ಕಾಂಗ್ರೆಸ್ ಒಕ್ಕಲಿಗರ ದ್ರೋಹಿ, ಡಿಕೆಶಿ ಸುಳ್ಳಿನ ಶೂರ: JDS ಲೇವಡಿ
ಬೆಂಗಳೂರು: ಒಕ್ಕಲಿಗ ವಿರೋಧಿ ಡಿಕೆಶಿಯವರೇ ಒಕ್ಕಲಿಗರ ಅಸ್ಮಿತೆಯನ್ನು ಕೆಣಕಿದ್ದೀರಿ. ನಿಮ್ಮ ಸರಕಾರ, ನಿಮ್ಮ ಮುಖ್ಯಮಂತ್ರಿ, ಸಚಿವರುಗಳಿಗೆ ಬುದ್ಧಿ ಹೇಳುವ ಕನಿಷ್ಠ ಧೈರ್ಯವನ್ನಾದರೂ ಮಾಡಿ. ಅಧಿಕಾರಕ್ಕಾಗಿ ಸಮುದಾಯದಿಂದ ಪೆನ್ನು ಪೇಪರ್ ಭಿಕ್ಷೆ ಬೇಡಿದ ನಿಮಗೆ ಈಗ ಸಮುದಾಯ ಕಾಲ ಕಸವಾಗಿದೆ. ಇದಕ್ಕೆ ನೀವು ಬೆಲೆ ತೆರುತ್ತೀರಿ ಎಂದು ಜೆಡಿಎಸ್ ಸೋಮವಾರ ಹೇಳಿದೆ.
ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧ ಜೆಡಿಎಸ್ ಕೇಸ್ ಹಾಕಿಸಿತ್ತು ಎಂಬ ಉಪ ಮುಖ್ಯಮಂತ್ರಿ ಡಿಕೆಶಿವಕುಮಾರ್ ಹೇಳಿಕೆ ವಿರುದ್ಧ ಜೆಡಿಎಸ್ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಕಾಂಗ್ರೆಸ್ ಒಕ್ಕಲಿಗರ ದ್ರೋಹಿ, ಡಿಕೆ ಶಿವಕುಮಾರ್ ಅವರನ್ನು ಸುಳ್ಳಿನ ಶೂರ ಎಂದು ಲೇವಡಿ ಮಾಡಿದೆ.
ಸುಳ್ಳಿನ ಶೂರ ಡಿಕೆ.ಶಿವಕುಮಾರ್ ಒಕ್ಕಲಿಗ ಸಮುದಾಯ ಮತ್ತು ಪೂಜ್ಯ ಸ್ವಾಮೀಜಿ ಅವರಿಗೆ ನಿಮ್ಮ ಸರಕಾರ ಮಾಡಿಬಿಟ್ಟ ಅಪಚಾರ ಮುಚ್ಚಿಟ್ಟುಕೊಳ್ಳಲು ಇನ್ನೊಬ್ಬರ ಮೇಲೆ ಕೆಸರೆರೆಚುತ್ತಿದ್ದೀರಿ, ಯಾಕೆ? ಸ್ವಾಮೀಜಿ ಮೇಲೆ ನೀವು ಎಫ್ಐಆರ್ ಹಾಕಿದ್ದು ಈಗ ಸಮುದಾಯದ ಸಿಟ್ಟಿಗೆ ಕಾರಣವಾಗಿದೆ. ಒಕ್ಕಲಿಗರ ಆಕ್ರೋಶಕ್ಕೆ ನೀವು ಗುರಿಯಾಗಿದ್ದೀರಿ. ಬೀಸುವ ದೊಣ್ಣೆಯಿಂದ ಪಾರಾಗಲು ಜೆಡಿಎಸ್ ಬಗ್ಗೆ ಹೊಸ ಹುಳುಕು ಹುಡುಕುತ್ತಿದ್ದೀರಿ.
ಜೆಡಿಎಸ್ ಸರಕಾರವಿದ್ದಾಗ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೇಲೆ ಕೇಸು ಹಾಕಲಾಗಿತ್ತು ಎಂದು ಬಾಲಬುದ್ಧಿಯ ನೀವು ಬಡಬಡಿಸಿದ್ದೀರಿ... ಹಳೆಯ ವಿಷಯ ಕೆದಕಿದ ನಿಮಗೆ ಆ ಪ್ರಕರಣ ಏನು? ಅದು ಮುಂದೇನಾಯಿತು? ಎನ್ನುವ ಮಾಹಿತಿ ಇಲ್ಲವೇ? ಆ ಪ್ರಕರಣಕ್ಕೂ ಜೆಡಿಎಸ್ ಪಕ್ಷಕ್ಕೂ ಸಂಬಂಧ ಏನು? ಮುಂದೆ ಆ ಪ್ರಕರಣ ರದ್ದಾಯಿತು, ನಿಮಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದೆ.
ಸ್ವಾಮೀಜಿ ಅವರ ವಿರುದ್ಧ ನಿಮ್ಮ ಇಡೀ ಕಾಂಗ್ರೆಸ್ ಸರಕಾರ ತೊಡೆತಟ್ಟಿ ನಿಂತಿದೆ. ಸಚಿವರುಗಳೆಲ್ಲ ಅವರ ಮೇಲೆ ರಕ್ಕಸರಂತೆ ಮುಗಿಬಿದ್ದಿದ್ದಾರೆ. ಹೇಳಿಕೆಯ ಬಗ್ಗೆ ಪರಮಪೂಜ್ಯರು ವಿಷಾದ ವ್ಯಕ್ತಪಡಿಸಿದ ಮೇಲೆಯೂ ಅವರ ಮೇಲೆ ಸರಕಾರ ಯಾರದೋ ನಿರ್ದಿಷ್ಟ ಚಿತಾವಣೆಗೆ ಒಳಗಾಗಿ ಕಾಲು ಕೆರೆದು ಜಗಳಕ್ಕೆ ನಿಂತಿದೆ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅಪಮಾನಕರವಾಗಿ ವರ್ತಿಸುತ್ತಿದೆ. ಓಲೈಕೆ ರಾಜಕೀಯ, ತುಷ್ಟೀಕರಣದ ಪರಾಕಾಷ್ಠೆ ಇದು. ಒಕ್ಕಲಿಗರಿಗೆ ಇದೆಲ್ಲಾ ಅರ್ಥವಾಗುತ್ತಿದೆ.
ಒಕ್ಕಲಿಗ ವಿರೋಧಿ ಡಿಕೆಶಿಯವರೇ.. ನಿಮಗಿದು ತರವೇ? ಒಕ್ಕಲಿಗರ ಅಸ್ಮಿತೆಯನ್ನು ಕೆಣಕಿದ್ದೀರಿ.. ನಿಮ್ಮ ಸರಕಾರ, ನಿಮ್ಮ ಮುಖ್ಯಮಂತ್ರಿ, ಸಚಿವರುಗಳಿಗೆ ಬುದ್ಧಿ ಹೇಳುವ ಕನಿಷ್ಠ ಧೈರ್ಯವನ್ನಾದರೂ ಮಾಡಿ. ಅಧಿಕಾರಕ್ಕಾಗಿ ಸಮುದಾಯದಿಂದ ಪೆನ್ನು ಪೇಪರ್ ಭಿಕ್ಷೆ ಬೇಡಿದ ನಿಮಗೆ ಈಗ ಸಮುದಾಯ ಕಾಲ ಕಸವಾಗಿದೆ. ಇದಕ್ಕೆ ನೀವು ಬೆಲೆ ತೆರುತ್ತೀರಿ ಎಂದು ಕಿಡಿಕಾರಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