ವಾಲ್ಮೀಕಿ ನಿಗಮ ಹಗರಣ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಪ್ರಹ್ಲಾದ್ ಜೋಶಿ ಆಗ್ರಹ

ರಾಜ್ಯ ಹಣಕಾಸು ಇಲಾಖೆ ಸಿಎಂ ಸಿದ್ದರಾಮಯ್ಯ ಅವರ ಕೈಯಲ್ಲೇ ಇದೆ. ಅವರ ಗಮನಕ್ಕೆ ಬಾರದೇ ನೂರಾರು ಕೋಟಿ ರೂಪಾಯಿ ಹೇಗೆ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಆಗುತ್ತದೆ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.
ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ
Updated on

ಹುಬ್ಬಳ್ಳಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಶನಿವಾರ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ಬಹು ದೊಡ್ಡ ಹಗರಣ ಇದಾಗಿದ್ದು, ಸಿಎಂ ಗಮನಕ್ಕೆ ಬಾರದೇ ಇರಲು ಸಾಧ್ಯವೇ ಇಲ್ಲ ಎಂದು ಹೇಳಿದರು. ರಾಜ್ಯ ಹಣಕಾಸು ಇಲಾಖೆ ಸಿಎಂ ಸಿದ್ದರಾಮಯ್ಯ ಅವರ ಕೈಯಲ್ಲೇ ಇದೆ. ಅವರ ಗಮನಕ್ಕೆ ಬಾರದೇ ನೂರಾರು ಕೋಟಿ ರೂಪಾಯಿ ಹೇಗೆ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಆಗುತ್ತದೆ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ಇಷ್ಟು ದೊಡ್ಡ ಮೊತ್ತವನ್ನು ವರ್ಗಾವಣೆ ಮಾಡುವುದು ಅಸಾಧ್ಯ, ಸಿದ್ದರಾಮಯ್ಯ ಅವರಿಗೆ (ಸಿದ್ದರಾಮಯ್ಯ) ಅರಿವಿಲ್ಲದಿದ್ದರೆ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಅಸಮರ್ಥರು ಎಂದರ್ಥ. ಇಷ್ಟು ದೊಡ್ಡ ಮೊತ್ತದ ನಿಧಿ ಹಂಚಿಕೆ ಬಗ್ಗೆ ಮುಖ್ಯಮಂತ್ರಿಗಳಿಗೆ ಗೊತ್ತಿದ್ದರೆ ಅವರೂ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಅಂದೇ ಅರ್ಥ. ಹಾಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರಹ್ಲಾದ್ ಜೋಶಿ
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೇಳಿದ್ರೂ ಸುಮ್ನೆ ಇರಬೇಕಾ?: ಬಾಯಿಗೆ ಬೀಗ ಹಾಕಿಕೊಳ್ಳಿ ಎಂದ ಡಿಕೆಶಿಗೆ ರಾಜಣ್ಣ ಪ್ರಶ್ನೆ

ಬಳಿಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರದಲ್ಲಿ ಅವರಲ್ಲಿಯೇ ಗೊಂದಲ ಇದೆ. ಈ ಸರ್ಕಾರ ಎಷ್ಟು ದಿನಗಳ ಕಾಲ ಇರುತ್ತದೆ ಗೊತ್ತಿಲ್ಲ. ಈ ಎಲ್ಲ ಗೊಂದಲ ಅಧಿಕಾರಿಗಳ ಹಾಗೂ ಶಾಸಕರ ಸಚಿವರ ವಲಯದಲ್ಲಿ ಗೊಂದಲ ಉಂಟಾಗಿದೆ. ರಾಜ್ಯದಲ್ಲಿ ಆಡಳಿತ ಕುಸಿದಿದೆ. ಮಂತ್ರಿಗಳು ಮತ್ತು ಶಾಸಕರು ತಮ್ಮ ನಾಯಕರಿಗಾಗಿ ಪ್ರತಿಷ್ಠಿತ ಹುದ್ದೆಗಾಗಿ ಹೋರಾಟದಲ್ಲಿ ನಿರತರಾಗಿದ್ದರೆ, ರಾಜ್ಯದಲ್ಲಿ ಆಡಳಿತವು ಹದಗೆಟ್ಟಿದೆ ಎಂದು ಕಿಡಿಕಾರಿದರು.

ವಿವಿಧ ಸಮುದಾಯಗಳ ಸ್ವಾಮೀಜಿಗಳು ತಮ್ಮ ಸಮುದಾಯದ ಮುಖಂಡರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿ, ಇದು ಧಾರ್ಮಿಕ ಮುಖಂಡರ ಅಭಿಪ್ರಾಯವಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕರೇ ಸಾರ್ವಜನಿಕವಾಗಿ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರ ಸೇಡಿನ ರಾಜಕಾರಣ ಮಾಡುತ್ತಿದೆ, ಲೋಕಸಭೆ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕ ಜನತೆ ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಪ್ರತಿಯಾಗಿ ಕೇಂದ್ರ ಸರಕಾರದಿಂದ ಮಂಜೂರಾದ ಧಾರವಾಡದ ಭಾರತೀಯ ರಿಸರ್ವ್ ಬೆಟಾಲಿಯನ್‌ನ ಉದ್ದೇಶಿತ ಘಟಕವನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆಗೆ ಸ್ಥಳಾಂತರಿಸಿದ್ದಾರೆ, ಅಲ್ಲದೆ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇವಿ ಸ್ಕೂಟರ್ ತಯಾರಕ ಅಥರ್‌ನ ಧಾರವಾಡದ ಉದ್ದೇಶಿತ ಉತ್ಪಾದನಾ ಘಟಕವು ಬೇರೆ ರಾಜ್ಯಕ್ಕೆ ಹೋಗಿದೆ ಎಂದು ಆರೋಪಿಸಿದರು.

ಲೋಕಸಭೆ ಚುನಾವಣೆಯಲ್ಲಿ ಜನರ ತೀರ್ಪನ್ನು ಕಾಂಗ್ರೆಸ್ ಒಪ್ಪಿಕೊಳ್ಳಬೇಕು, ರಾಜ್ಯ ಸರ್ಕಾರದ ಬೇಡಿಕೆ. ಭೂಮಿ ಬೆಲೆ ಹೆಚ್ಚಳದಿಂದಾಗಿ ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ಕೂಡ ರೂಪುಗೊಂಡಿಲ್ಲ. ಇನ್ನಾದರೂ ಸರಕಾರ ಅಥರ್ ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಧಾರವಾಡದಲ್ಲಿ ಘಟಕ ಸ್ಥಾಪಿಸಲು ಮನವೊಲಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com