ಬಿಜೆಪಿಯ ಪಾಪದ ಪುರಾಣ ಇದೆಯೇ ಹೊರತು ಸಾಧನೆಯಿಲ್ಲ; ಕಾಂಗ್ರೆಸ್ ನೀಡಿದ ಲಿಸ್ಟ್ ಇಲ್ಲಿದೆ...

ಕರ್ನಾಟಕ ವಿಧಾನಸಭಾ ಚುನಾವಣೆಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯವಿದೆ. ಬಿಜೆಪಿ ಆಂತರಿಕ ಸಮಸ್ಯೆಗಳಿಂದ ಸುತ್ತುವರಿದಿದೆ. ಆದರೆ ಕಾಂಗ್ರೆಸ್ ಇತರರ ಕಷ್ಟದ ಲಾಭ ಪಡೆಯಲು ಪ್ರಯತ್ನಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಜೆಪಿಗೆ ಪಾಪಗಳ ಪುರಾಣ ಇದೆಯೇ ಹೊರತು ಯಾವುದೇ ಹೇಳಿಕೊಳ್ಳುವಂತ ಸಾಧನೆಗಳ ಪುರಾಣವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಸಾವಿರಾರು ಕೋಟಿಯಲ್ಲಿ ಶಾಸಕರ ಖರೀದಿ, ಸಿಡಿ ಬ್ಲಾಕ್‌ಮೇಲ್‌ನಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ. ಸರ್ಕಾರದಲ್ಲಿ ಬಿಜೆಪಿ vs ಬಿಜೆಪಿ ಕಿತ್ತಾಟ, ಅರಾಜಕತೆ, ಭ್ರಷ್ಟಾಚಾರ ನಿರಂತರವಾಗಿದೆ. ಸರ್ಕಾರವನ್ನು ತಳ್ಳಿಕೊಂಡು ಹೋಗ್ತಿದೇವೆ. ಮ್ಯಾನೇಜ್ ಮಾಡ್ತಿದೇವೆ ಎಂದ ಮಾಧುಸ್ವಾಮಿಯವರ ಹೇಳಿಕೆಯೇ ಇದಕ್ಕೆ ಸಾಕ್ಷಿ ಎಂದು ಕಿಡಿಕಾರಿದೆ.

ಮುಂದುವರಿದು, 2019ರಲ್ಲಿ 'ಆಪರೇಷನ್ ಕಮಲ'ದ ಮೂಲಕ ಅಕ್ರಮವಾಗಿ ಸರ್ಕಾರ ರಚಿಸಿದ ಬಿಜೆಪಿಯು ಮೂರೂವರೆ ವರ್ಷಗಳಲ್ಲಿ ಮಾಡಿರುವ ಅಕ್ರಮಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪುಟಗಳೇ ಸಾಲುವುದಿಲ್ಲ ಎಂದು ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ನೀಡಿರುವ ಪಟ್ಟಿಯಲ್ಲೇನಿದೆ?

*  40 ಪರ್ಸೆಂಟ್ ಸರ್ಕಾರವೆಂದೇ ಕುಖ್ಯಾತಿ ಪಡೆದಿರುವ ಬಿಜೆಪಿ ಸರ್ಕಾರ 1.5 ಲಕ್ಷ ಕೋಟಿ ರೂಗಳಷ್ಟು ಜನರ ತೆರಿಗೆ ಹಣವನ್ನು ಗುಳುಂ ಮಾಡಿದೆ!

* ಹಾಲು, ಮೊಸರಿನಿಂದ ಹಿಡಿದು ಎಲ್‌ಪಿಜಿ ಸಿಲಿಂಡರ್, ಪೆಟ್ರೋಲ್ ಬೆಲೆಗಳು ಗಗನಕ್ಕೇರಿದ್ದು, ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ

* ರೈತರ ಆದಾಯ ದುಪ್ಪಟ್ಟು ಮಾಡುವ ಬದಲು ರೈತರ ಆತ್ಮಹತ್ಯೆಯಲ್ಲಿ ರಾಜ್ಯವನ್ನು ದೇಶದಲ್ಲಿಯೇ 2ನೇ ಸ್ಥಾನಕ್ಕೆ ಕೊಂಡೊಯ್ದಿದೆ ಬಿಜೆಪಿ ಸರ್ಕಾರ

* ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ, 2.52 ಲಕ್ಷ ಸರ್ಕಾರಿ ಉದ್ಯೋಗಗಳನ್ನು ತನ್ನ ಹಣದ ದುರಾಸೆಗೆ ಖಾಲಿ ಉಳಿಸಿಕೊಂಡಿದೆ ಬಿಜೆಪಿ

* ಕೋವಿಡ್ ಸಮಯದಲ್ಲಿ ಜನರ ಹೆಣಗಳ ಮೇಲೆ ಹಣ ಮಾಡಿ, ಸರ್ಕಾರದ ಖಜಾನೆಯನ್ನು ಖಾಲಿ ಮಾಡಿ, ಕರ್ನಾಟಕದ ಮೇಲೆ 5.18 ಲಕ್ಷ ಕೋಟಿ ರೂ. ಸಾಲ ಹೊರಿಸಿದೆ!

* ಮಕ್ಕಳ ಶೂ, ಸಾಕ್ಸ್ ಮತ್ತು ತಿನ್ನುವ ಮೊಟ್ಟೆಯನ್ನೂ ಲೂಟಿ ಹೊಡೆದ 40 ಪರ್ಸೆಂಟ್ ಸರ್ಕಾರದ ನಿರ್ಲಕ್ಷ್ಯದಿಂದ 10.12 ಲಕ್ಷ ಮಕ್ಕಳು ಶಾಲೆ ಬಿಡುವಂತಾಗಿದೆ

* 'ಬಾಡಿ ಹೋಗಿದೆ ಕಮಲದ ಭರವಸೆಗಳು' - ಶೇ 90ರಷ್ಟು ಭರವಸೆಗಳನ್ನು ಈಡೇರಿಸದ 40 ಪರ್ಸೆಂಟ್ ಸರ್ಕಾರ

ಕಾಂಗ್ರೆಸ್ ಮಾಡಿರುವ ಇನ್ನಷ್ಟು ಟ್ವೀಟ್‌ಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com