ಎಚ್.ಡಿ ಕುಮಾರಸ್ವಾಮಿ ಮತ್ತು ಡಾ.ಸಿ.ಎನ್ ಮಂಜುನಾಥ್
ಎಚ್.ಡಿ ಕುಮಾರಸ್ವಾಮಿ ಮತ್ತು ಡಾ.ಸಿ.ಎನ್ ಮಂಜುನಾಥ್

ನೂತನ ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕಕ್ಕೆ ಬಹು ದೊಡ್ಡ 'ಗಿಫ್ಟ್' ಸಾಧ್ಯತೆ!

ಬಿಜೆಪಿಗೆ ದಕ್ಷಿಣ ಭಾರತದಿಂದ ಅತಿ ಹೆಚ್ಚು ಸಂಸದರನ್ನು ನೀಡುವುದರೊಂದಿಗೆ, ಮುಂದಿನ ಕೇಂದ್ರ ಸಚಿವ ಸಂಪುಟಕ್ಕೆ ಕರ್ನಾಟಕದಿಂದ ಕನಿಷ್ಠ ಮೂವರು ಸಂಸದರು ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ರಾಜ್ಯ ನಾಯಕರು ಭರವಸೆ ವ್ಯಕ್ತ ಪಡಿಸಿದ್ದಾರೆ.
Published on

ಬೆಂಗಳೂರು: ಬಿಜೆಪಿಗೆ ದಕ್ಷಿಣ ಭಾರತದಿಂದ ಅತಿ ಹೆಚ್ಚು ಸಂಸದರನ್ನು ನೀಡುವುದರೊಂದಿಗೆ, ಮುಂದಿನ ಕೇಂದ್ರ ಸಚಿವ ಸಂಪುಟಕ್ಕೆ ಕರ್ನಾಟಕದಿಂದ ಕನಿಷ್ಠ ಮೂವರು ಸಂಸದರು ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ರಾಜ್ಯ ನಾಯಕರು ಭರವಸೆ ವ್ಯಕ್ತ ಪಡಿಸಿದ್ದಾರೆ.

ಮುಂದಿನ ಸಚಿವ ಸಂಪುಟದಲ್ಲಿ ಮೈತ್ರಿಕೂಟದ ಪಾಲುದಾರರಿಗೆ ಅವಕಾಶ ಕಲ್ಪಿಸುವ ಹರ ಸಾಹಸದಲ್ಲಿ ಬಿಜೆಪಿ ವರಿಷ್ಠರು ನಿರತರಾಗಿದ್ದರೂ ಕರ್ನಾಟಕಕ್ಕೆ ಉತ್ತಮ ಪಾಲು ಸಿಗುವ ಸಾಧ್ಯತೆ ಇದೆ.

ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವ 240 ಸ್ಥಾನಗಳಲ್ಲಿ 17 ಕರ್ನಾಟಕದಿಂದ ಬಂದಿವೆ. ಇದರೊಂದಿಗೆ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ಮೋದಿ 2.0 ಸರ್ಕಾರದಲ್ಲಿ, ಕರ್ನಾಟಕವು ನಾಲ್ಕು ಕೇಂದ್ರ ಸಚಿವರನ್ನು ಹೊಂದಿತ್ತು - ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ಎ ನಾರಾಯಣಸ್ವಾಮಿ ಮತ್ತು ಭಗವಂತ ಖೂಬಾ. ನಾರಾಯಣಸ್ವಾಮಿ ಈ ಬಾರಿ ಸ್ಪರ್ಧಿಸದಿದ್ದರೂ ಖೂಬಾ ಬೀದರ್‌ನಿಂದ ಸೋತಿದ್ದಾರೆ. ಅನುಭವಿ ಸಚಿವ ಜೋಶಿ ಈ ಬಾರಿಯೂ ಸಂಪುಟಕ್ಕೆ ಬರುತ್ತಾರೆ ಎಂಬ ನಿರೀಕ್ಷೆ ರಾಜ್ಯ ಬಿಜೆಪಿ ನಾಯಕರಲ್ಲಿದೆ.

