ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಿದರೆ ಲೋಕಸಭೆ ಚುನಾವಣೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಇದೆ: ಸಚಿವ ಪರಮೇಶ್ವರ್

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಿದರೆ ಲೋಕಸಭಾ ಚುನಾವಣೆಗೆ ಅನುಕೂಲವಾಗಲಿದೆ ಎಂದು ಹಲವು ಸಚಿವರು ಸುರ್ಜೇವಾಲಾ ಬಳಿ ಮನವಿ ಮಾಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಮಂಗಳವಾರ ಹೇಳಿದ್ದಾರೆ.
ಸಚಿವ ಪರಮೇಶ್ವರ್
ಸಚಿವ ಪರಮೇಶ್ವರ್

ಬೆಂಗಳೂರು: ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಿದರೆ ಲೋಕಸಭಾ ಚುನಾವಣೆಗೆ ಅನುಕೂಲವಾಗಲಿದೆ ಎಂದು ಹಲವು ಸಚಿವರು ಸುರ್ಜೇವಾಲಾ ಬಳಿ ಮನವಿ ಮಾಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಮಂಗಳವಾರ ಹೇಳಿದ್ದಾರೆ.
    
ಸಚಿವರ ಸುರ್ಜೇವಾಲ ಭೇಟಿ ವಿಚಾರ ಕುರಿತು ಮಾತನಾಡಿದ ಅವರು, ಲೋಕಸಭೆ ‌ಚುನಾವಣೆ ಬರುತ್ತಿದೆ. ನೀವು ಹಿರಿಯರು. ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಚರ್ಚೆ ಮಾಡಲು ಸಚಿವರನ್ನು ಅವರು ಆಹ್ವಾನಿಸಿದ್ದರು. ಆಗ ಕೆಲವು ಸಚಿವರು ಉಪ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ ಎಂದು ಹೇಳಿದರು.

‘ಉಪ ಮುಖ್ಯಮಂತ್ರಿ ಮಾಡಿದರೆ ಅನುಕೂಲ ಆಗುತ್ತದೆ ಎಂದು ಕೆಲವು ಸಚಿವರು ಹೇಳಿದರು. ಹೈಕಮಾಂಡ್‌ ಜೊತೆ ಈ ವಿಚಾರವಾಗಿ ಚರ್ಚಿಸುವುದಾಗಿ ಸುರ್ಜೇವಾಲ ಹೇಳಿದರು. ಉಪ ಮುಖ್ಯಮಂತ್ರಿ ಹುದ್ದೆ ವಿಷಯವಾಗಿಯೇ ಚರ್ಚಿಸಲು ಅವರು ಸಭೆ ಕರೆದಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ಹೆಚ್ಚುವರಿ ಉಪ ಮುಖ್ಯಮಂತ್ರಿ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ‌. ನಾವು ಸಲಹೆ ಮಾಡಬಹುದು. ಸಲಹೆ ತೆಗೆದುಕೊಳ್ಳುವುದು, ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಉಪ ಮುಖ್ಯಮಂತ್ರಿ ಹುದ್ದೆ ವಿಚಾರ ಪಕ್ಷದ ಆಂತರಿಕ ವಿಷಯ. ಸಾಧಕ-ಬಾಧಕ ನೋಡಿ ಹೈಕಮಾಂಡ್‌ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.

ನಾವು ಲೋಕಸಭೆ ಬಗ್ಗೆ ಚರ್ಚೆ ಮಾಡಿದ್ದೇವೆ. ಅಭ್ಯರ್ಥಿಗಳು, ಚುನಾವಣಾ ತಂತ್ರಗಾರಿಕೆ ಹೇಗಿರಬೇಕು ಎಂಬ ಬಗ್ಗೆಯೂ ವಿಚಾರ ವಿನಿಮಯ ಮಾಡಿದ್ದೇವೆ. ನಾನು ಎರಡು ಬಾರಿ ಕೆಪಿಸಿಸಿ ಅಧ್ಯಕ್ಷನಾಗಿ ಎರಡು ಚುನಾವಣೆ ಎದುರಿಸಿದ್ದೆ. ಅ ವಿಚಾರಗಳನ್ನು ತಿಳಿಸಿದ್ದೇನೆ. ಅದು ಬಿಟ್ಟು ದೊಡ್ಡ ಪ್ರಮಾಣದ ಚರ್ಚೆ ಆಗಿಲ್ಲ.

ಸಭೆಯಲ್ಲಿ ಸಚಿವರ ಸ್ಪರ್ಧೆ ವಿಚಾರ ಸಭೆಯಲ್ಲಿ ಚರ್ಚೆ ಆಗಿಲ್ಲ. ಆದರೆ, ಸಚಿವರು ಸ್ಪರ್ಧೆ ಮಾಡುವ ಪರಿಸ್ಥಿತಿ ಬಂದರೆ ಸ್ಪರ್ಧಿಸಬೇಕಾಗುತ್ತದೆ ಎಂದು ಸುರ್ಜೇವಾಲ ಹೇಳಿದ್ದಾರೆ. ಕಳೆದ ಬಾರಿ ಕೃಷ್ಣ ಬೈರೇಗೌಡ ಅವರು ಸ್ಪರ್ಧೆ ಮಾಡಿರುವುದನ್ನು ಅವರು ಉದಾಹರಣೆ ಕೊಟ್ಟು ಹೇಳಿದ್ದಾರೆ’ ಎಂದರು.

28 ಸಚಿವರನ್ನು ದೆಹಲಿಗೆ ಬರಲು ವರಿಷ್ಠರು ಹೇಳಿದ್ದಾರೆ. ಇದೇ 11ರಂದು ಎಲ್ಲರೂ ಹೋಗುತ್ತೇವೆ. ಒಬ್ಬೊಬ್ಬ ಸಚಿವರಿಗೆ ಒಂದೊಂದು ಲೋಕಸಭೆ ಕ್ಷೇತ್ರ ಜವಾಬ್ದಾರಿ ಕೊಟ್ಟಿದ್ದಾರೆ. ಅವರೆಲ್ಲರನ್ನೂ ಕರೆದು ಸಲಹೆ ಸೂಚನೆ ಕೊಡುತ್ತಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ ತರಲು ಹೇಳಿದ್ದಾರೆ. ನಮ್ಮ ಕ್ಷೇತ್ರದ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಕೊಡುತ್ತೇವೆ. ಅಂತಿಮವಾಗಿ ಹೈಕಮಾಂಡ್ ಯಾರು ಅಭ್ಯರ್ಥಿ ಎಂದು ನಿರ್ಧರಿಸಲಿದೆ. ಅಭ್ಯರ್ಥಿಗಳ ಪಟ್ಟಿ ಯಾವಾಗ ಬಿಡುಗಡೆಯಾಗುತ್ತದೊ ಗೊತ್ತಿಲ್ಲ. ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇವೆಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com