ನಾವು ಸ್ಟ್ರಾಂಗು ಇರಲ್ಲಾ, ವೀಕ್ ಇರಲ್ಲಾ ಎಂದ ಸತೀಶ್​ ಜಾರಕಿಹೊಳಿ; ನನ್ನ ಮೌನವೂ ವೀಕ್ನೆಸ್ ಅಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಕೌಂಟರ್!

ಬೆಳಗಾವಿ ರಾಜಕೀಯ ಸದ್ದು ಮಾಡುತ್ತಿದೆ. ಅದು ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಶೀತಲ ಸಮರ ನಡೆಯುತ್ತಿದೆ ಎಂಬ ವಿಚಾರ.
ಸತೀಶ್ ಜಾರಕಿಹೊಳಿ-ಲಕ್ಷ್ಮಿ ಹೆಬ್ಬಾಳ್ಕರ್
ಸತೀಶ್ ಜಾರಕಿಹೊಳಿ-ಲಕ್ಷ್ಮಿ ಹೆಬ್ಬಾಳ್ಕರ್
Updated on

ಬೆಳಗಾವಿ: ಬೆಳಗಾವಿ ರಾಜಕೀಯ ಸದ್ದು ಮಾಡುತ್ತಿದೆ. ಅದು ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಶೀತಲ ಸಮರ ನಡೆಯುತ್ತಿದೆ ಎಂಬ ವಿಚಾರ.

ಇತ್ತೀಚೆಗಷ್ಟೇ ನನ್ನ ಮೌನ ವೀಕ್ನೆಸ್ ಅಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಇಂದು ಬೆಳಗಾವಿಯಲ್ಲಿ ಸುದ್ದಿಗಾರರು ಪ್ರತಿಕ್ರಿಯೆ ಕೇಳಿದಾಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ನನ್ನ ಮೌನವೂ ವೀಕ್ನೆಸ್ ಅಲ್ಲ ಎಂದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿದ್ದು, ಜಿಲ್ಲಾ ರಾಜಕಾರಣದ ಬಗ್ಗೆ ಬೆಳಗಾವಿ ಮಾಧ್ಯಮಗಳಿಗೆ ಗೊತ್ತಿದೆ. ಬೇರೆ ಜಿಲ್ಲೆಯ ವರದಿಗಾರರು ಪ್ರಶ್ನೆ ಕೇಳಿದರೆ ಉತ್ತರ ಕೊಡುತ್ತಿದ್ದೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ರೀತಿಯ ಸಣ್ಣ ಸಮಸ್ಯೆ ಕೂಡ ಇಲ್ಲ. ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ನಾವೆಲ್ಲರೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.

ಮೈಸೂರು ಪ್ರವಾಸದ ಲಿಸ್ಟ್‌ನಲ್ಲಿ ನಾನೂ ಇದ್ದೆ. ನಾನೇ ನಮ್ಮ ಜಿಲ್ಲೆಯ ರಾಜು ಕಾಗೆ, ಮಹಾಂತೇಶ ಕೌಜಲಗಿ ಜೊತೆಗೆ ಮಾತನಾಡಿದ್ದೆ. ಎಲ್ಲರೂ ಸೇರಿ ಮೈಸೂರು ಪ್ರವಾಸಕ್ಕೆ ಹೋಗಲು ತೀರ್ಮಾನಿಸಿದ್ದೆವು. ಇದನ್ನು ಬಂಡಾಯ ಎಂದು ಬಿಂಬಿಸುವುದು ಸರಿಯಲ್ಲ. ಅಲ್ಲದೆ ಮೈಸೂರಿನಲ್ಲಿ ಮಹಿಳಾ ದಸರಾ ಉದ್ಘಾಟನೆ ನಾನೇ ಮಾಡಬೇಕಿತ್ತು. ಆದರೆ ಬಾಯ್ಲರ್ ಉದ್ಘಾಟನೆ ಮಾಡಬೇಕಿತ್ತು. ಸಹೋದರ ಕರೆದ ಅದಕ್ಕೆ ನಾನು ಬೆಳಗಾವಿಗೆ ಮರಳಿ ನಂತರ ಭದ್ರಾವತಿಗೆ ಹೋದೆ ಎಂದರು.

ಮೈಸೂರು ಪ್ರವಾಸ ಕ್ಯಾನ್ಸಲ್‌ ಆಗಿದ್ದೇಕೆ ಎಂದು ನನಗೆ ಗೊತ್ತಿಲ್ಲ, ಸತೀಶ್ ಅವರನ್ನು ಕೇಳಿ. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಬೆಳಗಾವಿಗೆ ಬಂದಾಗ ಯಾರದರೂ ಶಾಸಕರು ಸ್ವಾಗತಕ್ಕೆ ಬರಬೇಕಿತ್ತು ಎಂದರು.

ಇನ್ನು ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಸತೀಶ್ ಜಾರಕಿಹೊಳಿಯವರನ್ನು ಕೇಳಿದಾಗ, ನಾವೆಲ್ಲ ಒಟ್ಟಾಗಿ ಇದ್ದೇ ಇರುತ್ತೇವೆ, ಮೆಜಾರಿಟಿ ಜನ ನಮ್ಮ ಜತೆಗೆ ಇರುತ್ತಾರೆ. ಇದಕ್ಕೆ ಬೇರೆ ರೀತಿ ಅರ್ಥ ಕಲ್ಪಿಸುವ ಕೆಲಸ ಬೇಡ. ಸಿಎಂ ಇದ್ದಾರೆ ಅಧ್ಯಕ್ಷರಿದ್ದಾರೆ ಸಮಸ್ಯೆ ಇದ್ದರೆ ಅವರ ಗಮನಕ್ಕೆ ತರುತ್ತೇವೆ, ಪಕ್ಷ, ಚುನಾವಣೆ ಬಂದಾಗ ನಾವೆಲ್ಲಾ ಒಂದಾಗುತ್ತೇವೆ, ನನ್ನ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.

ನಾವು ಸ್ಟ್ರಾಂಗು ಇರಲ್ಲಾ, ವೀಕ್ ಇರಲ್ಲಾ. ಪಕ್ಷ ಅಧಿಕಾರಕ್ಕೆ ಬರಲು ನನ್ನ ಜತೆ ಸಾವಿರಾರು, ಲಕ್ಷಾಂತರ ಕಾರ್ಯಕರ್ತರ ಪಾತ್ರವಿದೆ. ನಾವು ಪ್ರವಾಸ ಹೋಗೋದಕ್ಕಾಗಲಿ, ಇನ್ನೊಂದು ಪವರ್ ಸೆಂಟರ್ ಮಾಡುವ ಉದ್ದೇಶ ನಮ್ಮದಿಲ್ಲ. ಸಮಾನ ಮನಸ್ಕರ ಇದ್ದೆ ಇರುತ್ತೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಬಣ ಆಗಲಿ, ಬೇರೆ ಗುಂಪು ಮಾಡಬೇಕು ಅನ್ನೋದಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com