
ಬೆಂಗಳೂರು: ಉಪಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಸದಸ್ಯತ್ವ ಅಭಿಯಾನದಲ್ಲಿ 50 ಲಕ್ಷ ಮಂದಿ ನೋಂದಣಿಯಾಗಿದ್ದಾರೆಂದು ಬಿಜೆಪಿ ಹೇಳಿಕೊಂಡಿದ್ದು, ಮೂರೂ ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಸದಸ್ಯತ್ವ ಅಭಿಯಾನದಡಿ ಈವರೆಗೆ 50 ಲಕ್ಷ ಸದಸ್ಯರ ನೋಂದಣಿ ಪೂರ್ಣಗೊಳಿಸಿದೆ ಎಂದು ಹೇಳಿದರು.
ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ, ರಾಜ್ಯ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ, ಎಲ್ಲ ಪದಾಧಿಕಾರಿಗಳ ಸಹಕಾರ ಹಾಗೂ ಶ್ರಮದಿಂದ, ಜಿಲ್ಲೆಗಳ ಸಹಕಾರದಲ್ಲಿ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.
2014ರಲ್ಲಿ ಆನ್ಲೈನ್ ಮೂಲಕ ಸದಸ್ಯತ್ವ ಅಭಿಯಾನ ಆರಂಭವಾಗಿತ್ತು. 2019ರಲ್ಲಿ ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಮಾಡುತ್ತಿದ್ದು, ಈ ಬಾರಿ ಸದಸ್ಯತ್ವ ಅಭಿಯಾನಕ್ಕೆ ಸಮಿತಿಯನ್ನೂ ರಚಿಸಲಾಗಿದೆ. ಸಂಸದ ಪಿ.ಸಿ.ಮೋಹನ್, ಶಾಸಕರಾದ ಮಹೇಶ್ ಟೆಂಗಿನಕಾಯಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಪ್ರತಾಪಸಿಂಹ ನಾಯಕ್ ಮತ್ತು ನಾನು ತಂಡವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಪ್ರತಿ ಜಿಲ್ಲೆಗೆ ಹಿರಿಯ ನಾಯಕರನ್ನು ಇನ್ ಚಾರ್ಜ್ ಆಗಿ ನೇಮಿಸಲಾಗಿದೆ ಎಂದರು.
ಹಿಂದೆ ಸದಸ್ಯತ್ವ ಮಾಡಿದಾಗ ಕೇವಲ ಮಿಸ್ಡ್ ಕಾಲ್ ಕೊಡುವ ಪದ್ಧತಿ ಇತ್ತು. ಈ ಬಾರಿ ಮಿಸ್ಡ್ ಕಾಲ್ ಬಳಿಕ ಲಭಿಸುವ ಲಿಂಕ್ ಮೂಲಕ ಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ವಿಳಾಸ, ಕುಟುಂಬದ ಮಾಹಿತಿ, ವಿಧಾನಸಭಾ ಕ್ಷೇತ್ರ, ಬೂತ್ ವಿವರ, ಇಮೇಲ್ ಐಡಿಯನ್ನೂ ಪಡೆಯಲಾಗುತ್ತಿದೆ. ಪ್ರಧಾನಿಯವರ ವಿಕಸಿತ ಭಾರತದ ಕಲ್ಪನೆಯಂತೆ ಆ ಗುರಿಯತ್ತ ಹೆಜ್ಜೆ ಇಡಲು ಈ ಅಭಿಯಾನ ನಡೆದಿದೆ. ರಾಷ್ಟ್ರ ಮಟ್ಟದಲ್ಲಿ ಇವತ್ತಿಗೆ 9 ಕೋಟಿ 22 ಲಕ್ಷ 11 ಸಾವಿರ ಸದಸ್ಯತ್ವ ಪೂರ್ಣಗೊಂಡಿದೆ. ನಮ್ಮ ಗುರಿ 11 ಕೋಟಿ ಇದ್ದು, ಅದಕ್ಕೂ ಮೀರಿ ಸದಸ್ಯತ್ವ ಪಡೆಯಲು ಜನರು ಉತ್ಸುಕರಾಗಿದ್ದಾರೆ. ಸದಸ್ಯತ್ವ ಅಭಿಯಾನವನ್ನು ಅ. 15ರ ಬದಲಾಗಿ ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ರಾಜ್ಯಾಧ್ಯಕ್ಷರು, ಜಿಲ್ಲಾ ಪ್ರವಾಸ ಮಾಡಲಿದ್ದಾರೆ. ನಾವು, ಎಲ್ಲ ನಾಯಕರು ಕೂಡ ಪ್ರವಾಸ ಮಾಡುತ್ತೇವೆ ಎಂದು ಹೇಳಿದರು.
2014ರಲ್ಲಿ ರಾಜ್ಯದಲ್ಲಿ 74 ಲಕ್ಷ 88 ಸಾವಿರ ಇತ್ತು. 2019ರಲ್ಲಿ ಇನ್ನೂ 26 ಲಕ್ಷ ಸೇರಿತ್ತು. ಒಟ್ಟು 1 ಕೋಟಿ 1 ಲಕ್ಷ 75 ಸಾವಿರ ಸದಸ್ಯತ್ವವನ್ನು 2019ರಲ್ಲಿ ಮಾಡಿದ್ದೇವೆ. ಈ ಬಾರಿ ನಮಗೆ 1.25 ಕೋಟಿ ಗುರಿ ಕೊಟ್ಟಿದ್ದು, ಅದಕ್ಕೂ ಮೀರಿ ಇನ್ನೂ 50 ಲಕ್ಷ ಹೆಚ್ಚು ಮಾಡಲು ಅಮಿತ್ ಶಾ ಅವರು ಗುರಿ ನೀಡಿದ್ದಾರೆ. ನಾವು ಆ ಗುರಿ ಯಶಸ್ವಿಯಾಗಿ ತಲುಪಲು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.
ವಿಜಯೇಂದ್ರ ಮಾತನಾಡಿ, ಈ ವರ್ಷವೇ 50 ಲಕ್ಷ ಸದಸ್ಯರು ನೋಂದಣಿಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯನ್ನು ತಲುಪುವ ಭರವಸೆಯಿದೆ. ಹೊಸ ಸದಸ್ಯರ ಸಂಖ್ಯೆಯಲ್ಲಿ ಯುವಕರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಜನರು ಹೆಚ್ಚಾಗಿದ್ದು, ನಮ್ಮ ಪಕ್ಷಕ್ಕೆ ಸೇರಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತಿದೆ. ಇದು ನಮ್ಮ ಮೇಲೆ ಅವರ ನಂಬಿಕೆಯನ್ನು ತೋರಿಸುತ್ತದೆ. ಇದರೊಂದಿಗೆ ನಾವು ನಮ್ಮ ಪಕ್ಷವನ್ನು ಬಲಪಡಿಸುತ್ತಿದ್ದೇವೆ. ಇದು ಉಪಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡುತ್ತದೆ, ಈ ಬಲ ನಾವು ಎಲ್ಲಾ ಮೂರು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂಬುದನ್ನು ತೋರಿಸುತ್ತಿದೆ. ಬೂತ್ ಮಟ್ಟದಲ್ಲಿ 2-3 ನಾಯಕರನ್ನು ಗುರುತಿಸಿದ್ದು, ಪ್ರತಿ ಬೂತ್ಗೆ ಗರಿಷ್ಠ ಸಂಖ್ಯೆಯ ಸದಸ್ಯರು ಆಗಮಿಸುವಂತೆ ನೋಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
Advertisement