Lok Sabha Election 2024: ಮೈಸೂರು ರಾಜ ಯದುವೀರ್ ಬಳಿ ಮನೆ, ಕೃಷಿ ಭೂಮಿ, ಕಾರು, ನಿವೇಶನ ಇಲ್ಲ!

ಮೈಸೂರು-ಕೊಡಗು (Mysuru-kodagu) ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಈ ವೇಳೆ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಸಿದ ಯದುವೀರ್ ಒಡೆಯರ್
ನಾಮಪತ್ರ ಸಲ್ಲಿಸಿದ ಯದುವೀರ್ ಒಡೆಯರ್TNIE
Updated on

ಮೈಸೂರು: ಮೈಸೂರು-ಕೊಡಗು (Mysuru-kodagu) ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಈ ವೇಳೆ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆ ರಾಜಮಾತೆ ಪ್ರಮೋದಾದೇವಿ ಒಡೆಯರ್ (Pramoda Devi Wadiyar) ಪುತ್ರ ಯದುವೀರ್ ಒಡೆಯರ್ ಅವರಿಗೆ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆ ವೇಳೆ ಯದುವೀರ್ ಒಡೆಯರ್ 5 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿಕೊಂಡಿದ್ದು, ತಮ್ಮ ಒಡೆತನದಲ್ಲಿ ಯಾವುದೇ ಮನೆ, ಕೃಷಿ ಭೂಮಿ, ನಿವೇಶನ ಮತ್ತು ಕಾರು ಹೊಂದಿಲ್ಲವೆಂದು ಯದುವೀರ್ ಒಡೆಯರ್ ಅಫಿಡವಿಟ್​ನಲ್ಲಿ ಮಾಹಿತಿ ನೀಡಿದ್ದಾರೆ.

ನಾಮಪತ್ರ ಸಲ್ಲಿಸಿದ ಯದುವೀರ್ ಒಡೆಯರ್
ಕರ್ನಾಟಕ ಲೋಕಸಭೆ ಚುನಾವಣೆ: ಅಭ್ಯರ್ಥಿಗಳ ಉಮೇದುವಾರಿಕೆ; ಯದುವೀರ್, ಸೋಮಣ್ಣ, ಮೋಹನ್ ನಾಮಪತ್ರ ಸಲ್ಲಿಕೆ

4 ಕೆಜಿ ಚಿನ್ನ

ತಮ್ಮ ಅಫಿಡವಿಟ್ ನಲ್ಲಿ ಘೋಷಿಸಿಕೊಂಡಿರುವಂತೆ ಯದುವೀರ್ ಬಳಿ 1 ಲಕ್ಷ ರೂಪಾಯಿ ನಗದು ಹೊಂದಿದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಸುಮಾರು 1.36 ಕೋಟಿ ರೂ. ಹೊಂದಿದ್ದಾರೆ. ಇದರ ಜೊತೆಗೆ 3.25 ಕೋಟಿ ಮೌಲ್ಯದ 4 ಕೆಜಿ ಚಿನ್ನ, 14 ಲಕ್ಷ ರೂಪಾಯಿ ಮೌಲ್ಯದ 20 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಒಟ್ಟು 4.99 ಕೋಟಿ ರೂಪಾಯಿ ಚರಾಸ್ತಿ ಹೊಂದಿರುವುದಾಗಿ ನಾಮಪತ್ರ ಸಲ್ಲಿಕೆ ವೇಳೆ ಯದುವೀರ್ ಒಡೆಯರ್ ಘೋಷಿಸಿಕೊಂಡಿದ್ದಾರೆ. ಅಂತೆಯೇ ಯದುವೀರ್ ಪತ್ನಿ ತ್ರಿಷಿಕಾ ಅವರು, 75 ಸಾವಿರ ನಗದು, ಬ್ಯಾಂಕ್​ನಲ್ಲಿ 1 ಲಕ್ಷ ರೂಪಾಯಿ ಹಣ ಠೇವಣಿ ಹೊಂದಿದ್ದಾರೆ. 5.5 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಂ ಚಿನ್ನದ ಗಟ್ಟಿ , 90 ಲಕ್ಷ ರೂಪಾಯಿ ಮೌಲ್ಯದ 2 ಕೆಜಿ ಚಿನ್ನ ಮತ್ತು 7 ಲಕ್ಷ ರೂಪಾಯಿ ಮೌಲ್ಯದ 10 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ತ್ರಿಷಿಕಾ ಒಟ್ಟು 1.04 ಕೋಟಿ ರೂಪಾಯಿ ಮೌಲ್ಯದ ಚಿರಾಸ್ತಿಯನ್ನು ಹೊಂದಿದ್ದಾರೆ.

ಅವಲಂಬಿತರ ಆಸ್ತಿಯ ಘೋಷಣೆ

ಇದರೊಂದಿಗೆ ಯದುವೀರ್ ಒಡೆಯರ್ ತಮ್ಮ ಅವಲಂಬಿತರ ಆಸ್ತಿಯನ್ನು ಸಹ ನಾಮಪತ್ರ ಸಲ್ಲಿಕೆ ವೇಳೆ ಘೋಷಿಸಿಕೊಂಡಿದ್ದು, ಅವಲಂಬಿತರ ಹೆಸರಿನಲ್ಲಿ 3.63 ಕೋಟಿ ರೂಪಾಯಿ ಚರಾಸ್ತಿ ಇದೆ. ಕೈಯಲ್ಲಿ ನಗದು 5 ಸಾವಿರ ರೂ. ಬ್ಯಾಂಕ್​ನಲ್ಲಿ 1 ಲಕ್ಷ ರೂ, ಮ್ಯೂಚುವಲ್ ಫಂಡ್​ನಲ್ಲಿ 1.49 ಕೋಟಿ ರೂಪಾಯಿ ಮತ್ತು ಟಾಟಾ ಲೈಫ್ ಇನ್ಸೂರೆನ್ಸ್​ನಲ್ಲಿ 1.89 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಇದರ ಜೊತೆಯಲ್ಲಿ 12 ಲಕ್ಷ ರೂಪಾಯಿ ಮೌಲ್ಯದ 400 ಗ್ರಾಂ ಚಿನ್ನ, 5.5 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನದ ಗಟ್ಟಿ ಮತ್ತು 7 ಲಕ್ಷ ರೂ. ಮೌಲ್ಯದ 10 ಕೆಜಿ ಬೆಳ್ಳಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಅಂದಹಾಗೆ ಯದುವೀರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ ಲಕ್ಷ್ಮಣ ಕಣಕ್ಕಿಳಿದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com