ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದು ನಿಜ , FSL ವರದಿಯಲ್ಲಿ ಇದು ಧೃಡವಾಗಿದೆ ಎಂಬ ಬಿಜೆಪಿ ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್. ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದು ನಿಜ , FSL ವರದಿಯಲ್ಲಿ ಇದು ಧೃಡವಾಗಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ ಎಂದು ಕಿಡಿಕಾರಿದೆ.
ಸರ್ಕಾರದ ಅಧಿಕೃತ FSL ವರದಿ ಇನ್ನೂ ಬಿಡುಗಡೆಯಗಿಲ್ಲ, FSL ವರದಿಯಲ್ಲಿ ತಿಳಿಯಬೇಕಾದ ಅಂಶ ವಿಡಿಯೋ ಅಸಲಿಯೋ ನಕಲಿಯೋ ಎನ್ನುವುದಕ್ಕಿಂತ ವಿಡಿಯೋದಲ್ಲಿ ಘೋಷಣೆ ಕೂಗಿದ್ದು ಪಾಕಿಸ್ತಾನ ಅಥವಾ ನಾಸಿರ್ ಸಾಬ್ ಎನ್ನುವುದು.ಯಾವುದೊ ನಕಲಿ ವರದಿಯನ್ನು ಸೃಷ್ಟಿ ಮಾಡಿದ ಬಿಜೆಪಿ, ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ. ಸುಳ್ಳುಗಳ ಮೂಲಕ ಸಮಾಜದ ಶಾಂತಿ ಕೆಡಿಸುತ್ತಿದೆ ಎಂದು ಹೇಳಿದೆ.
ಇದಕ್ಕೂ ಮುನ್ನ ಪೋಸ್ಟ್ ಮಾಡಿದ್ದ ಬಿಜೆಪಿ, ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ.
ರಾಷ್ಟ್ರ ವಿರೋಧಿ ಧೋರಣೆಯ ಕಾಂಗ್ರೆಸ್ ಹಾಗೂ ಸುಳ್ಳು ಸುದ್ದಿ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ತಮ್ಮ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು ಎಂದು ಹೇಳಿತ್ತು.
ಬಿಜೆಪಿ ಪೋಸ್ಟ್ ಕುರಿತು ಗೃಹ ಸಚಿವ ಜಿ.ಪರಮೇಶ್ವರ್ ಅವರೂ ಕೂಡ ಕಿಡಿಕಾರಿದ್ದರು. ಯಾರ ಅನುಮತಿ ತೆಗೆದುಕೊಂಡು ಅವರು ಪರೀಕ್ಷೆ ಮಾಡಿದ್ದಾರೆ ಎಂಬುದನ್ನು ವಿಚಾರಿಸುತ್ತೇವೆ. ಈ ರೀತಿಯ ವರದಿಗಳನ್ನು ಬಹಿರಂಗಗೊಳಿಸುವುದಕ್ಕೆ ಅಧಿಕಾರ ಯಾರು ಕೊಟ್ಟಿದ್ದಾರೆ ಎಂದು ಪರಿಶೀಲಿಸುತ್ತೇವೆ ಎಂದು ಹೇಳಿದರು.
ಎಫ್ಎಸ್ಎಲ್ ವರದಿಯನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ವರದಿ ಬಂದ ಕೂಡಲೇ ಪ್ರಕಟ ಮಾಡುತ್ತೇವೆ. ಘೋಷಣೆ ಕೂಗಿದ್ದು, ನಿಜವಾಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಭಾನುವಾರ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲೂ ಕೂಡ ಈ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
Advertisement