HDK ಜೊತೆ ಭಿನ್ನಾಭಿಪ್ರಾಯವಿಲ್ಲ, ಪಕ್ಷ ಸೂಚಿಸಿದರೆ ಪ್ರಚಾರ ಮಾಡುತ್ತೇನೆ: ಸುಮಲತಾ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಎನ್‌ಡಿಎ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಸಂಸದೆ ಸುಮಲತಾ ಅಂಬರೀಶ್ ಅವರು ಶನಿವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.
 ಸಂಸದೆ ಸುಮಲತಾ
ಸಂಸದೆ ಸುಮಲತಾ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಎನ್‌ಡಿಎ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಸಂಸದೆ ಸುಮಲತಾ ಅಂಬರೀಶ್ ಅವರು ಶನಿವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ ತ್ಯಾಗ ಮಾಡಿದ್ದೇನೆ. ವಾರದ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ಪಕ್ಷ ಸೂಚಿದರೆ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ. ಕುಮಾರಸ್ವಾಮಿಯವರಿಗೆ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು.

ನಾನು ಗೆದ್ದ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ. ಗೆದ್ದ ಸ್ಥಾನವನ್ನು ಯಾರೂ ಬಿಟ್ಟುಕೊಡುವುದಿಲ್ಲ. ಸ್ಥಾನ ಬಿಟ್ಟುಕೊಟ್ಟು ಬಿಜೆಪಿ ಸೇರ್ಪಡೆಯಾಗಿದ್ದೇನೆಂದರೆ ಎನ್'ಡಿಎ ಅಭ್ಯರ್ಥಿ ಪರವಾಗಿದ್ದೇನೆ ಎಂದೇ ಅರ್ಥ ಎಂದು ತಿಳಿಸಿದರು.

ಬಳಿಕ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ನಟ ದರ್ಶನ್ ಪ್ರಚಾರ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿ, ಯಾರನ್ನು ಬೆಂಬಲಿಸಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ ಎಂದರು.

ಅವರಿಗೆ ಬೆಂಬಲಿಸಿದವರ ಪರವಾಗಿ ದರ್ಶನ್ ನಿಂತಿದ್ದಾರೆ. ನನ್ನೊಂದಿಗೆ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ನಾನು ಅವರಿಗ ಹೇಳುವುದಿಲ್ಲ. ನಾನು ಅಭ್ಯರ್ಥಿಯಾಗಿದ್ದಾಗಲೂ ಅವರನ್ನು ಪ್ರಚಾರಕ್ಕೆ ಕರೆದಿರಲಿಲ್ಲ. ಅವರೇ ಬಂದು ನನ್ನ ಪರವಾಗಿ ಪ್ರಚಾರ ಮಾಡಿದ್ದರು. ಸುಮಮ್ಮ ಏನು ಕೆಲಸ ಹೇಳುತ್ತಾರೋ ಅದನ್ನೇ ಮಾಡುತ್ತೇನೆ ಎಂದು ದರ್ಶನ್ ಹೇಳಿದ್ದರು. ಇದು ನನ್ನ ವಿಷಯದಲ್ಲಿ ಮಾತ್ರವೇ ಹೊರತು ಬೇರೆಯವರ ವಿಷಯದಲ್ಲಿ ಅಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಅವರು ಯಾವ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

 ಸಂಸದೆ ಸುಮಲತಾ
ಮಂಡ್ಯದಲ್ಲಿ ನಟ Darshan ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: 'ಒಳ್ಳೆ ರಿಸಲ್ಟ್ ಬರುತ್ತೆ'... ಸುಮಲತಾ ಅಂಬರೀಶ್ ಸ್ಪಷ್ಟನೆ!

ಮಂಡ್ಯದಿಂದ ದೂರ ಉಳಿದಿದ್ದಾರೆ ಎಂಬ ನೆಪದಲ್ಲಿ ಮಾಧ್ಯಮಗಳು ವಿವಾದ ಸೃಷ್ಟಿಸುವುದು ಬೇಡ. ಪಕ್ಷದ ಹೈಕಮಾಂಡ್ ಅಥವಾ ಅಭ್ಯರ್ಥಿ ಪರ ಪ್ರಚಾರಕ್ಕೆ ಮನವಿ ಮಾಡಿದರೆ ನಾನು ಪ್ರಚಾರ ಮಾಡುತ್ತೇನೆಂದುಹ ಹೇಳಿದರು.

ಹುಬ್ಬಳ್ಳಿ ವಿದ್ಯಾರ್ಥಿನಿ ಹತ್ಯೆ ಪ್ರಕರಣ ಕುರಿತು ಮಾತನಾಡಿ, ಈ ವಿಚಾರ ಗಮನಕ್ಕೆ ಬಂದಿದೆ. ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ, ಯುವತಿ ಮೃತಪಟ್ಟಿದ್ದು, ಆಕೆಯ ಚಾರಿತ್ರ್ಯ ಹರಣ ನಿಲ್ಲಿಸಬೇಕೆಂದು ಹೇಳಿದರು.

ಯಾರೋ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂರುವುದು ಸರಿಯಲ್ಲ. ಜೊತೆಗೆ ಒಂದು ಸಮುದಾಯವನ್ನು ಮೆಚ್ಚಿಸಲು ಸಮರ್ಥಿಸಿಕೊಳ್ಳುವುದೂ ಕೂಡ ತಪ್ಪು. ವಿಧಾನಸೌಧದಲ್ಲಿ ವ್ಯಕ್ತಿಯೊಬ್ಬ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದಾಗ, ಎಫ್‌ಎಸ್‌ಎಲ್ ವರದಿ ಬರುವ ಮುನ್ನವೇ ಕೆಲವರು ಅದನ್ನು ಸಮರ್ಥಿಸಿಕೊಂಡಿದ್ದರು. ಅದೇ ರೀತಿ ಈ ಪ್ರಕರಣದಲ್ಲೂ ನೇಹಾ ಕೊಲೆಗೆ ವೈಯಕ್ತಿಕ ಕಾರಣಗಳೇ ಕಾರಣ ಎಂದು ಹೇಳಿದ್ದಾರೆ. ಇದು ಸರಿಯಲ್ಲ, ರಾಜ್ಯ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವೈಯಕ್ತಿಕ ಕಾರಣಗಳಿಗಾಗಿ ಒಬ್ಬ ವ್ಯಕ್ತಿಯನ್ನು ಕೊಲ್ಲಲು ಸಾಧ್ಯವಿಲ್ಲ. ರಾಜಕೀಯ ಕೊಲೆ ಅಥವಾ ಸಮುದಾಯ ಹತ್ಯೆ ಎಂದು ವರ್ಗೀಕರಿಸುವ ಕಾನೂನು ಇಲ್ಲ. ಘಟನೆಯಲ್ಲಿ ಧರ್ಮವನ್ನು ತರುವುದು ತಪ್ಪು. ಆದರೆ, ಒಂದು ಸಮುದಾಯವನ್ನು ಸಂತೋಷಪಡಿಸಲು ಘಟನೆಯನ್ನು ಸಮರ್ಥಿಸಿಕೊಳ್ಳುವುದು ಕೂಡ ತಪ್ಪು ಎಂದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com