ಚುನಾವಣಾ ತಂತ್ರದ ಬಜೆಟ್ ರಾಜ್ಯದ ಸಾಲದ ಹೊರೆಯನ್ನು ಹೆಚ್ಚಿಸಲಿದೆ: ಕಾಂಗ್ರೆಸ್
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಫೆ.17ರಂದು 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಲು ಮುಂದಾಗಿದ್ದಾರೆ, ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ದೊಡ್ಡ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.
ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ಆದಾಯವನ್ನು ನಿರೀಕ್ಷಿಸುತ್ತಿರುವ ಬೊಮ್ಮಾಯಿ ಅವರು, ಈ ಬಾರಿಯ ಬಜೆಟ್ ಗಾತ್ರವನ್ನು ಹೆಚ್ಚಿಸುವ ಸಾಧ್ಯತೆಗಳಿದ್ದು, ಇದು ನಿಸ್ಸಂಶಯವಾಗಿ ಚುನಾವಣಾ ವರ್ಷದ ಬಜೆಟ್ ಆಗಿರುತ್ತದೆ ಮತ್ತು ಬಿಜೆಪಿ ಚುನಾವಣಾ ಪ್ರಣಾಳಿಕೆಯ ನೋಟವನ್ನು ಹೊಂದಿರುತ್ತದೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕೃತ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್, ಚುನಾವಣಾ ತಂತ್ರ ಹೊಂದಿರುವ ಬಜೆಟ್ ರಾಜ್ಯದ ಸಾಲದ ಹೊರೆಯನ್ನು ಹೆಚ್ಚಿಸಲಿದೆ ಎಂದು ಹೇಳಿದೆ.
ಕಳೆದ ವರ್ಷ ಸಿಎಂ ಬೊಮ್ಮಾಯಿಯವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದ್ದರು, ಸರ್ಕಾರ ಹೆಚ್ಚು ಸಾಲ ಮಾಡುತ್ತಿದೆ ಎಂದು ಹೇಳಿದ್ದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಬಿಜೆಪಿ ಸರಕಾರ ಈಗಾಗಲೇ ರಾಜ್ಯದ ಸಾಲದ ಹೊರೆಯನ್ನು 2.5 ಲಕ್ಷ ಕೋಟಿಯಿಂದ 5 ಲಕ್ಷ ಕೋಟಿಗೆ ಹೆಚ್ಚಿಸಿದೆ. ಈ ಬಾರಿ ಚುನಾವಣಾ ಗಿಮಿಕ್ ಬಜೆಟ್ ಮಂಡಿಸಿ, ಸಾಲಜ ಹೊರೆಯನ್ನು ಮತ್ತಷ್ಟು ಹೆಚ್ಚಿಸಲು ಹೊರಟಿದ್ದಾರೆ. ಸರ್ಕಾರ ದೊಡ್ಡ ಬಜೆಟ್ ಮಂಡಿಸಿದರೂ ಜನ ನಂಬುವುದಿಲ್ಲ. 2018ರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ 10ರಷ್ಟು ಭರವಸೆಯನ್ನೂ ಈಡೇರಿಸಿಲ್ಲ. ಇದೀಗ ಜನರನ್ನು ಮರುಳು ಮಾಡಲು ಮಾತ್ರ ಪ್ರಯತ್ನಿಸುತ್ತಿದ್ದಾರೆಂದು ಹೇಳಿದ್ದಾರೆ.