ಚುನಾವಣೆಯಲ್ಲಿ ಸತತ ಸೋಲು: ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ
ಚುನಾವಣೆಯಲ್ಲಿ ಸತತ ಸೋಲು ಹಿನ್ನೆಲೆಯಲ್ಲಿ ಸೋಲಿನ ಹೊಣೆ ಹೊತ್ತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿಯವರು ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ.
Published: 25th May 2023 08:32 AM | Last Updated: 25th May 2023 06:43 PM | A+A A-

ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಚುನಾವಣೆಯಲ್ಲಿ ಸತತ ಸೋಲು ಹಿನ್ನೆಲೆಯಲ್ಲಿ ಸೋಲಿನ ಹೊಣೆ ಹೊತ್ತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿಯವರು ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಇಬ್ರಾಹಿಂ ಅವರಿಗೆ ಪತ್ರದ ಮೂಲಕ ಕುಮಾರಸ್ವಾಮಿಯವರು ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಪಕ್ಷದ ಜತೆ ಸದಾ ನಿಲ್ಲುವೆ, ಹೊಸ ನಾಯಕತ್ವಕ್ಕೆ ಅವಕಾಶ ಕೊಡಲು ಪತ್ರದಲ್ಲಿ ಮನವಿ ಮಾಡಿದ್ದು, ಸೋಲಿನಿಂದ ಕಂಗೆಡದೆ ಪಕ್ಷ ಕಟ್ಟುವ ಮಾತು, ಸೋಲೇ ಅಂತಿಮವಲ್ಲ ಎಂದ ತಿಳಿಸಿದ್ದು, ಪಕ್ಷ ಮರು ನಿರ್ಮಾಣ ದಿಸೆಯಲ್ಲಿ ರಾಜೀನಾಮೆ ನೀಡಿದ್ದೇನೆ. ಪಕ್ಷ ಕಟ್ಟುವ ಕೆಲಸದಲ್ಲಿ ನಾನು ಎಂದೂ ಹಿಂಜರಿಯಲಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಪ್ರಸಕ್ತ ವಿಧಾನಸಭೆ ಚುನಾವಣೆ ಫಲಿತಾಂಶ ನನಗೆ ಅತೀವ ಬೇಸರ ಉಂಟು ಮಾಡಿದೆ ಎನ್ನುವುದರ ಜತೆಗೆ, ಪಕ್ಷವನ್ನು ಹೊಸದಾಗಿ ಮರು ನಿರ್ಮಾಣ ಮಾಡುವ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂದು ವಿಶ್ವಾಸದಿಂದ ಹೇಳಬಯಸುತ್ತೇನೆ. ಇಷ್ಟು ದಿನ ಕರ್ನಾಟಕ ಪ್ರದೇಶ ಯುವ ಜನತಾದಳ (ಜಾತ್ಯತೀತ) ಘಟಕದ ಅಧ್ಯಕ್ಷನಾಗಿ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡ ಸಾಹೇಬರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ತಮ್ಮಗಳ ಮಾರ್ಗದರ್ಶನದಿಂದ ನನ್ನ ಕೈಲಾದ ಮಟ್ಟಿಗೆ ಕರ್ತವ್ಯ ನಿರ್ವಹಿಸಿದ್ದೇನೆ. ಪಕ್ಷ ಸಂಘಟನೆ ಮಾಡಲು ಶ್ರಮಿಸಿದ್ದೇನೆ.
ಇದನ್ನೂ ಓದಿ: ಕೆಲಸ ಮಾಡದ ಅನಿತಾ ಕುಮಾರಸ್ವಾಮಿ, ನಿಖಿಲ್ ಮೇಲೆ ಮತದಾರರ ಮುನಿಸು, ಜೆಡಿಎಸ್ ಮತ ಸೆಳೆದ ಬಿಜೆಪಿ!
ಆದರೆ, ಸೋಲೇ ಅಂತಿಮವಲ್ಲ. ಈ ಚುನಾವಣೆಯ ಸೋಲನ್ನು ಮೆಟ್ಟಿ ಪಕ್ಷವನ್ನು ಬಲವಾಗಿ ಕಟ್ಟುವ ದಿಸೆಯಲ್ಲಿ ನಾವೆಲ್ಲರೂ ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕಿದೆ, ಹೊಸ ನಾಯಕತ್ವಕ್ಕೆ ಅವಕಾಶ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ನಾನು ಕರ್ನಾಟಕ ಪ್ರದೇಶ ಜನತಾದಳ (ಕರ್ನಾಟಕ) ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಅದನ್ನು ತಾವು ಅಂಗೀಕಾರ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ.
ನನ್ನ ಈ ನಿರ್ಧಾರವನ್ನು ತಾವು ಒಪ್ಪಿ ನವ ನಾಯಕತ್ವಕ್ಕೆ ಅನುವು ಮಾಡಿಕೊಟ್ಟು ಪಕ್ಷವನ್ನು ಗಟ್ಟಿಗೊಳಿಸುವ ದಿಕ್ಕಿನಲ್ಲಿ ಒಟ್ಟಾಗಿ ಸಾಗಬೇಕಿದೆ ಎನ್ನುವುದು ನನ್ನ ವಿನಮ್ರ ಸಲಹೆ ಮತ್ತು ಮನವಿ. ತಮ್ಮ ಹಾಗೂ ವರಿಷ್ಠರ ಆಶಯ, ಪಕ್ಷದ ಹಿತದೃಷ್ಟಿಯಿಂದ ಸಂಘಟನೆ ಕೆಲಸಕ್ಕೆ ನಾನು ಸದಾ ಸಿದ್ಧ. ಯುವ ಸಮುದಾಯದ ಜತೆ ಸೇರಿ ಪಕ್ಷ ಕಟ್ಟುವುದಕ್ಕೆ ನಾನೆಂದೂ ಹಿಂಜರಿಯುವುದಿಲ್ಲ.
ನನ್ನ ಭಾವನೆಗಳನ್ನು ತಾವು ಗೌರವಿಸುವಿರಿ ಎನ್ನುವ ವಿಶ್ವಾಸದೊಂದಿಗೆ.. ಇಷ್ಟು ದಿನ ನನ್ನೊಂದಿಗೆ ಶ್ರಮಿಸಿ ಪಕ್ಷಕ್ಕಾಗಿ ಹೆಗಲು ಕೊಟ್ಟ ಎಲ್ಲಾ ಹಿರಿ, ಕಿರಿಯರಿಗೆ ನನ್ನ ಗೌರವಪೂರ್ವಕ ನಮನಗಳು.” ಎಂದು ಬರೆದಿದ್ದಾರೆ.