ಮಗನ ರಾಜಕೀಯ ಪ್ರವೇಶಕ್ಕೆ ಬಿಜೆಪಿ ಅಡ್ಡಗಾಲು: ನಡ್ಡಾ ರಥಯಾತ್ರೆ ಪಂಕ್ಚರ್ ಮಾಡಿದ್ರಾ ಸೋಮಣ್ಣ? ವಸತಿ ಸಚಿವರ ಚಿತ್ತ ಕಾಂಗ್ರೆಸ್ ನತ್ತ!

ಬಿಜೆಪಿ ಮೇಲೆ ಮುನಿಸಿಕೊಂಡಿರುವ ವಿ.ಸೋಮಣ್ಣ ಚಾಮರಾಜನಗರದಲ್ಲಿ ನಡೆದ ಜೆ.ಪಿ ನಡ್ಡಾ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ.
ಸೋಮಣ್ಣ, ಅರುಣ್ ಸೋಮಣ್ಣ ಮತ್ತು ರುದ್ರೇಶ್
ಸೋಮಣ್ಣ, ಅರುಣ್ ಸೋಮಣ್ಣ ಮತ್ತು ರುದ್ರೇಶ್

ಬೆಂಗಳೂರು: ಬಿಜೆಪಿ ಮೇಲೆ ಮುನಿಸಿಕೊಂಡಿರುವ ವಿ.ಸೋಮಣ್ಣ ಚಾಮರಾಜನಗರದಲ್ಲಿ ನಡೆದ ಜೆ.ಪಿ ನಡ್ಡಾ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ.

ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ‘ವಿಜಯ ಸಂಕಲ್ಪ ರಥಯಾತ್ರೆ’ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಹ ಭಾಗಿಯಾಗಿದ್ದರು. ಆದರೆ ಚಾಮರಾಜನಗರ ಉಸ್ತುವಾರಿ ಸಚಿವ ವಿ.ಸೋಮಣ್ಣ ಗೈರು ಆಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸೋಮಣ್ಣ ಅವರಿಗೆ ಕಾಂಗ್ರೆಸ್  ಬಿಗ್ ಆಫರ್ ಸಹ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಚಾಮರಾಜನಗರ ಉಸ್ತುವಾರಿಯಾಗಿರುವ ವಿ.ಸೋಮಣ್ಣ ಇಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬೆಂಗಳೂರಿನವರು ಆದ್ರೂ ಸ್ಥಳೀಯವಾಗಿ ತಮ್ಮದೇ ಆದ ಪ್ರಾಬಲ್ಯವನ್ನು ವಿ.ಸೋಮಣ್ಣ ಹೊಂದಿದ್ದಾರೆ. ಚಾಮರಾಜನಗರದಲ್ಲಿ ತಮ್ಮದೇ ಕಾರ್ಯಕರ್ತರನ್ನು ವಿ.ಸೋಮಣ್ಣ ಹೊಂದಿದ್ದಾರೆ.

ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ವಿವಿಧ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿಯೂ ತಮ್ಮನ್ನ ಗಣನೆಗೆ ತೆಗೆದುಕೊಂಡಿಲ್ಲ ಎಂಬ ಅಸಮಾಧಾನ ವಿ ಸೋಮಣ್ಣ ಅವರಿಗಿದೆ. ಇತ್ತ ಈ ಬಾರಿ ಚಾಮರಾಜಗರದಲ್ಲಿ ಪ್ರಬಲ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಕೆಆರ್ ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಅವರನ್ನು ಕ್ಷೇತ್ರಕ್ಕೆ ಕಳುಹಿಸಿ ಪ್ರಚಾರ ಮಾಡಿಸಲಾಗುತ್ತಿದೆ. ಹೈಕಮಾಂಡ್ ಒಪ್ಪಿಗೆ ನೀಡಿದ್ರೆ ವಿ.ಸೋಮಣ್ಣ ಚಾಮರಾಜನಗರದಲ್ಲಿ ಸ್ಪರ್ಧೆ ನಡೆಸಲು ಸಿದ್ಧರಾಗಿದ್ದಾರೆ.

ಚಾಮರಾಜನಗರದಲ್ಲಿ ತಾವು ಸ್ಪರ್ಧಿಸಿ ಗೋವಿಂದರಾಜನಗರ ಕ್ಷೇತ್ರವನ್ನು ತಮ್ಮ ಪುತ್ರ ಅರುಣ್ ಸೋಮಣ್ಣ ಅವರಿಗೆ ಬಿಟ್ಟು ಕೊಡುವ ನಿರ್ಧಾರವನ್ನ ಮಾಡಿದ್ದರು, ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಂ.ರುದ್ರೇಶ್ ಚಾಮರಾಜನಗರ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿರುವುದು ವಿ.ಸೋಮಣ್ಣ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ವಿಜಯ ಸಂಕಲ್ಪ ಯಾತ್ರೆಯ ಈ ಕಾರ್ಯಕ್ರಮದ ಉಸ್ತುವಾರಿಯನ್ನು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ವಹಿಸಲಾಗಿದೆ. ತಾವು ಉಸ್ತುವಾರಿ ಇರುವಾಗ ಹೊರ ಜಿಲ್ಲೆಯವರಿಗೆ ಉಸ್ತುವಾರಿ ನೀಡಲಾಗಿದೆ. ಆ ಮೂಲಕ ತಮ್ಮನ್ನು ಕಡೆಗಣಿಸಲಾಗಿದೆ ಎಂಬುದು.

ಕಾರ್ಯಕ್ರಮಕ್ಕೆ ಸೋಮಣ್ಣ ಗೈರಾದ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಅನಾರೋಗ್ಯ ಹಿನ್ನೆಲೆ ಕಾರ್ಯಕ್ರಮಕ್ಕೆ ಬಂದಿಲ್ಲ. ಇದರ ಹೊರತಾಗಿ ಬೇರೆ ಯಾವ ಕಾರಣವೂ ಇಲ್ಲ. ಈ ಹಿಂದೆ ನಾನೂ ಸಹ ಹಲವು ಬಾರಿ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯಕ್ರಮಕ್ಕೆ ಗೈರಾಗಿದ್ದೇನೆ. ಕಾರ್ಯಕ್ರಮಕ್ಕೆ ಬರದೇ ಇದ್ರೆ ಅದನ್ನು ಅಸಮಾಧಾನ ಅಥವಾ ಮುಸಕಿನ ಗುದ್ದಾಟ ಎಂದು ವ್ಯಾಖ್ಯಾನ ಮಾಡಬಾರದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com