ಬಿಜೆಪಿಯವರು ತಮ್ಮ 65 ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ; ಇನ್ನೊಂದೇ ವಾರ ಕಾದುನೋಡಿ: ಸಚಿವ ಜಮೀರ್ ಹೊಸ ಬಾಂಬ್
ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಆಪರೇಶನ್ ಕಮಲ ಮತ್ತು ಆಪರೇಶನ್ ಹಸ್ತ ವಿಚಾರವಾಗಿ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಇದೀಗ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇನ್ನೊಂದು ವಾರ ಅಥವಾ ಹತ್ತು ದಿನ ಕಾದು ನೋಡಿ, ರಾಜ್ಯದಲ್ಲಿ ದೊಡ್ಡ ಬಾಂಬ್ ಸ್ಫೋಟಗೊಳ್ಳಲಿದೆ.ಬಿಜೆಪಿಯವರು ಅವರ 65 ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಂದು ವಾರ ಅಥವಾ ಹತ್ತು ದಿನ ಕಾದು ನೋಡಿ, ರಾಜ್ಯದಲ್ಲಿ ದೊಡ್ಡ ಬಾಂಬ್ ಬ್ಲಾಸ್ ಆಗಲಿದೆ. ಬಿಜೆಪಿಯ ಎಷ್ಟು ಶಾಸಕರು ಬರುತ್ತಾರೆ ಕಾದು ನೋಡಿ ಎನ್ನುವ ಮೂಲಕ ಮಾಚಿ ಸಚಿವ ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದರು.
ಬಿಜೆಪಿಯವರು 65 ಮಂದಿ ಶಾಸಕರಿದ್ದಾರೆ. ಮೊದಲು ಅವರನ್ನು ಉಳಿಸಿಕೊಳ್ಳೋಕೆ ಹೇಳಿ. ಸರ್ಕಾರ ಅಸ್ಥಿರ ಆಗುತ್ತೆ ಅನ್ನೋ ಪ್ರಶ್ನೆಗೆ ಮೊದಲು ಅವರ ಶಾಸಕರನ್ನ ಬಿಗಿ ಮಾಡ್ಕೊಳೊಕೆ ಹೇಳಿ ಎಂದು ಟಾಂಗ್ ಕೊಟ್ಟರು.
ಬಣ ರಾಜಕೀಯಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಮ್ಮಲ್ಲಿ ಯಾವುದೇ ಬಣ ಇಲ್ಲ, ನಮ್ಮದು ಎಲ್ಲ ಒಂದೇ ಬಣ ಅದು ಕಾಂಗ್ರೆಸ್ ಬಣ. ಸತೀಶ್ ಜಾರಕಿಹೊಳಿ ಜೊತೆ ವಿದೇಶ ಪ್ರವಾಸಕ್ಕೆ ನಾನೇಕೆ ಹೊಗಲಿ? ಅಲ್ಲಿ ನನಗೇನು ಕೆಲಸವಿದೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಲು ಸಿಎಂ ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಬೇರೆಯವರಿಗೆ ಕುರ್ಚಿ ಖಾಲಿ ಇಲ್ಲ. ಈಗಾಗಲೇ ಸಿಎಂ ಇದ್ದಾರಲ್ಲ? ಇನ್ಯಾಕೆ ಬದಲಾವಣೆ ಚರ್ಚೆ ಮಾಡಬೇಕು? ಎಂದು ಪ್ರಶ್ನಿಸಿದರು.
ಮುಂದೆ ಹಾಗೇನಾದರು ಸಂದರ್ಭ ಬಂದರೆ ನಮ್ಮ ಪಕ್ಷದ ಹೈಕಮಾಂಡ್ ಮುಖಂಡರು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ನಮ್ಮದು ಹೈ ಕಮಾಂಡ್ ಪಕ್ಷ, ಹೀಗಾಗಿ ಹೈ ಕಮಾಂಡ್ ತೀರ್ಮಾಣವೇ ಅಂತಿಮ. ನನಗೂ ತಕ್ಷಣ ರಾಜೀನಾಮೆ ನೀಡುವಂತೆ ಸೂಚನೆ ಬಂದರೆ, ನಾನು ಕೂಡಲೇ ಬೆಂಗಳೂರಿಗೆ ಹೋಗಿ ರಾಜೀನಾಮೆ ಕೊಡಬೇಕು ಎಂದು ಹೇಳಿದರು.
ಇನ್ನು ಗೃಹ ಸಚಿವ ಪರಮೇಶ್ವರ್ ಮನೆಯಲ್ಲಿ ಸಿದ್ದು ಆಪ್ತರ ಸಭೆ ವಿಚಾರವಾಗಿ ಮಾತನಾಡಿ, ಪರಮೇಶ್ವರ್ ಮನೆಯಲ್ಲಿ ಸಭೆ ನಡೆದಿಲ್ಲ, ಊಟಕ್ಕೆ ಕರೆದಿದ್ದರು. ನನ್ನನ್ನೂ ಕರೆದಿದ್ದರು. ಡಿಕೆಶಿ ಅವರನ್ನೂ ಕರೆದಿರುತ್ತಾರೆ. ನಾನು ಬೇರೆ ಕೆಲಸ ಇದ್ದರಿಂದ ಹೋಗಿರಲಿಲ್ಲ. ಪರಮೇಶ್ವರ್ ಮನೆಯಲ್ಲಿ ಭೋಜನ ವಿಚಾರಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