
ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಮೂರು ಪಕ್ಷದಲ್ಲೂ ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. 2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳನ್ನ ನೀಡುವ ಮೂಲಕ ಭರ್ಜರಿ ಬಹುಮತ ಗಳಿಸಿದ್ದ ಕಾಂಗ್ರೆಸ್ ಗೆ 2024 ರ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಆರಂಭದಲೇ ಕರ್ನಾಟಕ ಕಾಂಗ್ರೆಸ್ ಗೆ 28 ಲೋಕಸಭಾ ಕ್ಷೇತ್ರಗಳ ಫೈಕಿ 20 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಟ್ ಟಾರ್ಗೆಟ್ ನೀಡಿತ್ತು. ಅದರಂತೆ ಕಾಂಗ್ರೆಸ್ ಘಟಾನುಘಟಿ ನಾಯಕರು ಅಬ್ಬರ ಪ್ರಚಾರವನ್ನ ನಡೆಸಿದ್ದು, ಇದೀಗ ಕಾಂಗ್ರೆಸ್ ಪಾಳೆಯದಲ್ಲಿ ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. 28 ಕ್ಷೇತ್ರಗಳ ಪೈಕಿ ಕನಿಷ್ಠ 18-21ರಲ್ಲಿ ಗೆಲುವು ಖಚಿತ ಎಂಬ ವಿಶ್ವಾಸ ಪಕ್ಷದ ನಾಯಕ ರಲ್ಲಿ ಕಂಡು ಬರುತ್ತಿದೆ.
ಈ ನಡುವೆ ಬಿಜೆಪಿ ಎಲ್ಲಾ ಸ್ಥಾನಗಳಲ್ಲೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ. ಜನರ ಪ್ರತಿಕ್ರಿಯೆ ಮತ್ತು ಮೂರು ಹಂತದ ಪ್ರಚಾರದ ಆಧಾರದ ಮೇಲೆ (ಬಿಜೆಪಿ-ಜೆಡಿಎಸ್ ಮೈತ್ರಿ) ಎಲ್ಲಾ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿಯ ಸಂಯೋಜಕ ವಿ ಸುನೀಲ್ ಕುಮಾರ್ ಹೇಳಿದ್ದಾರೆ.
ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಉತ್ತಮವಾಗಿ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಇದು ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಲಾಭದಾಯಕವಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡಿಮೆ ಸಮಯದಲ್ಲಿ ಹೆಚ್ಚಿನ ಜನರನ್ನು ತಲುಪಲು ಪಕ್ಷ ಮಾಡಿದ ಪ್ರಯತ್ನವು ಫಲ. ನಾವು ಮೂರು ರೀತಿಯಲ್ಲಿ ಸಾರ್ವಜನಿಕರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೆವು. ದೊಡ್ಡ ಸಾರ್ವಜನಿಕ ಸಭೆಗಳು, ರೋಡ್ಶೋಗಳು ಮತ್ತು ಮನೆ-ಮನೆ ಪ್ರಚಾರದ ಮೂಲಕ ನಮ್ಮ ಸಂದೇಶವನ್ನು ರವಾನಿಸಿದ್ದೇವೆಂದು ವಿವರಿಸಿದ್ದಾರೆ.
79 ಸಾರ್ವಜನಿಕ ಸಭೆಗಳಲ್ಲಿ 14 ಬಿಜೆಪಿ ರಾಷ್ಟ್ರೀಯ ನಾಯಕರು ಭಾಗವಹಿಸಿದ್ದರು. 39 ಸ್ಥಳಗಳಲ್ಲಿ ರೋಡ್ಶೋಗಳು ನಡೆದಿವೆ. ಸುಮಾರು 30 ರಾಜ್ಯ ನಾಯಕರು 557 ಸಭೆಗಳನ್ನು ಉದ್ದೇಶಿಸಿ ಮತ್ತು 139 ಸ್ಥಳಗಳಲ್ಲಿ ರೋಡ್ಶೋಗಳನ್ನು ನಡೆಸಿದ್ದಾರೆ. 650 ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳು ಮತ್ತು 180 ಕ್ಕೂ ಹೆಚ್ಚು ರೋಡ್ಶೋಗಳನ್ನು ನಡೆಸಲಾಗಿದೆ.
ಎಲ್ಲಾ ಬೂತ್ಗಳಲ್ಲಿ 50-75 ಜನರನ್ನು ಒಳಗೊಂಡ 60,000 ಕ್ಕೂ ಹೆಚ್ಚು ಸಣ್ಣ ಸಭೆಗಳನ್ನು ನಡೆಸಲಾಗಿದೆ. ಅಲ್ಲಿ ಕಾಂಗ್ರೆಸ್ನ ಪ್ರಚಾರ ಮತ್ತು ಚುನಾಯಿತರಾದರೆ ಎದುರಾಗುವ ಸಮಸ್ಯೆಗಳನ್ನು ವಿವರಿಸಲಾಗಿದೆ. ಪಕ್ಷವು ಚುನಾವಣಾ ಆಯೋಗಕ್ಕೆ 152 ದೂರುಗಳನ್ನು ಸಲ್ಲಿಸಿದೆ. ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ ಅವರ ನಡುವಿನ ಚತುಷ್ಕೋನ ಹೋರಾಟದಿಂದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದರು.
