ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಪುನರಾಯ್ಕೆ ಖಚಿತ: ತೇಜಸ್ವಿ ಸೂರ್ಯ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರನೇ ಬಾರಿ ಪುನರಾಯ್ಕೆಯಾಗಲಿದ್ದಾರೆ ಎಂದು ಬೆಂಗಳೂರು ದಕ್ಷಿಣ ಸಂಸದ ಹಾಗೂ ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರನೇ ಬಾರಿ ಪುನರಾಯ್ಕೆಯಾಗಲಿದ್ದಾರೆ ಎಂದು ಬೆಂಗಳೂರು ದಕ್ಷಿಣ ಸಂಸದ ಹಾಗೂ ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.

ಏಪ್ರಿಲ್ 19 ರಿಂದ ಪ್ರಾರಂಭವಾಗುವ ಲೋಕಸಭಾ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸೌಮ್ಯಾ ರೆಡ್ಡಿ ವಿರುದ್ಧ ತೇಜಸ್ವಿ ಸೂರ್ಯ ಕಣಕ್ಕಿಳಿದಿದ್ದು, ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣೆ ಕುರಿತು ಮಾತನಾಡಿರುವ ಅವರು, ಚುನಾವಣೆ ಎಂದರೆ ಪ್ರಧಾನಿ ಮೋದಿ. ದೇಶದ ಜನರು ಸ್ಥಿರತೆಯನ್ನು ಬಯಸುತ್ತಿದ್ದು, ಮೋದಿಯವರಿಂದ ಮಾತ್ರ ಆ ಸ್ಥಿರತೆ ನೋಡಬಹುದು ಎಂಬುದನ್ನು ಜನರು ಅರ್ಥಮಾಡಿಕೊಂಡಿದ್ದಾರೆ. ಮೋದಿಯವರ 10 ವರ್ಷಗಳ ಆಡಳಿತವನ್ನು ನೋಡಿದ್ದಾನೆ. ನಾನು ಜನರೊಂದಿಗೆ ಸಂಪರ್ಕ ಸಾಧಿಸಿದ್ದು, ಜನರ ನಾಡಿಮಿಡಿತ ನನಗೆ ತಿಳಿದಿದೆ. ಈ ಬಾರಿಯೂ ಜನರು ಮೋದಿಯವರನ್ನೇ ಆಯ್ಕೆ ಮಾಡುತ್ತಾರೆಂದು ಹೇಳಿದರು.

28 ಸಂಸದೀಯ ಕ್ಷೇತ್ರಗಳನ್ನು ಹೊಂದಿರುವ ಕರ್ನಾಟಕದ ಬಗ್ಗೆ ಮಾತನಾಡಿ, ಮೋದಿಯವರಿಂದಾಗಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದರೂ ಆಶ್ಚರ್ಯವಿಲ್ಲ ಎಂದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಕನಿಷ್ಠ ಐದು ಲಕ್ಷ ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆಯಲ್ಲಿದ್ದೇನೆ ಎಂದರು. 2019ರಲ್ಲಿ ಕಾಂಗ್ರೆಸ್‌ನ ಬಿಕೆ ಹರಿಪ್ರಸಾದ್ ವಿರುದ್ಧ 3,31,192 ಮತಗಳ ಅಂತರದಿಂದ ತೇಜಸ್ವಿ ಸೂರ್ಯ ಗೆಲುವು ಸಾಧಿಸಿದ್ದರು.

ತೇಜಸ್ವಿ ಸೂರ್ಯ
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆಸ್ತಿ ಐದೇ ವರ್ಷದಲ್ಲಿ 30 ಪಟ್ಟು ಹೆಚ್ಚಳ!

ಬರ ಪರಿಹಾರ ಬಿಡುಗಡೆ ಆರೋಪ ಕುರಿತು ಮಾತನಾಡಿ, ಕೇಂದ್ರದಿಂದ ರಾಜ್ಯಕ್ಕೆ 2014-2024ರ ನಡುವೆ ತೆರಿಗೆ ಹಂಚಿಕೆ ಶೇಕಡಾ 258 ರಷ್ಟು ಹೆಚ್ಚಾಗಿದೆ. ಇದು ಯುಪಿಎ ಸರ್ಕಾರದ 10 ವರ್ಷಗಳಿಗೆ ಹೋಲಿಸಿದರೆ 3.5 ಪಟ್ಟು ಹೆಚ್ಚು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಧ್ರುವೀಕರಣ ಕುರಿತು ಮಾತನಾಡಿ, ಜನರ ಅಪಮಾನಿಸುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು. ಪ್ರಧಾನಿಯವರು ‘ಸಬ್ಕಾ ಸಾಥ್, ಸಬ್ಕಾ ವಿಶ್ವಾಸ’ದಲ್ಲಿ ನಂಬಿಕೆ ಇಟ್ಟಿದ್ದಾರೆಂದು ತಿಳಿಸಿದರು.

ಚುನಾವಣೆಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಮುಳುವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನಮಗೆ ಮೋದಿಯವರೇ ದೊಡ್ಡ ಗ್ಯಾರಂಟಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com