ಲೋಕಸಭಾ ಚುನಾವಣೆ ಮೇಲೆ ಕಣ್ಣು: ಮನೆ-ಮನೆಗೆ ತೆರಳಿ ಕಾಂಗ್ರೆಸ್ ವೈಫಲ್ಯ ಕುರಿತು ಜಾಗೃತಿ ಮೂಡಿಸಲು ಬಿಜೆಪಿ ಮುಂದು!

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿರುವ ಬಿಜೆಪಿ ಮುಂಬರುವ ಲೋಕಸಭೆ, ಪಂಚಾಯಿತಿ ಚುನಾವಣೆ ಮೂಲಕ ಮತ್ತೆ ಪುಟಿದೇಳುವ ಆಶಯದಲ್ಲಿದ್ದು, ಚುುನಾವಣೆಯಲ್ಲಿ ಗೆಲುವು ಸಾಧಿಸಲು ತಂತ್ರ ರೂಪಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿರುವ ಬಿಜೆಪಿ ಮುಂಬರುವ ಲೋಕಸಭೆ, ಪಂಚಾಯಿತಿ ಚುನಾವಣೆ ಮೂಲಕ ಮತ್ತೆ ಪುಟಿದೇಳುವ ಆಶಯದಲ್ಲಿದ್ದು, ಚುುನಾವಣೆಯಲ್ಲಿ ಗೆಲುವು ಸಾಧಿಸಲು ತಂತ್ರ ರೂಪಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಒಂಬತ್ತು ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ಆಡಳಿತದ ಸಾಧನೆಗಳನ್ನು ಜನಪ್ರಿಯಗೊಳಿಸಲು ಬಿಜೆಪಿ ಮುಂದಾಗಿದೆ. ಇದರ ಜೊತೆಗೆ ಕಾಂಗ್ರೆಸ್ ಪಕ್ಷದ ವೈಫಲ್ಯಗಳನ್ನು ಹಿಡಿದು ಮನೆಮನೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಅಶ್ವತ್ಥ್ ನಾರಾಯಣ್ ಅವರು, ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಕುರಿತು ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರ ನೈತಿಕತೆಯನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ನಾಯಕರು ಸೋತಿದ್ದಾರೆಯೇ ವಿನಃ ಪಕ್ಷದ ಕಾರ್ಯಕರ್ತರಲ್ಲ. ನಾನು ಸೋತಿದ್ದೇವೆ ನಿಜ. ಆದರೆ, ನಮ್ಮ ವಿಶ್ವಾಸ ಸೋತಿಲ್ಲ ಎಂದು ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನವನ್ನು ನೀಡಲಾಗಿದೆ.ಕರ್ನಾಟಕದಲ್ಲಿನ ಸೋಲು ಆಕಸ್ಮಿಕ ಎಂದು ಸಾಬೀತುಪಡಿಸಲು ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ ಮರಳಿ ಗೆಲ್ಲುವ ಸಮಯ ಬಂದಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಮಾತನಾಡಿ, ಅತಿಯಾದ ಆತ್ಮವಿಶ್ವಾಸ ಮತ್ತು ಆಡಳಿತ ವಿರೋಧಿಗಳನ್ನು ಎದುರಿಸಲು ನಮ್ಮ ತಂತ್ರಘಳು ವಿಫಲವಾದವು, ಇದೇ ಬಿಜೆಪಿ ಸೋಲಿಗೆ ಕಾರಣವಾಯಿತು. ಜನರು ಇದೀಗ ಕಾಂಗ್ರೆಸ್ ಅನ್ನು ಆಯ್ಕೆ ಮಾಡಿದ್ದಾರೆ, ಪಕ್ಷದ ಸೋಲು ನನ್ನನ್ನು ಚಿಂತೆಗೊಳಗಾಗುವಂತೆ ಮಾಡಿಲ್ಲ. ಬದಲಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲರಾದ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿದ್ದು ಬೇಸರ ತರಿಸಿದೆ ಎಂದರು.

ಇದೇ ವೇಳೆ ಅಂತರಾಷ್ಟ್ರೀಯ ಯೋಗ ದಿನದಂದು ವಿಶ್ವವನ್ನು ಮುನ್ನಡೆಸಿದ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ ಅವರು, ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರು ಮೂರನೇ ಅವಧಿಗೆ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿ ಬರಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದೆ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪದ ವಿರುದ್ಧ ಕಿಡಿಕಾರಿದರು.

13 ಬಾರಿ ಬಜೆಟ್ ಕೊಟ್ಟ ಕೂಡಲೇ ಗದ್ದೆಯಲ್ಲಿ ಭತ್ತ ಬೆಳೆದು ಅಕ್ಕಿ ಕೊಡಲು ಆಗುವುದಿಲ್ಲ. ಕುಣಿಯಲಾರದವನು ನೆಲಡೊಂಕು ಅಂದನಂತೆ. ಹಾಗೆ ಏನೇನೋ ಸಬೂಬು ಹೇಳುತ್ತಿದ್ದಾರೆ. ಅಕ್ಕಿ ಕೊಡುತ್ತೇನೆ ಎಂದು ಹೇಳುವಾಗ ಇವರಿಗೆ ಪರಿಜ್ಞಾನ ಇರಲಿಲ್ವಾ? ನನಗೂ, ನಿಮಗೂ ನಮ್ಮ ಮನೆಯವರಿಗೂ, ನಿಮ್ಮ ಮನೆಯವರಿಗೂ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಟವಲ್ ಹೆಗಲಿನಿಂದ ಎಲ್ಲೋಯ್ತು? ಏನಾದ್ರೂ ಆಗ್ಲಿ ಕೊಡ್ತೀನಿ ಎಂದು ದೊಂಬರ ಲಾಗ ಹಾಕಿದ್ದರು. ಒಬ್ಬ ಸಿಎಂ ಆಗುವವನಿಗೆ ಮುಂದಾಲೋಚನೆ ಇರಬೇಕು ಎಂದು ವಾಗ್ದಾಳಿ ನಡೆಸಿದರು.

ಅಕ್ಕಿ ಮಾರಾಟ ಮಾಡಬಾರದು ಎಂಬ ನೀತಿಯನ್ನು ಕೇವಲ ಕರ್ನಾಟಕಕ್ಕೆ ಮಾತ್ರ ಮಾಡಿದ್ದಲ್ಲ. ಇದು ದೇಶದಲ್ಲಿ ಆಹಾರ ಭದ್ರತೆಗೆ ಕೇಂದ್ರ ಕೈಗೊಂಡ ನಿಲುವು. ಇದು ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಕೇಂದ್ರ ಕೈಗೊಂಡ ನಿರ್ಧಾರ. ರಾಜ್ಯಕ್ಕೆ ಅಕ್ಕಿ ಕೊಡಬಾರದೆಂದು ಹೇಳುವ ನೀಚ ಬುದ್ದಿ ರಾಜ್ಯ ಬಿಜೆಪಿ ನಾಯಕರಿಗಿಲ್ಲ. ಕಾಂಗ್ರೆಸ್‌ನವರಂತೆ ಚೀಪ್ ಪಾಲಿಟಿಕ್ಸ್ ಮಾಡಿ ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ನಾವು ಮಾಡಲ್ಲ. ಕರ್ನಾಟಕದ ಪ್ರತಿಯೊಬ್ಬ ನಾಗರಿಕನಿಗೂ ಅಕ್ಕಿ ಸಿಗಬೇಕೆಂಬುದು ಬಿಜೆಪಿ ನಿಲುವು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com