ಆತಂಕವಾದಿಗಳನ್ನು ರಕ್ಷಿಸುವ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ನಾಶ: ಪ್ರಧಾನಿ ಮೋದಿ

ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದರೆ ಜನರ ಬದುಕು ಕೂಡ ಅಸ್ಥಿರವಾಗಲಿದೆ, ಹೀಗಾಗಿ ಬಿಜೆಪಿಗೆ ಬಹುಮತ ನೀಡಿ ಕರ್ನಾಟಕಕ್ಕೆ ಅಭಿವೃದ್ಧಿಪರ ಕೆಲಸ ಮಾಡುವ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ಮುಲ್ಕಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಮುಲ್ಕಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಮುಲ್ಕಿ: ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದರೆ ಜನರ ಬದುಕು ಕೂಡ ಅಸ್ಥಿರವಾಗಲಿದೆ, ಹೀಗಾಗಿ ಬಿಜೆಪಿಗೆ ಬಹುಮತ ನೀಡಿ ಕರ್ನಾಟಕಕ್ಕೆ ಅಭಿವೃದ್ಧಿಪರ ಕೆಲಸ ಮಾಡುವ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.

ವಿಧಾನಸಭೆ ಚುನಾವಣೆಗೆ ಕೇವಲ ಇನ್ನೊಂದು ವಾರ ಬಾಕಿಯಿರುವುದು. ಈ ಸಂದರ್ಭದಲ್ಲಿ ಚುರುಕಿನಿಂದ ಪ್ರಚಾರದಲ್ಲಿ ತೊಡಗಿರುವ ಪ್ರಧಾನ ಮಂತ್ರಿಗಳು ಕೊನೆಯ ಸುತ್ತಿನಲ್ಲಿ ಕರ್ನಾಟಕ ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಬಂದರೆ ಏನೇನು ಉಪಯೋಗಗಳಿವೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಜೀವನಕ್ಕೆ, ಅಭಿವೃದ್ಧಿಗೆ ಮಾರಕ ಎಂದು ಹೇಳುತ್ತಿದ್ದಾರೆ.

ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಕಾರ್ನಾಡಿನ ಗುಂಡಾಲು ಪ್ರದೇಶದಲ್ಲಿ ಬಿಜೆಪಿ ಸಾರ್ವಜನಿಕ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ಕಾಂಗ್ರೆಸ್ ಸರ್ಕಾರವಿರುವ ರಾಜಸ್ಥಾನದಲ್ಲಿ ಪ್ರಗತಿಯೇನು ಆಗಿಲ್ಲ, ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಸರ್ವನಾಶ ಆಗುವುದು ಖಂಡಿತ. ತುಷ್ಟೀಕರಣ ರಾಜಕಾರಣ ಕಾಂಗ್ರೆಸ್‌ನ ಏಕೈಕ ನೀತಿಯಾಗಿದೆ. ರಾಜಸ್ಥಾನದಲ್ಲಿ ವರ್ಷಗಳ ಹಿಂದೆ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯ ಎಲ್ಲಾ ಅಪರಾಧಿಗಳನ್ನು ಆರೋಪ ಮುಕ್ತಗೊಳಿಸಲಾಯಿತು, ಕಾಂಗ್ರೆಸ್ ಶಾಂತಿಯ ವಿರೋಧಿ, ಕಾಂಗ್ರೆಸ್ ಅಭಿವೃದ್ಧಿಯ ವಿರೋಧಿ ಕಾಂಗ್ರೆಸ್ ಆತಂಕವಾದಿಗಳ ರಕ್ಷಣೆಗೆ ನಿಲ್ಲುತ್ತದೆ, ಕೇವಲ ತುಷ್ಟೀಕರಣ ಮಾಡುತ್ತದೆ. ಎಂದು ಆರೋಪಿಸಿದರು.

