ವಾಲ್ಮೀಕಿ ನಿಗಮ ಹಗರಣ: ತನಿಖೆ ಪೂರ್ಣಗೊಳ್ಳುವವರೆಗೂ ಸಿಎಂ ಕೆಳಗಿಳಿಯಲಿ; BJP-JDS ಆಗ್ರಹ

ಅಧಿವೇಶನದ ಆರಂಭದಿಂದಲೂ ಮಹರ್ಷಿ ವಾಲ್ಮೀಕಿ ನಿಗಮದ ರೂ,187 ಕೋಟಿ ಅಕ್ರಮದ ಕುರಿತಂತೆ ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
Karnataka Legislative Council
ವಿಧಾನಪರಿಷತ್ (ಸಂಗ್ರಹ ಚಿತ್ರ)online desk
Updated on

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪಂಗಡ ಅಭಿವೃದ್ಧಇ ನಿಗಮದ ಅಕ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿರುವ ವಿರೋಧ ಪಕ್ಷಗಳು, ಗುರುವಾರವೂ ವಿಧಾನಪರಿಷತ್ತಿನಲ್ಲಿ ಅಕ್ರಮದ ತನಿಖೆ ಮುಗಿಯುವವರೆಗೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಆಗ್ರಹಿಸಿದವು.

ಅಧಿವೇಶನದ ಆರಂಭದಿಂದಲೂ ಮಹರ್ಷಿ ವಾಲ್ಮೀಕಿ ನಿಗಮದ ರೂ,187 ಕೋಟಿ ಅಕ್ರಮದ ಕುರಿತಂತೆ ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

ಗುರುವಾರ ಪ್ರಶ್ನೋತ್ತರ ಕಲಾಪದ ನಂತರ ನಿಯಮ 68ರ ಅಡಿಯಲ್ಲಿ ಮುಂದುವರೆದ ಚರ್ಚೆಯಲ್ಲಿ ಜೆಡಿಎಸ್ ನಾಯಕ ಭೋಜೇಗೌಡ, ರಾಜು, ಬಿಜೆಪಿಯ ಡಿ.ಎಸ್.ಅರುಣ್, ಸಂಕನೂರು, ಭಾರತಿ ಶೆಟ್ಟಿ ಸೇರಿದಂತೆ ಇತರರು ಮಾತನಾಡಿ, ಪ್ರಕರಣ ಗಂಭೀರತೆಯನ್ನು ಅರಿಸು ಎಸ್ಐಟಿ ರದ್ದು ಮಾಡಿ ತನಿಖೆಯ ಹೊಣೆಯನ್ನು ಸಿಬಿಐಗೆ ನೀಡಬೇಕು ಎಂದು ಒತ್ತಾಯಿಸಿದರು. ಜೊತೆಗೆ ಅಕ್ರಮ ತಡೆಯಲು ಸಿದ್ದರಾಮಯ್ಯ ವಿಫಲವಾಗಿದ್ದು, ಅದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆಯೂ ಒತ್ತಾಯಿಸಿದರು. ಇದೇ ವೇಳೆ ಅಕ್ರಮಗಳ ಬಗ್ಗೆ ಗಮನ ಹರಿಸದ ಹಣಕಾಸು ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು.

Karnataka Legislative Council
ವಿಧಾನಸಭೆ ಕಲಾಪ: 3ನೇ ದಿನವೂ ವಾಲ್ಮೀಕಿ ಹಗರಣದ್ದೇ ಸದ್ದು; ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ

ಬಿಜೆಪಿಯ ನವೀನ್ ಕುಮಾರ್ ಮಾತನಾಡಿ, ಸರ್ಕಾರದ ಕಣ್ಗಾವಲಿನಲ್ಲಿರಬೇಕಾದ ನಿಗಮಗಳ ಹಣ ಮದ್ಯದಂಗಡಿ, ಆಭರಣದಂಗಡಿಗಳಿಗೆ ಸೇರಿದೆ. ಚುನಾವಣಾ ವೆಚ್ಚಕ್ಕೆ ಬಳಕೆಯಾಗಿದೆ. ಜನರು ಕಷ್ಟಪಟ್ಟು ಸರ್ಕಾರದ ಖಜಾನೆ ತುಂಬಿದ ಹಣ ಸಿದ್ದರಾಮಯ್ಯ ಅವರ ಜೇಬು ಸೇರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಬಿಜೆಪಿ ಸರ್ಕಾರದ ಅವಧಿಯಲ್ಲಾದ ಭೋವಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಟ್ರಕ್ ಟರ್ಮಿನಲ್ ಸೇರಿದಂತೆ ಇನ್ನಿತರ ನಿಗಮಗಳಲ್ಲಾಗಿರುವ ಅಕ್ರಮಗಳು ಬಿಜೆಪಿಯ ಯಾವ ನಾಯಕರ ಜೇಬು ತುಂಬಿಸಿದ್ದವು ಎಂದು ತಿರುಗೇಟು ನೀಡಿದರು. ಜೊತೆಗೆ ಸಿದ್ದರಾಮಯ್ಯ ಅವರ ಹೆಸರನ್ನು ಕಡತದಿಂದ ತೆಗೆಯುವಂತೆಯೂ ಆಗ್ರಹಿಸಿದರು. ಅದಕ್ಕೆ ಸ್ಪಂದಿಸಿದ ಸಭಾಪತಿಗಳು ಸಿಎಂ ಪದವನ್ನು ಉಳಿಸಿಕೊಂಡು ಸಿದ್ದರಾಮಯ್ಯ ಹೆಸರನ್ನು ಕಡತದಿಂದ ತೆಗೆಯುವಂತೆ ಸೂಚಿಸಿದರು.

ಬಿಜೆಪಿ ಸದಸ್ಯರ ಆರೋಪಗಳಿಗೆ ಕಾಂಗ್ರೆಸ್ ನ ಐವಾನ್ ಡಿಸೋಜಾ, ಯು.ಬಿ.ವೆಂಕಟೇಶ್ ತಮ್ಮ ಭಾಷಣದಲ್ಲಿ ತಿರುಗೇಟು ನೀಡಿ, ವಾಲ್ಮೀಕಿ ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷಿಸಲು ಸರ್ಕಾರ ಸಿದ್ಧವಿದೆ. ಕಾಣೆಯಾಗಿದ್ದ ನಿಗಮದ 89 ಕೋಟಿ ರೂಗಳಲ್ಲಿ ಈಗಾಗಲೇ ರೂ.85.25 ಕೋಟಿ ಗಳನ್ನು ಎಸ್ಐಟಿ ಹಿಂಪಡೆದಿದೆ. ವಾಲ್ಮೀಕಿ ಅಕ್ರಮದ ಬಗ್ಗೆ ಮಾತನಾಡುವ ಬಿಜೆಪಿ ಸದಸ್ಯರು ತಮ್ಮ ಅವಧಿಯಲ್ಲಾಗಿರುವ ಹಗರಣಗಳ ಬಗ್ಗೆಯೂ ಗಂಭೀರವಾಗಿ ಮಾತನಾಡಿ ತನಿಖೆಗೆ ಆಗ್ರಹಿಸಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com