ವಯಸ್ಸು, ಆರೋಗ್ಯ ಸಮಸ್ಯೆಯಿದ್ದರೂ ಡೋಂಟ್ ಕೇರ್: ಇಳಿ ವಯಸ್ಸಿನಲ್ಲೂ ಬತ್ತದ ಹಿರಿಯರ ರಣೋತ್ಸಾಹ!

ರಾಜ್ಯ ವಿಧಾನಸಭೆ ಚುನಾವಣೆ ಮತದಾನದ ಒಂದು ವಾರಕ್ಕಿಂತ ಕಡಿಮೆ ಅವಧಿಯಿರುವಾಗ, ಹಿರಿಯ ರಾಜಕೀಯ ನಾಯಕರು ತಮ್ಮ ವಯಸ್ಸು ಆರೋಗ್ಯ ಲೆಕ್ಕಿಸದೇ ರಾಜ್ಯಾದ್ಯಂತ ಪ್ರತಿದಿನ ಅನೇಕ ರ್ಯಾಲಿಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ.
ಹಿರಿಯ ನಾಯಕರ ರಣೋತ್ಸಾಹ
ಹಿರಿಯ ನಾಯಕರ ರಣೋತ್ಸಾಹ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮತದಾನದ ಒಂದು ವಾರಕ್ಕಿಂತ ಕಡಿಮೆ ಅವಧಿಯಿರುವಾಗ, ಹಿರಿಯ ರಾಜಕೀಯ ನಾಯಕರು ತಮ್ಮ ವಯಸ್ಸು ಆರೋಗ್ಯ ಲೆಕ್ಕಿಸದೇ ರಾಜ್ಯಾದ್ಯಂತ ಪ್ರತಿದಿನ ಅನೇಕ ರ್ಯಾಲಿಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ.

ಇವರಲ್ಲಿ ಅನೇಕರು 80-90 ವಯಸ್ಸಿನವರಾಗಿಗಿದ್ದು ಅನಾರೋಗ್ಯದ ಸಮಸ್ಯೆ ಹೊಂದಿದ್ದಾರೆ.  ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ, ಕಾಂಗ್ರೆಸ್ ಮತ್ತು ಬಿಜೆಪಿಯ ರಾಷ್ಟ್ರೀಯ ನಾಯಕರು ಕರ್ನಾಟಕದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಕಳೆದ ವಾರದಲ್ಲಿ, ತಾಪಮಾನ ಏರಿಕೆಯ ನಡುವೆಯೂ ಪ್ರಚಾರ ಕಾರ್ಯವು ಚುರುಕುಗೊಂಡಿದೆ.

72 ವರ್ಷ ವಯಸ್ಸಿನ ಪ್ರಧಾನಿ ನರೇಂದ್ರ ಮೋದಿ ಅವರು ವಾರದ ಬಹುತೇಕ ಪ್ರತಿದಿನ ಕರ್ನಾಟಕದಲ್ಲಿ ರೋಡ್ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಬೆಳಗಾವಿ, ಮಂಗಳೂರು, ಮೈಸೂರು, ಕಲಬುರಗಿ, ಹೊಸಪೇಟೆ, ರಾಯಚೂರು, ಚಿತ್ರದುರ್ಗ, ಕಾರವಾರ ಮತ್ತಿತರ ಕಡೆ ಕೇವಲ ಎರಡೇ ದಿನಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಮೇ 6 ಮತ್ತು 7 ರಂದು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಇತ್ತೀಚೆಗಷ್ಟೇ 80ನೇ ವರ್ಷಕ್ಕೆ ಕಾಲಿಟ್ಟಿರುವ ಲಿಂಗಾಯತ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ರ್ಯಾಲಿಗಳು ಮತ್ತು ಕಾರ್ಯಕ್ರಮಗಳಲ್ಲಿ ನಿರತರಾಗಿದ್ದಾರೆ. ಕಳೆದ ತಿಂಗಳು ಪಕ್ಷವು  ಅಭ್ಯರ್ಥಿಗಳನ್ನು ಘೋಷಿಸಿದ ನಂತರ, ಕೆಲವು ಬಂಡಾಯಗಾರರು ಬಿಜೆಪಿಯನ್ನು ತೊರೆದು ಇತರ ಪಕ್ಷಗಳಿಗೆ ಸೇರಿದರು.

ಯಡಿಯೂರಪ್ಪ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷವು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದು, ಸದ್ಯ ಅವರು ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ, ಯಡಿಯೂರಪ್ಪ ಪ್ರತಿದಿನವೂ ಹೆಚ್ಚಿನ ಸಂಖ್ಯೆಯ ಜನರನ್ನು ತಲುಪುತ್ತಿದ್ದಾರೆ ಮತ್ತು ಲಿಂಗಾಯತ ಮತದಾರರನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ.

ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ (90) ಏಪ್ರಿಲ್ 28 ರಿಂದ ಪ್ರಚಾರ ನಡೆಸುತ್ತಿದ್ದು, ಮೇ 8 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಅವರು ಕರ್ನಾಟಕದ 40 ಕ್ಷೇತ್ರಗಳಲ್ಲಿ ರೋಡ್‌ಶೋ ಮತ್ತು ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ.

ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಗೌಡರ ಪುತ್ರ ಹೆಚ್ ಡಿ ಕುಮಾರಸ್ವಾಮಿ ಪ್ರತಿದಿನ ಪಂಚರತ್ನ ಯಾತ್ರೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಕಳೆದ ವಾರ ಅಸ್ವಸ್ಥಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಡಿಸ್ಚಾರ್ಜ್ ಆದ ಬಳಿಕ ಮೈಸೂರಿನಲ್ಲಿ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಪ್ರತಿದಿನ ಐದಕ್ಕೂ ಹೆಚ್ಚು ರ್ಯಾಲಿ ಹಾಗೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (81) ಪ್ರತಿದಿನ ಮೂರ್ನಾಲ್ಕು ರ್ಯಾಲಿ, ಸಾರ್ವಜನಿಕ ಕಾರ್ಯಕ್ರಮಗಳು ಅಥವಾ ಪ್ರೆಸ್ ಮೀಟ್‌ಗಳಲ್ಲಿ ನಿರತರಾಗಿದ್ದಾರೆ. ಖರ್ಗೆ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಪ್ರತಿ ದಿನ ವಿವಿಧ ಮೂಲೆಗಳಲ್ಲಿ ಸಂಚರಿಸುತ್ತಿದ್ದಾರೆ. 224 ವಿಧಾನಸಭಾ ಸ್ಥಾನಗಳಲ್ಲಿ 36 ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಾಗಿದ್ದು, ಈ ಭಾಗಗಳಲ್ಲಿ ದಲಿತ ನಾಯಕ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

ಮಧುಮೇಹಿಯಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ (76) ಕೂಡ  ಪ್ರಚಾರ ಪ್ರವಾಸ ಕೈಗೊಂಡಿದ್ದರೂ ಆಹಾರ ಸೇವನೆಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ವರುಣಾದಿಂದ ಸ್ಪರ್ಧಿಸಿರುವ ಸಿದ್ದರಾಮಯ್ಯ ರಾಜ್ಯಾದ್ಯಂತ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com