ಕೋಲಾರ: 'ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಒಂದು ವೇಳೆ ನಾನು ಹೇಳುತ್ತಿರುವುದು ಸುಳ್ಳು ಎಂದಾದರೆ ಸಿದ್ದರಾಮಯ್ಯ ಅವರು ಕುರುಡುಮಲೆ ಗಣೇಶನ ಮುಂದೆ ನಿಂತು ಪ್ರಮಾಣ ಮಾಡಲಿ' ಎಂದು ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಭಾನುವಾರ ಸವಾಲೆಸೆದರು.
ಕುರುಡುಮಲೆ ಗಣೇಶನಿಗೆ ಪೂಜೆ ಸಲ್ಲಿಸಿದ ಬಳಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ನಾನು ಕುರುಡುಮಲೆ ಗಣೇಶನ ಮುಂದೆ ನಿಂತು ಸವಾಲು ಹಾಕುತ್ತಿದ್ದೇನೆ. ವರ್ಗಾವಣೆ ದಂಧೆ ತನಿಖೆಗೆ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರನ್ನು ನೇಮಿಸಲಿ. ವರ್ಗಾವಣೆ ದಂಧೆಯಲ್ಲಿ ಬಿಜೆಪಿ ಸರ್ಕಾರದ ಅವಧಿಗಿಂತ ಎರಡು ಪಟ್ಟು ಅಧಿಕ ವರ್ಗಾವಣೆ ದಂಧೆಯಲ್ಲಿ ಕಾಂಗ್ರೆಸ್ ಸರ್ಕಾರ ತೊಡಗಿಲ್ಲ ಎಂದಾದರೆ ಕುರುಡುಮಲೆ ಗಣಪತಿ ನನಗೆ ಏನು ಬೇಕಾದರೂ ಶಾಪ ಕೊಡಲಿ' ಎಂದರು.
'ಸಿದ್ದರಾಮಯ್ಯ ಕೇಂದ್ರೀಕೃತ ವರ್ಗಾವಣೆ ನೀತಿ ತಂದಿದ್ದಾರೆ. ಎಲ್ಲವೂ ನಿಮಗೆ ಸೇರಬೇಕು ಎಂಬುದೇ ಇದರ ಉದ್ದೇಶವಾಗಿದ್ದು, ಮುಖ್ಯಮಂತ್ರಿ ಹಾಗೂ ಅವರ ಮಗನಿಗೂ ದುಡ್ಡು ಕೊಡಬೇಕು' ಎಂದು ಆರೋಪಿಸಿದರು.
'ಎಷ್ಟು ದುಡ್ಡು ಕೊಟ್ಟಿದ್ದೇವೆ ಎಂದು ಹೇಳುವ 25 ಅಧಿಕಾರಿಗಳನ್ನು ತನಿಖಾ ತಂಡದ ಮುಂದೆ ನಾನು ನಿಲ್ಲಿಸುತ್ತೇನೆ. ವರ್ಗಾವಣೆ ದಂಧೆಗೆ ಲೆಕ್ಕವೇ ಇಲ್ಲದಾಗಿದೆ. ಇನ್ನು ಮುಂದಾದರೂ ಲಂಚ ಪಡೆಯಲ್ಲ, ಅಭಿವೃದ್ಧಿಗೆ ಒತ್ತುಕೊಡುತ್ತೇನೆ ಎಂದು ಸಿದ್ದರಾಮಯ್ಯ ಪ್ರಮಾಣಮಾಡಲಿ' ಎಂದರು
Advertisement