ವಾಲ್ಮೀಕಿ ನಿಗಮ ಹಗರಣ: ಸಚಿವ ಬಿ ನಾಗೇಂದ್ರ ಅವರ ರಾಜೀನಾಮೆ ಕೇಳಿಲ್ಲ; ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿ ಬಿ ನಾಗೇಂದ್ರ ಅವರ ರಾಜೀನಾಮೆಯನ್ನು ಕೇಳಿಲ್ಲ. ಎಸ್ಟಿ ಅಭಿವೃದ್ಧಿ ನಿಗಮದ ಅವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಯ ವರದಿಯನ್ನು ಆಧರಿಸಿ ಆ ಬಗ್ಗೆ ನಿರ್ಧರಿಸುವುದಾಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಅವರ (ನಾಗೇಂದ್ರ) ರಾಜೀನಾಮೆ ಕೇಳಿಲ್ಲ. ಎಸ್ಐಟಿ ವರದಿ ಇನ್ನೂ ಬಂದಿಲ್ಲ. ಕಳೆದೆರಡು ದಿನಗಳ ಹಿಂದೆಯೇ ಎಸ್ಐಟಿ ರಚನೆಯಾಗಿತ್ತು. ಅವರು ತಮ್ಮ ವರದಿಯಲ್ಲಿ ಏನು ನೀಡುತ್ತಾರೆಂದು ನೋಡೋಣ. ಅವರು ವರದಿ ಸಲ್ಲಿಸಿದ ನಂತರವೇ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ತಿಳಿಸಿದರು.
ಸಚಿವ ನಾಗೇಂದ್ರ ಅವರಿಂದ ವಿವರಣೆ ಕೇಳಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಇನ್ನೂ ಇಲ್ಲ. ನಾನು ಪ್ರಾಥಮಿಕ ವರದಿಯ ಆಧಾರದ ಮೇಲೆಯೇ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು.
ಕರ್ನಾಟಕ ಮಹರ್ಷಿ ವಾಲ್ಮೀಕಿ ಎಸ್ಟಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಪಿ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಸಚಿವ ಬಿ ನಾಗೇಂದ್ರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ. ಪ್ರತಿಪಕ್ಷ ಬಿಜೆಪಿ ಕೂಡ ಸಚಿವರ ರಾಜೀನಾಮೆಗೆ ಪಟ್ಟುಹಿಡಿದಿದ್ದು, ಈ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿದೆ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಲು ಕೇಸರಿ ಪಕ್ಷವು ಕಾಂಗ್ರೆಸ್ ಸರ್ಕಾರಕ್ಕೆ ಜೂನ್ 6 ಗಡುವು ನೀಡಿದೆ.
'ನಮಗೆ ಗಡುವು ನೀಡಲು ಅವರು ಯಾರು?. ಅನ್ಯಾಯದ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟಿಸಬೇಕು. ಆದರೆ (ಬಿಜೆಪಿ) ಹಾಗೆ ಮಾಡುವುದಿಲ್ಲ. ಸುಳ್ಳು ಹೇಳುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ' ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಸಿಎಂ ಅಧ್ಯಕ್ಷತೆಯಲ್ಲಿ ಸಭೆ
ಇದಕ್ಕೂ ಮುನ್ನ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅವ್ಯವಹಾರದ ಕುರಿತು ಸಿದ್ದರಾಮಯ್ಯ ಅವರು ಎಸ್ಐಟಿ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈಗ ಅಮಾನತುಗೊಂಡಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆಜಿ ಪದ್ಮನಾಭ್ ಮತ್ತು ಖಾತೆ ಅಧಿಕಾರಿ ಪರಶುರಾಂ ಜಿ ದುರ್ಗಣ್ಣನವರ್ ನಡುವಿನ ಫೋನ್ ಸಂಭಾಷಣೆ ಲಭ್ಯವಾಗಿದೆ. ಮಾತುಕತೆ ವೇಳೆ ಪದ್ಮನಾಭ್ ಅವರು ನಿಗಮದಲ್ಲಿ ಆಗುತ್ತಿರುವ ಬಗ್ಗೆ ಸಚಿವರಿಗೆ ತಿಳಿದಿತ್ತು ಮತ್ತು ಹಣ ವರ್ಗಾವಣೆಗೆ ಅವರೇ ಆದೇಶ ನೀಡಿದ್ದರು ಎಂದು ಹೇಳಿದ್ದಾರೆ. ನಾಗೇಂದ್ರ ಅವರಿಗೆ ಆಪ್ತರು ಎನ್ನಲಾದ ಇಬ್ಬರು ಖಾಸಗಿ ವ್ಯಕ್ತಿಗಳ ಪಾತ್ರ ಹೊರಬಿದ್ದಿದೆ.
ಮೂಲಗಳ ಪ್ರಕಾರ, ನಾಗೇಂದ್ರ ಅವರನ್ನು ನೇರವಾಗಿ ಹಗರಣದೊಂದಿಗೆ ಸಂಪರ್ಕಿಸುವ 'ಇನ್ನಷ್ಟು ಸಾಕ್ಷ್ಯಕ್ಕಾಗಿ' ಸಿಎಂ ತನಿಖಾ ವರದಿಗಾಗಿ ಕಾಯುತ್ತಿದ್ದಾರೆ. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಸಾರ್ವಜನಿಕರ ಹಣದ ದುರುಪಯೋಗದ ಸಿಐಡಿ ತನಿಖೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