ಏತನ್ಮಧ್ಯೆ, ಕರ್ನಾಟಕದಲ್ಲಿ ಕಾಂಗ್ರೆಸ್ 18-21 ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ ಎಂದು ಆರ್ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಹೇಳಿದ್ದಾರೆ.
ಮುಂಬೈ-ಕರ್ನಾಟಕ ಮತ್ತು ಕಲ್ಯಾಣ-ಕರ್ನಾಟಕದಿಂದ ಹೆಚ್ಚಿನ ಸ್ಥಾನಗಳನ್ನು ಕರ್ನಾಟಕದಿಂದ ಗೆಲ್ಲುವ ಮೂಲಕ ಇಂಡಿಯಾ ಮೈತ್ರಿಕೂಟಕ್ಕೆ ಕೊಡುಗೆ ನೀಡುತ್ತೇವೆ ಎಂದು ತಿಳಿಸಿದರು.
ನಮ್ಮ ಸರ್ಕಾರದ ಐದು ಗ್ಯಾರಂಟಿಗಳಿಂದ ಪ್ರಭಾವಿತರಾದ ಜನರು ನಮ್ಮನ್ನು ಆಶೀರ್ವದಿಸಿದ್ದರು. ಇದರಿಂದ ಬಿಜೆಪಿ ಹತಾಶೆಗೊಂಡಿತು ಮತ್ತು ಉತ್ಸಾಹವನ್ನು ಕಳೆದುಕೊಂಡಿತು. ನಾವು ಮತದಾರರ ಮುಂದೆ ಇಟ್ಟಿದ್ದ ಅಭಿವೃದ್ಧಿಯ ನೀಲನಕ್ಷೆಯೂ ನಮಗೆ ಸಹಾಯ ಮಾಡಿದೆ.
2014-2019ರಲ್ಲಿ ಮೋದಿ ಅಲೆ ಇತ್ತು. ಆದರೆ, ಇಂದು ಆ ಅಲೆ ಕುಸಿದಿದೆ. ಬೆಂಗಳೂರು ನಗರದಲ್ಲೂ ನಾವು ಹೆಚ್ಚಿನ ಸ್ಥಾನ ಗೆಲ್ಲಲಿದ್ದೇವೆ. ಆರ್ಎಸ್ಎಸ್ ಭದ್ರಕೋಟೆ ಎಂದು ಕರೆಯಲ್ಪಡುವ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಧಾರವಾಡದಲ್ಲಿಯೂ ಉತ್ತಮ ಫಲಿತಾಂಶಗಳು ಬರುವ ನಿರೀಕ್ಷೆಗಳಿವೆ. ಮೋದಿ ಅಲೆ ಮತ್ತು ರಾಜ್ಯ ಬಿಜೆಪಿ ನಾಯಕತ್ವ ಇಲ್ಲದ ಕಾರಣ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಎಂ.ಬಿ.ಪಾಟೀಲ್
ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಬಹುದು ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ಊಹಾಪೋಹಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಬೀಳಿಸುವುದು ಅಸಾಧ್ಯ. ಸರ್ಕಾರ ಉರುಳಿಸಬೇಕೆಂದರೆ ಕಾಂಗ್ರೆಸ್ನಿಂದ 60 ಶಾಸಕರು ಬದಲಾಗಬೇಕಾಗುತ್ತದೆ. ತಾಕತ್ತು ಇದ್ದರೆ, 2-4 ಶಾಸಕರು ಕರೆದುಕೊಳ್ಳಲಿ ನೋಡೋಣ. ಮಹಾರಾಷ್ಟ್ರದಲ್ಲಿ ಇದೇ ರೀತಿ ಮಾಡಿದ್ದರು. ಇಲ್ಲಿ ಧೈರ್ಯ ಮಾಡಿದರೆ ಎಂಎಲ್ಎ ಸ್ಥಾನ ಕಳೆದುಕೊಳ್ಳುತ್ತಾರೆ. ಬಿಜೆಪಿಯ ಹಲವು ಶಾಸಕರು ನಮ್ಮೊಂದಿಗಿದ್ದು, ಜೆಡಿಎಸ್ ಮುಳುಗುವ ದೋಣಿಯಾಗಿದೆ ಎಂದು ಹೇಳಿದರು.
Advertisement