ಜಾತಿ ಸಮೀಕರಣದ ಪ್ರಕಾರ ಕರ್ನಾಟಕದ ಲಿಂಗಾಯತ ನಾಯಕರೊಬ್ಬರು ಸಚಿವರಾಗುವ ನಿರೀಕ್ಷೆಯಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮಾಜಿ ಸಿಎಂಗಳಾದ ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಸೇರಿದಂತೆ ಇಬ್ಬರು ದೊಡ್ಡ ನಾಯಕರಿದ್ದಾರೆ. ಶೆಟ್ಟರ್‌ಗೆ ಉತ್ತಮ ಅವಕಾಶವಿದೆ. ಆದರೆ, ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ಅವರ ಸಹೋದರ ಕರ್ನಾಟಕ ಬಿಜೆಪಿಯ ನೇತೃತ್ವ ವಹಿಸಿರುವುದರಿಂದ ಅವರಿಗೆ ಕ್ಯಾಬಿನೆಟ್ ಸ್ಥಾನ ಸಿಗುವ ಸಾಧ್ಯತೆ ಇಲ್ಲ ಎಂದು ಪಕ್ಷದ ಒಳಗಿನವರು ಹೇಳಿದ್ದಾರೆ.

ಎಚ್.ಡಿ ಕುಮಾರಸ್ವಾಮಿ ಮತ್ತು ಡಾ.ಸಿ.ಎನ್ ಮಂಜುನಾಥ್
ನೂತನ NDA ಸರ್ಕಾರದಲ್ಲಿ ಕೃಷಿ ಖಾತೆ ಮೇಲೆ ಕುಮಾರಸ್ವಾಮಿ ಕಣ್ಣು

2009 ರಿಂದ ಬೆಂಗಳೂರು ಸೆಂಟ್ರಲ್‌ನಿಂದ ಗೆಲ್ಲುತ್ತಿರುವ ಪಿಸಿ ಮೋಹನ್ ಸೇರಿದಂತೆ ಇತರ ಹೆಸರುಗಳು ಸಹ ಕೇಳಿ ಬರುತ್ತಿವೆ. ಬುಧವಾರ ನರೇಂದ್ರ ಮೋದಿ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ರಾಜ್ಯ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಭಾಗವಹಿಸಿದ್ದರು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಜೆಡಿಎಸ್, ತಾನು ಸ್ಪರ್ಧಿಸಿದ್ದ ಮೂರು ಸ್ಥಾನಗಳಲ್ಲಿ ಎರಡನ್ನು ಗೆದ್ದುಕೊಂಡಿದೆ. ಕುಮಾರಸ್ವಾಮಿ ಕೂಡ ಸಚಿವ ಸಂಪುಟದ ಭಾಗವಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕುಮಾರಸ್ವಾಮಿ ಅವರ ಭಾವ ಡಾ.ಸಿ.ಎನ್.ಮಂಜುನಾಥ್ ಹೆಸರೂ ಸದ್ದು ಮಾಡುತ್ತಿದೆ. ಖ್ಯಾತ ಹೃದ್ರೋಗ ತಜ್ಞ ಡಾ.ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರದಿಂದ ಹಾಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಸೋಲಿಸಿದ್ದಾರೆ. ಚುನಾವಣಾ ಪೂರ್ವ ಪ್ರಚಾರದ ವೇಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಅಳಿಯ ಡಾ.ಮಂಜುನಾಥ್ ಲಕ್ಷಗಟ್ಟಲೆ ಜನರಿಗೆ ಚಿಕಿತ್ಸೆ ನೀಡಿ ಬಡವರಿಗೆ ಸಹಾಯ ಮಾಡಿದ್ದಾರೆ, ಹಾಗಾಗಿ ಅವರನ್ನು ಒಕ್ಕೂಟಕ್ಕೆ ಸೇರಿಸಬೇಕೆಂದು ರಾಷ್ಟ್ರೀಯ ನಾಯಕರು ಬಯಸುತ್ತಿದ್ದಾರೆ ಎಂದು ಹೇಳಿದ್ದರು. ಆದಾಗ್ಯೂ, ಪಕ್ಷವು ತಮ್ಮ ಎಲ್ಲಾ ಮೈತ್ರಿ ಪಕ್ಷದ ಸಂಸದರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕಾಗಿರುವುದರಿಂದ ಬಿಜೆಪಿ ಮೂಲಗಳು ಸಂಶಯ ವ್ಯಕ್ತಪಡಿಸಿವೆ. ಅಲ್ಲದೆ, ಕೆಲವು ರಾಜ್ಯಸಭಾ ಸದಸ್ಯರನ್ನು ಮಂತ್ರಿ ಮಾಡಬೇಕಾಗಿರುವ ಅವಶ್ಯಕತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com