ಮುಂದಿನ 10 ವರ್ಷವೂ ಮೋದಿಯೇ ದೇಶದ ಪ್ರಧಾನಿ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಮುಂದಿನ 10 ವರ್ಷವೂ ನರೇಂದ್ರ ಮೋದಿಯವರೇ ದೇಶದ ಪ್ರಧಾನಮಂತ್ರಿಗಳಾಗಲಿದ್ದು, ದೇಶದಲ್ಲಿರುವ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲಕ ಮಾಡಿ, ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲಿದ್ದಾರೆಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರು ಬುಧವಾರ ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಮುಂದಿನ 10 ವರ್ಷವೂ ನರೇಂದ್ರ ಮೋದಿಯವರೇ ದೇಶದ ಪ್ರಧಾನಮಂತ್ರಿಗಳಾಗಲಿದ್ದು, ದೇಶದಲ್ಲಿರುವ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲಕ ಮಾಡಿ, ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲಿದ್ದಾರೆಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರು ಬುಧವಾರ ಹೇಳಿದರು.

ಶಿಗ್ಗಾಂವಿಯಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿ ಸರ್ಕಾರದ ಆಡಳಿತದಲ್ಲಿ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ದೇಶದ ಮಾತು ಗಮನಾರ್ಹವಾಗಿ ಹೆಚ್ಚಾಗಿದೆ, ಐಎಂಎಫ್‌ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳ ಮೆಚ್ಚುಗೆಯನ್ನೂ ಗಳಿಸಿದೆ. ಮೋದಿ ಆಡಳಿತದಲ್ಲಿ ದೇಶದ ಸುಮಾರು 25 ಕೋಟಿ ಜನರನ್ನು ಬಡತನದಿಂದ ಹೊರತಂದಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ ಬಡತನವನ್ನು ಸಂಪೂರ್ಣವಾಗಿ ತೊಡೆದುಹಾಕಿ, ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತಿಸಲು ಸಂಕಲ್ಪ ಮಾಡಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಮತ್ತು ಸುಧಾರಣೆಗಳ ಪರಿಣಾಮವಾಗಿ ಸುಮಾರು 25 ಕೋಟಿ ಜನರು ಈಗಾಗಲೇ ಬಡತನದಿಂದ ಹೊರಬಂದಿದ್ದಾರೆ ಮತ್ತು ಆರ್ಥಿಕ ಸಬಲೀಕರಣವನ್ನು ಸಾಧಿಸಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸಚಿವ ಸಂಪುಟವು ಮುಂದಿನ ಐದು ವರ್ಷಗಳಲ್ಲಿ ಪ್ರತಿ ಕುಟುಂಬಕ್ಕೆ ಆಶ್ರಯ ನೀಡುವ ಯೋಜನೆಯನ್ನು ರೂಪಿಸಿದೆ, ಗ್ರಾಮೀಣ ಮತ್ತು ನಗರ ಬಡವರಿಗೆ ಎರಡು ಕೋಟಿ ಹೆಚ್ಚುವರಿ ಮನೆಗಳಿಗೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ತನ್ನ 65 ವರ್ಷಗಳ ಆಡಳಿತದಲ್ಲಿ ಕೇವಲ 3.5 ಕೋಟಿ ಮನೆಗಳನ್ನು ಒದಗಿಸಿತ್ತು. ಆದರೆ ಮೋದಿ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೇವಲ 10 ವರ್ಷಗಳಲ್ಲಿ ನಾಲ್ಕು ಕೋಟಿಗೂ ಹೆಚ್ಚು ಮನೆಗಳನ್ನು ನೀಡಿದ್ದಾರೆ, ಜೊತೆಗೆ ಹೆಚ್ಚುವರಿ ಎರಡು ಕೋಟಿ ಮನೆಗಳಿಗೂ ಯೋಜನೆ ರೂಪಿಸಿದ್ದಾರೆಂದು ಕೊಂಡಾಡಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀ ವಿರೋಧ: ಸ್ವಾಮೀಜಿ ಹಿಂದೆ ಕಾಂಗ್ರೆಸ್ ಕೈವಾಡ?

ರಾಜ್ಯ ಸರ್ಕಾರವು ಕೇಂದ್ರದಿಂದ ಮಂಜೂರು ಮಾಡಿದ ಮನೆಗಳನ್ನು ಆಯಾ ಗ್ರಾಮ ಪಂಚಾಯತ್‌ಗಳ ಮೂಲಕ ವಿತರಿಸಿದೆ, ಏಕೆಂದರೆ ದೆಹಲಿಯಲ್ಲು ಕುಳಿತು ಈ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸ್ಥಳೀಯ ಸರ್ಕಾರಗಳು ನಿಜವಾದ ಫಲಾನುಭವಿಗಳಿಗೆ ಮನೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಬಳಿಕ ಬಂಜಾರ ಸಮುದಾಯದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಸಮುದಾಯದ ಒತ್ತಾಯವಾಗಿತ್ತು. ಅದು ಈಗ ಈಡೇರಿದೆ. ಪ್ರಧಾನಿ ಮೋದಿ ಅವರು ಸಮುದಾಯದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದಾರೆ, ಆದ್ದರಿಂದ ಮೂರನೇ ಬಾರಿಗೆ ಪ್ರಧಾನಿಯಾಗಲು ಅವರ (ಮೋದಿ) ಬೆನ್ನಿಗೆ ನಿಲ್ಲಬೇಕು ಎಂದು ಮನವಿ ಮಾಡಿಕೊಂಡರು.

ಬಂಜಾರ ಸಮುದಾಯದ ಕೆಲವು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಮಟ್ಟದಲ್ಲಿ ಪರಿಹರಿಸಲು ಪ್ರಯತ್ನಿಸುತ್ತೇನೆ. 5-6 ಸಮುದಾಯದ ಪ್ರಮುಖರು ದೆಹಲಿಗೆ ಬರಲಿ. ಸಂಬಂಧಪಟ್ಟ ಸಚಿವರ ಬಳಿಗೆ ಕರೆದೊಯ್ದು ಸಮಾಲೋಚನೆ ನಡೆಸಿ ಪರಿಹಾರ ಕೊಡಿಸಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com