2023 ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ: ವಸತಿ ಯೋಜನೆಗಳ ಮೂಲಕ ಮತದಾರರ ಓಲೈಸಲು ಬಿಜೆಪಿ ಮುಂದು!

2023ರ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ರಾಜ್ಯ ಬಿಜೆಪಿಯು ವಸತಿ ಯೋಜನೆಗಳ ಮೂಲಕ ಮತದಾರರ ಗಮನ ಸೆಳೆಯಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ರಾಜ್ಯ ಬಿಜೆಪಿಯು ವಸತಿ ಯೋಜನೆಗಳ ಮೂಲಕ ಮತದಾರರ ಗಮನ ಸೆಳೆಯಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಮಹತ್ವಾಕಾಂಕ್ಷೆಯ 2 ವಸತಿ ಯೋಜನೆಗಳನ್ನು ಡಿಸೆಂಬರ್ ನಲ್ಲಿ ಪ್ರಾರಂಭಿಸಲು ಬಿಜೆಪಿ ಸಿದ್ಧತೆ ನಡೆಸಿದ್ದು, ಡಿಸೆಂಬರ್ 2 ರಂದು ಪ್ರಧಾನಿ ಮೋದಿಯವರು ಈ ಯೋಜನೆಗಳಿಗೆ ಉದ್ಘಾಟನೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಬಡವರಿಗೆ 1 ಲಕ್ಷ ನಿರ್ಮಿಸುವ ಯೋಜನೆ ಮತ್ತು ಬೆಂಗಳೂರು ಹೊರವಲಯದಲ್ಲಿರುವ ಸೂರ್ಯನಗರಲ್ಲಿರುವ ವಸತಿ ಟೌನ್ ಶಿಪ್ ಬಿಜೆಪಿಯ ಮಹತ್ವಾಕಾಂಕ್ಷೆಯ ಯೋಜನೆಗಳಾಗಿವೆ ಎಂದು ಹೇಳಲಾಗುತ್ತಿದೆ.

ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಅಡಿಯಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಕೆಲವು ಫಲಾನುಭವಿಗಳು ಯೋಜನೆಯಡಿ ಮನೆಗಳನ್ನು ಪಡೆಯಲಿದ್ದಾರೆ. ಸೂರ್ಯನಗರ ಯೋಜನೆಯಡಿ 30 ಸಾವಿರ ಕುಟುಂಬಗಳಿಗೆ ನಿವೇಶನ ಸಿಗಲಿದೆ.

ಈ ಸಂಬಂಧ ವಸತಿ ಸಚಿವ ವಿ.ಸೋಮಣ್ಣ ಅವರು ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ಮೋದಿಯವರಿಂದ ಯೋಜನೆಗಳ ಉದ್ಘಾಟಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

2016ರಲ್ಲಿ ಸಿದ್ದರಾಮಯ್ಯ ಸರ್ಕಾರ ಒಂದು ಲಕ್ಷ ವಸತಿ ಯೋಜನೆಯನ್ನು ಘೋಷಿಸಿತ್ತು. ಅಂದಿನಿಂದ ಹಾಲಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ನಾಲ್ವರು ಮುಖ್ಯಮಂತ್ರಿಗಳು ಮತ್ತು ನಾಲ್ವರು ವಸತಿ ಸಚಿವರಾದ ಎಂ.ಕೃಷ್ಣಪ್ಪ, ಯು.ಟಿ.ಖಾದರ್, ಎಂಟಿಬಿ ನಾಗರಾಜ್ ಮತ್ತು ವಿ.ಸೋಮಣ್ಣ ಅಧಿಕಾರಕ್ಕೆ ಬಂದಿದ್ದಾರೆ, ಆದರೆ, ಯೋಜನೆ ಉದ್ಘಾಟನೆ ಮಾಡಲು ಸಾಧ್ಯವಾಗಿರಲಿಲ್ಲ.

ಕಳೆದ ವರ್ಷ ಮೇನಲ್ಲಿ ಬಿಎಸ್ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ವಸತಿ ಸಚಿವರಾಗಿದ್ದ ಸೋಮಣ್ಣ ಅವರು. ಆಗಸ್ಟ್ 15 ರಂದು ಮೊದಲ ಬ್ಯಾಚ್ 6,000 ಮನೆಗಳನ್ನು ಹಸ್ತಾಂತರಿಸುವುದಾಗಿ ಘೋಷಿಸಿದ್ದರು. ಆದರೆ, ಅದೂ ಸಾಧ್ಯವಾಗಲಿಲ್ಲ.

535 ಎಕರೆಯಲ್ಲಿ ಮನೆಗಳು ನಿರ್ಮಾಣವಾಗುತ್ತಿದ್ದು, ಪ್ರಸ್ತುತ, 8,000 ಕ್ಕೂ ಹೆಚ್ಚು ಫ್ಲ್ಯಾಟ್‌ಗಳು ಬಹುತೇಕ ಪೂರ್ಣಗೊಂಡಿವೆ ಮತ್ತು ಹಸ್ತಾಂತರಕ್ಕೆ ಸಿದ್ಧವಾಗಿವೆ. ಇನ್ನೂ 52,000 ಫ್ಲ್ಯಾಟ್‌ಗಳು ಪೂರ್ಣಗೊಳ್ಳುವ ವಿವಿಧ ಹಂತಗಳಲ್ಲಿವೆ ಎಂದು ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ.

ನವೆಂಬರ್ 11 ರಂದು ಪ್ರಧಾನಿ ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿದ್ದು, ಈ ವೇಳೆ ಯೋಜನೆ ಉದ್ಘಾಟನೆ ಮಾಡುವ ಪ್ರಸ್ತಾವನೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ, ಅವರ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅದನ್ನು ಡಿಸೆಂಬರ್‌ಗೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.

ಯೋಜನೆಯಲ್ಲಿ ಯಾವುದೇ ಲೋಪದೋಷಗಳು ಇರದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಯೋಜನೆ ಕುರಿತು ಉತ್ಸುಕರಾಗಿರುವ ಸಿಎಂ ಬೊಮ್ಮಾಯಿ ಅವರೇ ಯೋಜನೆಯನ್ನು ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಸೂರ್ಯನಗರ ಹಂತ 3 ಮತ್ತು 4ರಲ್ಲಿ 1,938 ಎಕರೆ ಪ್ರದೇಶದಲ್ಲಿ ಭೂಮಿ ಒದಗಿಸಲಾಗುತ್ತಿದೆ, ಡಿಸೆಂಬರ್ ನಲ್ಲಿ ಈ ಯೋಜನೆ ಉದ್ಘಾಟನೆಯಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಪ್ರದೇಶದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಕಾಮಗಾರಿಯು ಫೆಬ್ರವರಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಡಿಸೆಂಬರ್ ನಲ್ಲಿ ಯೋಜನೆಯು ಸಾಂಕೇತಿಕವಾಗಿ ಉದ್ಘಾಟನೆಗೊಂಡರೂ, ಫೆಬ್ರವರಿಯಲ್ಲಿ ಸೈಟ್ ಗಳ ಹಂಚಿಕೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com