ಪರಶುರಾಮ ಕ್ಷೇತ್ರವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳುಭಾಷೆ ಪ್ರಧಾನವಾಗಿರುವುದರಿಂದ ಎನ್ನ ಮೋಕೆದ ತುಳುವಪ್ಪೆ ಜೋಕುಲೇಗ್ ಸೊಲ್ಮೆಲು ಎಂದು ತುಳುವಿನಲ್ಲಿಯೇ ಪ್ರಧಾನ ಮೋದಿ ಭಾಷಣ ಆರಂಭಿಸಿದಾಗ ನೆರೆದಿದ್ದವರು ಕರತಾಡದಿಂದ ಮೆಚ್ಚುಗೆ ವ್ಯಕ್ತಪಡಿಸಿದರು. 

ಕರ್ನಾಟಕದ ಮೊದಲ ಬಾರಿಗೆ ಮತದಾರರು ತಮ್ಮ ಭವಿಷ್ಯವನ್ನು ಮಾತ್ರವಲ್ಲದೆ ಇಡೀ ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವವರು ಆಗಿರುತ್ತಾರೆ. ಅವರು ಸ್ವಾತಂತ್ರ್ಯ ಮತ್ತು ಸ್ಥಿರತೆಯ ಜೀವನವನ್ನು ನಡೆಸಬೇಕಾದರೆ ಕಾಂಗ್ರೆಸ್ ನ್ನು ಅಧಿಕಾರಕ್ಕೆ ಬರಲು ಬಿಡಬಾರದು. ಡೆಲ್ಲಿಯಲ್ಲಿ ಕುಳಿತ ಒಂದು ಕುಟುಂಬ ಕರ್ನಾಟಕವನ್ನು ನಂ.1 ಎಟಿಎಂ ಮಾಡಿಕೊಳ್ಳುವುದಕ್ಕೆ ಚಿಂತನೆ ನಡೆಸಿದೆ. ಇದಕ್ಕಾಗಿ ರಾಜ್ಯ ಕಾಂಗ್ರೆಸ್‌ನವರು ಮತ ಕೇಳುತ್ತಿದ್ದಾರೆ. ಕರ್ನಾಟಕದ ಜನರು ಮತ ಹಾಕುವ ಮುನ್ನ ಯೋಚನೆ ಮಾಡಬೇಕು ಎಂದರು.

ಪ್ರತಿ ಯೋಜನೆಯಲ್ಲಿ 85% ಕಮಿಷನ್ ಪಡೆಯುವ ಕಾಂಗ್ರೆಸ್ ಕರ್ನಾಟಕದ ಅಭಿವೃದ್ಧಿಯನ್ನು ದಶಕಗಳಷ್ಟು ಹಿಂದೆ ತೆಗೆದುಕೊಂಡು ಹೋಗಿದೆ. ಕಾಂಗ್ರೆಸ್ ಪಕ್ಷದಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಮತದಾನದ ದಿನ ದೂರವಿಲ್ಲ. ದೇಶದಲ್ಲಿ ಕರ್ನಾಟಕವನ್ನು ನಂ.1 ಮಾಡುತ್ತೇವೆ. ಇದು ಡಬಲ್‌ ಎಂಜಿನ್‌ ಸರ್ಕಾರದಿಂದ ಮಾತ್ರ ಸಾಧ್ಯ. ಕರ್ನಾಟಕಕ್ಕೆ ಮೂಲಸೌಕರ್ಯ ಒದಗಿಸುವ ಮೂಲಕ ಸೂಪರ್‌ಪವರ್‌ ರಾಜ್ಯವನ್ನಾಗಿ ಮಾಡಲಾಗುವುದು ಎಂದರು.

