ದೇವಸ್ಥಾನದ ಹುಂಡಿಗೆ ಸರ್ಕಾರ ಕೈ ಹಾಕಿದೆ ಎಂದು ಸುಳ್ಳು ಹರಡುತ್ತಿದ್ದಾರೆ: ಬಿಜೆಪಿ ವಿರುದ್ಧ ಯತೀಂದ್ರ ಕಿಡಿ

ರಾಜ್ಯ ಸರ್ಕಾರ ದೇವಸ್ಥಾನದ ಹಣವನ್ನು ಬಳಸಿಕೊಂಡಿದೆ ಎಂದು ಪ್ರತಿಪಕ್ಷ ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಭಾನುವಾರ ಆರೋಪಿಸಿದರು.
ಡಾ ಯತೀಂದ್ರ ಸಿದ್ದರಾಮಯ್ಯ
ಡಾ ಯತೀಂದ್ರ ಸಿದ್ದರಾಮಯ್ಯ
Updated on

ಗದಗ: ರಾಜ್ಯ ಸರ್ಕಾರ ದೇವಸ್ಥಾನದ ಹಣವನ್ನು ಬಳಸಿಕೊಂಡಿದೆ ಎಂದು ಪ್ರತಿಪಕ್ಷ ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಭಾನುವಾರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟನೆ ನೀಡಿದ್ದು, ಸಚಿವ ರಾಮಲಿಂಗಾರೆಡ್ಡಿ ಕೂಡ ಈ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ದೇವಸ್ಥಾನದ ಹಣವನ್ನು ದೇವಸ್ಥಾನಗಳಿಗೆ ಮಾತ್ರ ಬಳಸಲಾಗುತ್ತಿದೆ. ಆದರೆ, ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಬ್ಬಿಸುತ್ತಿದೆ ಎಂದು ಕಿಡಿಕಾರಿದರು.

ಡಾ ಯತೀಂದ್ರ ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳ ವಿರೋಧಿಸುತ್ತಿರುವ ಬಿಜೆಪಿ-ಜೆಡಿಎಸ್ ತಕ್ಕ ಬೆಲೆ ತೆರಬೇಕಾಗುತ್ತದೆ: ಸಿಎಂ ಸಿದ್ದರಾಮಯ್ಯ

ಇದೇ ವೇಳೆ ಸಂಸದ ಅನಂತಕುಮಾರ ಹೆಗಡೆ, ಮುಖ್ಯಮಂತ್ರಿಗೆ ಸಿದ್ರಾಮುಲ್ಲಾಖಾನ್ ಎಂಬ ಹೇಳಿಕೆ ವಿಚಾರಕ್ಕೆ ಆಕ್ರೋಶಗೊಂಡ ಅವರು, ಯಾರು ಎಲ್ಲ ಸಮುದಾಯಕೋಸ್ಕರ ಕೆಲಸ ಮಾಡುತ್ತಾರೆಯೋ ಅವರನ್ನು ಒಂದು ಸಮುದಾಯದ ಪರ ಎಂದು ಬಿಂಬಿಸುತ್ತಾರೆ. ಇದು ಬಿಜೆಪಿಗರ ಹಳೆಯ ಟ್ಯಾಕ್ಟಿಕ್ಸ್ ಎಂದರು.

ಅನಂತಕುಮಾರ್ ಹೆಗಡೆ 5 ವರ್ಷ ಏನೂ ಕೆಲಸ ಮಾಡಿಲ್ಲ, ಅವರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. 5 ವರ್ಷ ಜನರ ಮುಂದೆ ಬರಲಿಲ್ಲ, ಪಾರ್ಲಿಮೆಂಟ್‌ನಲ್ಲಿ ಒಂದೂ ಪ್ರಶ್ನೆ ಕೇಳಲಿಲ್ಲ, ಈಗ ಎಲೆಕ್ಷನ್ ಬಂದಿದೆ ಎಂದು ಹಿಂದೂ -ಮುಸ್ಲಿಂ ಮಧ್ಯೆ ಭಿನ್ನಾಭಿಪ್ರಾಯ ತರಲು ಯತ್ನಿಸುತ್ತಿದ್ದಾರೆ. ಕರ್ನಾಟಕದ ಜನರ ಪರ ಒಂದೇ ಒಂದು ಪ್ರಶ್ನೆ ಕೇಳದ ಅನಂತಕುಮಾರ್ ಅವರಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

