ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಕಿತ್ತೂರು ರಾಣಿ ಚನ್ನಮ್ಮ ಅವರಂತಹ ದೇಶದ ಮಹಾನ್ ರಾಜ, ರಾಣಿಯರನ್ನು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವಮಾನಿಸಿದ್ದಾರೆ ಎಂದು ಹೇಳಿಕೆ ನೀಡಿದ ಪ್ರಧಾನಮಂತ್ರಿ ನರೇಂದ್ರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಭಾಷಣ ಮಾಡಿದ ಮೋದಿಯವರು ದೊಡ್ಡ ಸುಳ್ಳು ಹೇಳಿದ್ದಾರೆ. ಬರೀ ಸುಳ್ಳುಗಳನ್ನು ಹೇಳುವ ಮೋದಿ ಅವರಿಗೆ ನಾಚಿಕೆಯೇ ಆಗುವುದಿಲ್ಲ. ಬಾಯಿ ಬಿಟ್ಟರೆ ಹಸಿ ಸುಳ್ಳುಗಳೇ ಹೊರಬರುತ್ತವೆ. ಇವರಿಗೆ ಮಾನ– ಮರ್ಯಾದೆಯೇ ಇಲ್ಲ ಎಂದು ಕಿಡಿಕಾರಿದರು.
ಪ್ರತಿ ಬಾರಿ ಬೆಳಗಾವಿಗೆ ಬಂದಾಗಲೂ ಸುಳ್ಳು ಹೇಳುತ್ತಿರುತ್ತಾರೆ. ಛತ್ರಪತಿ ಶಿವಾಜಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಅವರಿಗೆ ಅವಮಾನ ಮಾಡಿದ್ದೇವೆ ಎಂದು ಈಗ ಹೊಸ ಸುಳ್ಳು ಹೇಳಿದ್ದಾರೆ. ರಾಣಿ ಚನ್ನಮ್ಮನ ಜಯಂತಿಯನ್ನು ಮೊದಲ ಬಾರಿಗೆ ಆಚರಿಸಿದ್ದು ನಮ್ಮ ಸರ್ಕಾರ. ಶಿವಾಜಿ ಮಹಾರಾಜರನ್ನು ಗೌರವದಿಂದ ಕಾಣುವ ಜನ ನಾವು. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದೇವೆ. ಹೀಗಾಗಿ ಮೋದಿಯವರ ಅರೆಬೆಂದ ಸುಳ್ಳನ್ನು ಜನರು ನಂಬಬಾರದು, ಕಳೆದ 10 ವರ್ಷಗಳಲ್ಲಿ ಪ್ರಧಾನಿಯವರು ಹೋದಲ್ಲೆಲ್ಲಾ ಸುಳ್ಳುಗಳನ್ನು ಹಬ್ಬಿಸಿದ್ದಾರೆ. ಜನರಿಗೆ ನೀಡಿದ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಗ್ಯಾರಂಟಿ ಯೋಜನೆ ಬಗ್ಗೆ ಕಿಡಿಕಾರುತ್ತಿರುವ ಬಿಜೆಪಿ ನಾಯಕರನ್ನೂ ತರಾಟೆಗೆ ತೆಗೆದುಕೊಡ ಅವರು, ಮೊದಲು ಫಲಾನುಭವಿಗಳನ್ನು ಅವಮಾನಿಸಿದರು. ಈಗ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಮುಂದಿನ 5 ವರ್ಷಗಳ ಕಾಲ ಯೋಜನೆಗಳು ನಿಲ್ಲುವುದಿಲ್ಲ. ಮುಂದಿನ ವರ್ಷಕ್ಕೆ ಗ್ಯಾರಂಟಿ ಯೋಜನೆಗಳ ಕಾರ್ಯಗತಗೊಳಿಸಲು ಅಗತ್ಯವಾದ ಹಣವನ್ನು ಈಗಾಗಲೇ ಕಾಯ್ದಿರಿಸಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಿ ಮನೆಗೆ ಕಳುಹಿಸೋಣ ಎಂದು ಕರೆ ನೀಡಿದರು.
ಡಿಕೆ.ಶಿವಕುಮಾರ್ ಮಾತನಾಡಿ, ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಬಿಕ್ಕಟ್ಟಿನಲ್ಲಿದ್ದ ಜನರಿಗೆ ಗ್ಯಾರಂಟಿ ಯೋಜನೆಗಳು ಸಹಾಯ ಮಾಡಿದೆ. ಯೋಜನೆಯಿಂದ ಬಂದ ಹಣ ಬಳಸಿ ಯಾವ ಮಹಿಳೆಯೂ ತಪ್ಪು ದಾರಿ ಹಿಡಿದಿಲ್ಲ ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಬೆಳಗಾವಿಗೆ ಶೆಟ್ಟರ್ ಕೊಡುಗೆ ಶೂನ್ಯ. ಶೆಟ್ಟರ್ ಅವರು ಬೆಳಗಾವಿಯಿಂದ ಹುಬ್ಬಳ್ಳಿಗೆ ಐಐಟಿ ಮತ್ತು ಐಟಿ-ಬಿಟಿ ಕಂಪನಿಗಳನ್ನು ಸ್ಥಳಾಂತರಿಸಿದ್ದರು ಎಂದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಬ್ರಿಟಿಷರು ದೇಶವನ್ನು ಲೂಟಿ ಮಾಡಿದಾಗ ಜನರ ಜೊತೆ ನಿಂತಿದ್ದು ಕಾಂಗ್ರೆಸ್ ಎಂದು ಹೇಳಿದರು.
Advertisement