ಕಾಂಗ್ರೆಸ್​ ಅಭಿವೃದ್ಧಿ ಬಗ್ಗೆ ಯೋಚನೆ ಮಾಡುವುದಿಲ್ಲ: ಪಿಎಂ ಕಿಸಾನ್​ ಯೋಜೆಯ ಅಡಿ ನೀಡಲಾದ ಹಣ ಹೆಚ್ಚಿನದಾಗಿ ಮಹಿಳಾ ರೈತರಿಗೆ ದೊರೆತಿದೆ. ಅದೇ ರೀತಿ ಮುದ್ರಾ ಯೋಜನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ. ಗೂಡಿಸಲಿನಲ್ಲಿ ವಾಸಿಸುವ ಮಹಿಳೆಯರು ಇಂದು ಲಕ್ಷಾಧಿಪತಿಗಳಾಗಿದ್ದಾರೆ. ದೇಶದ ಮಕ್ಕಳು ಜಿ 20 ಬಗ್ಗೆ ಮಾತನಾಡುತ್ತಿದ್ದಾರೆ. ಜಿ 20ಯಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ದೆಹಲಿಯಲ್ಲಿ ಈ ಹಿಂದೆ ದೆಹಲಿಯಲ್ಲಿ ಕೂತಿದ್ದ ಸರ್ಕಾರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ.

ರಾಣಿ ಅಬ್ಬಕ್ಕ ರೀತಿಯ ನಮ್ಮ ಮಹಿಳೆಯರಲ್ಲೂ ಸಾಮರ್ಥ್ಯ ಇದೆ. ಕಾಂಗ್ರೆಸ್​ ಆಡಳಿತದಲ್ಲಿ ಮಹಿಳೆಯರಿಗೆ ಸುರಕ್ಷತೆ ಇರಲಿಲ್ಲ. ಮಹಿಳೆಯರಿಗಾಗಿ ಶೌಚಾಲಯ ಇರಲಿಲ್ಲ, ಓದಲು ಶಾಲೆಗಳಿರಲಿಲ್ಲ. ಗ್ಯಾಸ್​ ಕೊರತೆ ಇತ್ತು. ಆದರೆ  ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ.

ವಿಶ್ವದಲ್ಲೇ ಭಾರತದ ಕೀರ್ತಿ ಹೆಚ್ಚುತ್ತಿದೆ. ಜಗತ್ತಿನಾದ್ಯಂತ ಭಾರತದ ಗೌರವ ಹೆಚ್ಚಿದೆ. ಭಾರತದ ಗೌರವ ಜಗತ್ತಿನಾದ್ಯಂತ ಹೆಚ್ಚಿದ್ದು ನಿಮ್ಮ ಮತದಾನದಿಂದ. ನಿಮ್ಮ ಮತದಿಂದ ದೆಹಲಿಯಲ್ಲಿ ಸ್ಥಿರವಾದ ಸರ್ಕಾರ ನಿರ್ಮಾಣವಾಗಿದೆ. ಹೀಗೆ ಕರ್ನಾಟಕದ ಕೀರ್ತಿ ಹೆಚ್ಚಬೇಕಾದರೇ, ದೇಶದ ವಿವಿಧ ರಾಜ್ಯಗಳಲ್ಲಿ ಕರ್ನಾಟಕದ ಜೈಕಾರ ಆಗಬೇಕೆಂದರೇ ಬಿಜೆಪಿಗೆ ಮತ ಹಾಕಿ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಕರೆ ನೀಡಿದರು.

ದಕ್ಷಿಣ ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ನಂಬರ್​ ಒನ್​ ಸ್ಥಾನದಲ್ಲಿದೆ. ಹಾಗೇ ಕರ್ನಾಟಕವನ್ನು ಎಲ್ಲ ಕ್ಷೇತ್ರಗಳಲ್ಲಿ ನಂಬರ್​ ಒನ್​ ಮಾಡೋಣ. ರಾಜ್ಯವನ್ನು ವಿಕಾಸ ಕ್ಷೇತ್ರದಲ್ಲಿ ನಂಬರ್​ ಒನ್​ ಮಾಡೋಣ. ಆದರೆ ಕಾಂಗ್ರೆಸ್​ಗೆ ಏನು ಬೇಕಾಗಿದೆ. ಕಾಂಗ್ರೆಸ್​ಗೆ ರಾಜ್ಯವನ್ನು ಎಟಿಎಂ ಮಾಡಬೇಕೆಂದಿದೆ. ಜೆಡಿಎಸ್​ ಕೂಡ ಕಚ್ಚೆ-ಪಂಚೆ ಪಕ್ಷವಾಗಿದೆ ಎಂದು ಮೋದಿ ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com