ಮುಖ್ಯಮಂತ್ರಿ ನಿವಾಸಕ್ಕೆ ಖರ್ಚಾಗಿರುವ ಹಣದ ಕುರಿತು ಚರ್ಚೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬದಲಾದಾಗ ಕೆಲವು ರಿಪೇರಿ ನಡೆಯುವುದು ಹೊಸತಲ್ಲ. ಖರ್ಚಾಗೋದು ಸರ್ಕಾರಿ ನಿವಾಸಕ್ಕೆ ಸ್ವಂತ ನಿವಾಸಕ್ಕಲ್ಲ, ಮುಂದೆ ಸಿಎಂ ಆಗುವವರೂ ಆ ಸವಲತ್ತು ಪಡೆಯುತ್ತಾರೆ. ಈ ಹಿಂದೆ ಸಿಎಂ ಆದವರೂ ಸಾಕಷ್ಟು ಖರ್ಚು ಮಾಡಿದ್ದಾರೆ. ತಂದೆಯವರು ಸಿಎಂ ಆಗಿದ್ದಾಗ ಆ ಮನೆಯಲ್ಲಿ ಲಿಫ್ಟ್ ಇರಲಿಲ್ಲ. ನಂತರದ ಮುಖ್ಯಮಂತ್ರಿಗಳು ಅಲ್ಲಿ ಲಿಫ್ಟ್ ಹಾಕಿಸಿದ್ದಾರೆ. ಸರಿ ಸುಮಾರು 75 ವರ್ಷ ಮೇಲಾಗಿರುವ ನಿವಾಸಗಳು ರಿಪೇರಿ ವರ್ಕ್ ಅತ್ಯವಶ್ಯ, ಅನಿವಾರ್ಯವಾದ ಖರ್ಚು, ದುಂದುವೆಚ್ಚವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಡಾ ಯತೀಂದ್ರ ಸಿದ್ದರಾಮಯ್ಯ
ಹಿಂದೂ ಧಾರ್ಮಿಕ ದತ್ತಿ ಮಸೂದೆಗೆ ವಿಧಾನ ಪರಿಷತ್​ನಲ್ಲಿ ಸೋಲು: ಸರ್ಕಾರಕ್ಕೆ ಮುಖಭಂಗ; ಜೈ ಶ್ರೀರಾಮ ಎಂದ ಬಿಜೆಪಿ

ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನಕ್ಕೆ ಅಪ್ಪನ ಮನೆಯ ಹಣ ಅಲ್ಲ ಎಂಬ ಅನಂತಕುಮಾರ್ ಹೆಗಡೆ ಹೇಳಿಕೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಅದು ಕರ್ನಾಟಕದಿಂದ ಕಟ್ಟಿರುವ ತೆರಿಗೆ, ಕೇಂದ್ರದ ಅಪ್ಪನ ಮನೆಯದ್ದಲ್ಲ ಅಂತಾ ನಾವೂ ಮಾತನಾಡುತ್ತೇವೆ. ಕೇಂದ್ರ ಸರ್ಕಾರ ಎಲ್ಲರಿಗೂ ನ್ಯಾಯಯುತ ಹಂಚಿಕೆ ಮಾಡಿ ಅಂತಾ ಹೇಳುತ್ತಿದ್ದೇವೆ. ನಾವು ಕಟ್ಟಿದ ಅಷ್ಟೂ ತೆರಿಗೆ ನಮಗೆ ಕೊಡಿ ಅಂತಾ ಕೇಳುತ್ತಿಲ್ಲ ಎಂದರು.

ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಚಳವಳಿ ವಿಚಾರದ ಹಿಂದೆ ಕಾಂಗ್ರೆಸ್ ಕೈವಾಡ ಎನ್ನುವ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿ, ಗೋ ಬ್ಯಾಕ್ ಅಭಿಯಾನದ ಹಿಂದೆ ನಮ್ಮ ಪಕ್ಷದ ಕೈವಾಡ ಹೇಗೆ ಇರೋದಕ್ಕೆ ಸಾಧ್ಯ? ಅವರ ಪಕ್ಷದ ಕಾರ್ಯವೈಖರಿಯಿಂದ ಬೇಸತ್ತು ಆ ರೀತಿ ಮಾಡಿದ್ದಾರೆ ಅಷ್ಟೇ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com