ಬೀದರ್: ಐಟಿ, ಇಡಿ, ಸಿಬಿಐ ಬಳಸಿ ಜಗದೀಶ್ ಶೆಟ್ಟರ್ ರನ್ನು ಬಿಜೆಪಿಯವರು ಕರೆದೊಯ್ದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ವಿಚಾರವಾಗಿ ಮುನಿಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಅಚ್ಚರಿ ಬೆಳವಣಿಗೆಯಲ್ಲಿ ಬಿಜೆಪಿಗೆ ವಾಪಸ್ ಆಗಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಅರಣ್ಯ ಸಚಿವ ಹಾಗೂ ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆ, ಜಗದೀಶ್ ಶೆಟ್ಟರ್ ರನ್ನು ಐಟಿ, ಇಡಿ, ಸಿಬಿಐ ಬಳಸಿ ಬಿಜೆಪಿಯವರು ಕರೆದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಂಡ್ರೆ, 'ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬಿಜೆಪಿಯಲ್ಲಿ ಎಷ್ಟು ಹಿಂಸೆ, ಅವಮಾನ ಅನುಭವಿಸಿದ್ದಾರೆ. ಬಿಜೆಪಿಯಿಂದ ಹೊರಗೆ ಬಂದ ನಂತರ ಅವರು ಯಾವ ರೀತಿಯ ಹೇಳಿಕೆ ಕೊಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಸ್ವಾಯತ್ತ ಸಂಸ್ಥೆಗಳಾದ ಇಡಿ, ಐ.ಟಿ., ಸಿಬಿಐ ದುರ್ಬಳಕೆ ಮಾಡಿಕೊಂಡು ಎಲ್ಲರನ್ನು ಹೆದರಿಸಿ ಅನೇಕ ಹಿರಿಯ ಮುಖಂಡರಿಗೆ ಬಿಜೆಪಿಯವರು ಗಾಳ ಹಾಕುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಜಗದೀಶ ಶೆಟ್ಟರ್ ಅವರು ಮರಳಿ ಬಿಜೆಪಿಗೆ ಏಕೆ ಹೋಗಿದ್ದಾರೆ ಎನ್ನುವುದನ್ನು ಮಾಧ್ಯಮವರು ಅವರನ್ನೇ ಪ್ರಶ್ನಿಸಿ ಎಂದು ಹೇಳಿದರು.
ಕಾಂಗ್ರೆಸ್ಗೆ ಬರುವವರು ಬಹಳ ಜನ ಇದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಹುಟ್ಟಿಕೊಂಡಿರುವ ಪಕ್ಷವಲ್ಲ. ಕಾಂಗ್ರೆಸ್ ಪಕ್ಷ ಆಂದೋಲನ. ಅದು ಜನರ ಒಳಿತಿಗಾಗಿ ಇರುವ ಪಕ್ಷ. ಎಲ್ಲರನ್ನೂ ಒಳಗೊಂಡಂತೆ ಈ ರಾಷ್ಟ್ರದ ಅಭಿವೃದ್ಧಿ ಮಾಡಬೇಕೆನ್ನುವುದು ನಮ್ಮ ಗುರಿ. ಭಾರತ ಬಹುತ್ವದ ರಾಷ್ಟ್ರ. ಇಲ್ಲಿ ಎಲ್ಲ ಜಾತಿ, ಜನಾಂಗದವರಿಗೆ ಸಮಾನ ಅವಕಾಶಗಳಿವೆ. ಪ್ರಜಾಪ್ರಭುತ್ವದಲ್ಲಿ ಜನ ನಂಬಿಕೆ ಇಟ್ಟಿದ್ದಾರೆ. ಸುಮ್ಮನೆ ಹೇಳಿಕೆ ಕೊಡಬಾರದು. ಕೇಂದ್ರ ಸರ್ಕಾರ ಜನರಿಗೆ ಮರಳು ಮಾಡುವುದು ಮೊದಲು ಬಿಡಬೇಕು ಎಂದರು.
ನಯಾ ಪೈಸೆ ಬರ ಪರಿಹಾರ ಬಂದಿಲ್ಲ
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಇದುವರೆಗೆ ನಯಾ ಪೈಸೆ ಬರ ಪರಿಹಾರ ಬಂದಿಲ್ಲ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಅವರನ್ನು ಭೇಟಿ ಮಾಡಿ ಕೋರಿದರೂ ಅನುದಾನ ಕೊಟ್ಟಿಲ್ಲ. ?4 ಲಕ್ಷ ಕೋಟಿ ರಾಜ್ಯದಿಂದ ತೆರಿಗೆ ಹಣ ಹೋಗಿದೆ. ಹೀಗಿದ್ದಾಗಲೂ ಪರಿಹಾರ ಕೊಡದಿದ್ದರೆ ಹೇಗೆ? 15ನೇ ಹಣಕಾಸು ಯೋಜನೆಯಡಿಯಲ್ಲಿ ಕೇಂದ್ರದಿಂದ ಕಡಿಮೆ ಅನುದಾನ ಬಂದಿದೆ ಎಂದು ಖಂಡ್ರೆ ಆರೋಪಿಸಿದರು.
Advertisement