ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಮತ್ತೆ ದಲಿತ ನಾಯಕರ ಸಭೆ; ಮೂವರು ಡಿಸಿಎಂ ನೇಮಕಕ್ಕೆ ಹೆಚ್ಚಿದ ಒತ್ತಡ

ಕರಸೇವಕನ ಬಂಧನಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಪ್ರತಿಭಟನೆಯ ನಡುವೆಯೇ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಂತರಿಕ ಕಲಹ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್‌ನ ಪ್ರಮುಖ ದಲಿತ ನಾಯಕರು ಇಲ್ಲಿ ಸಭೆ ನಡೆಸಿ ಹೆಚ್ಚಿನ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲು ಒತ್ತಾಯಿಸಿದ್ದಾರೆ.
ಎಚ್‌ಸಿ ಮಹದೇವಪ್ಪ - ಪರಮೇಶ್ವರ್ - ಸತೀಶ್ ಜಾರಕಿಹೊಳಿ
ಎಚ್‌ಸಿ ಮಹದೇವಪ್ಪ - ಪರಮೇಶ್ವರ್ - ಸತೀಶ್ ಜಾರಕಿಹೊಳಿ

ಬೆಂಗಳೂರು: ಕರಸೇವಕನ ಬಂಧನಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಪ್ರತಿಭಟನೆಯ ನಡುವೆಯೇ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಂತರಿಕ ಕಲಹ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್‌ನ ಪ್ರಮುಖ ದಲಿತ ನಾಯಕರು ಇಲ್ಲಿ ಸಭೆ ನಡೆಸಿ ಹೆಚ್ಚಿನ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲು ಒತ್ತಾಯಿಸಿದ್ದಾರೆ.

ಲೋಕೋಪಯೋಗಿ ಸಚಿವ ಹಾಗೂ ದಲಿತ ಮುಖಂಡ ಸತೀಶ ಜಾರಕಿಹೊಳಿ ಅವರ ನಿವಾಸದಲ್ಲಿ ಸಭೆ ನಡೆಯಿತು. ಗೃಹ ಸಚಿವ ಡಾ. ಜಿ ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಡಾ. ಎಚ್‌ಸಿ ಮಹದೇವಪ್ಪ, ಆಹಾರ ಸಚಿವ ಕೆಎಚ್ ಮುನಿಯಪ್ಪ ಹಾಗೂ ಸಹಕಾರ ಸಚಿವ ಕೆಎನ್ ರಾಜಣ್ಣ ಔತಣಕೂಟದ ಬಳಿಕ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಇವರೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಳಯದಲ್ಲಿ ಗುರುತಿಸಿಕೊಂಡವರು.

ಡಿಸಿಎಂ ಡಿಕೆ ಶಿವಕುಮಾರ್‌ ಪ್ರಭಾವವನ್ನು ಕಡಿಮೆ ಮಾಡಲು ರಣತಂತ್ರ ರೂಪಿಸಲು ಈ ಸಭೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಡಿಕೆ ಶಿವಕುಮಾರ್ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ವಲಯದ ಮೂಲಕ ಹೆಚ್ಚು ಡಿಸಿಎಂ ಹುದ್ದೆ ರಚಿಸುವ ವಿಷಯವನ್ನು ಚಾಕಚಕ್ಯತೆಯಿಂದ ಮುನ್ನೆಲೆಗೆ ತಂದಿದ್ದಾರೆ ಎನ್ನಲಾಗಿದೆ. ಈ ನಡೆಯು ಈಗಿರುವ ಸ್ಥಾನವನ್ನು ಉಳಿಸಿಕೊಳ್ಳಲು ಡಿಕೆ ಶಿವಕುಮಾರ್ ಅವರಿಗೆ ಸವಾಲಾಗಿ ಪರಿಣಮಿಸಲಿದೆ. 

ಗುರುವಾರ ತಡರಾತ್ರಿವರೆಗೂ ಸಭೆ ನಡೆದಿದ್ದು, ಇನ್ನೂ ಎರಡು ಡಿಸಿಎಂ ಹುದ್ದೆ ಸೃಷ್ಟಿಸಿ ಅದರಲ್ಲಿ ಒಂದನ್ನು ದಲಿತ ಸಮುದಾಯಕ್ಕೆ ನೀಡುವ ಕುರಿತು ಹೈಕಮಾಂಡ್ ಮುಂದೆ ಬೇಡಿಕೆ ಇಡಲು ಮುಖಂಡರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ದೆಹಲಿ ಪ್ರವಾಸದ ವೇಳೆ ಈಗಾಗಲೇ ಮೂರು ಡಿಸಿಎಂ ಹುದ್ದೆಗಳ ಬೇಡಿಕೆಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದಲಿತ ಮತ್ತು ಅಲ್ಪಸಂಖ್ಯಾತರ ಮುಖಂಡರನ್ನು ಡಿಸಿಎಂ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಅವರು ಹೇಳಿಕೆ ನೀಡಿದ್ದರು.

ತಮ್ಮ ಬೆಂಬಲಿಗರು ಮತ್ತು ಧಾರ್ಮಿಕ ಮಠಾಧೀಶರ ಬೇಡಿಕೆಯನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತಂದಿರುವುದಾಗಿ ಜಾರಕಿಹೊಳಿ ತಿಳಿಸಿದರು.

ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ಆಗಿಯೇ ಇರಲಿದ್ದಾರೆ ಎಂದು ಹೇಳಿದ ಸಚಿವ ಕೆಎನ್ ರಾಜಣ್ಣ, ಮೂರು ಡಿಸಿಎಂ ಹುದ್ದೆ ಸೃಷ್ಟಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ಒಂದು ವೇಳೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯಾದರೆ ದಲಿತ ನಾಯಕರಿಗೆ ಸಿಎಂ ಸ್ಥಾನ ನೀಡಬೇಕು ಎಂಬುದು ಸಿಎಂ ಸಿದ್ದರಾಮಯ್ಯ ಪಾಳಯದ ಆಗ್ರಹವಾಗಿದೆ. ಇದು ಡಿಕೆ ಶಿವಕುಮಾರ್‌ ಅವರಿಗೆ ಇನ್ನಷ್ಟು ಜಟಿಲ ಪರಿಸ್ಥಿತಿಯನ್ನು ತಂದಿಟ್ಟಿದೆ.

ಕಾಂಗ್ರೆಸ್ ಹೈಕಮಾಂಡ್‌ಗೆ ಹತ್ತಿರವಾಗಿರುವ ಡಿಕೆ ಶಿವಕುಮಾರ್ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವತ್ತ ಮತ್ತು ಎಚ್ಚರಿಕೆಯ ನಡೆಗಳತ್ತ ಗಮನ ಹರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಉಳಿದ 2.5 ವರ್ಷಗಳ ಅವಧಿಗೆ ಅವರೇ ಸಿಎಂ ಆಗಲಿದ್ದಾರೆ ಎಂದು ಶಿವಕುಮಾರ್ ಪಾಳಯ ಹೇಳಿಕೊಂಡು ಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com