಳಗೆ ಪ್ರತಿಭಟನೆ ಮಾಡುವ ಬದಲು ಸಭಾತ್ಯಾಗ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ ಹಿಂದೆ ಕುಳಿತಿರುವ ಪಕ್ಷದ ಶಾಸಕರಿಗೆ ಈ ವಿಚಾರ ತಿಳಿಸುವಲ್ಲಿ ಸಮನ್ವಯದ ಕೊರತೆಯಿದೆ. ಮುಂದಿನ ದಿನಗಳಲ್ಲಿ ನಾವು ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಅಶೋಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com