
ಶಿಗ್ಗಾಂವಿ: ಲೋಕಸಭಾ ಚುನಾವಣೆ ವೇಳೆ ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದು ನಿಜ. ಚುನಾವಣೆ ವೇಳೆ ಹಾವೇರಿ ಹಾಗೂ ಗದಗ ಜಿಲ್ಲೆಯಲ್ಲಿ ಹೆಚ್ಚಿನ ಗಮನ ಹರಿಸಿದ್ದು ಇದಕ್ಕೆ ಕಾರಣವಿರಬಹುದು. ಆದರೆ, ಉಪ ಚುನಾವಣೆಯಲ್ಲಿ ಕ್ಷೇತ್ರದ ಜನ ಭರತ್ ಪರ ನಿಲ್ಲುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೌದು, ಫಲಿತಾಂಶದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದಿದೆ. ಆದರೆ, ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಈಗಾಗಲೇ ಅದರ ಅರಿವಾಗಿದೆ, ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರು ನಮ್ಮನ್ನು ಬೆಂಬಲಿಸಿದಂತೆಯೇ, ಈ ಉಪಚುನಾವಣೆಯಲ್ಲಿಯೂ ಅದೇ ಮಟ್ಟವನ್ನು ನಿರೀಕ್ಷಿಸುತ್ತಿದ್ದೇವೆ. ಉಪಚುನಾವಣೆಗೆ ನಮ್ಮ ಪಕ್ಷವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಆಶಾವಾದವನ್ನು ಟೀಕಿಸಿದ ಅವರು, ಕಾಂಗ್ರೆಸ್ ನಾಯಕರ ಕನಸು ನನಸಾಗುವುದಿಲ್ಲ. ಕಳೆದ ಒಂದೂವರೆ ವರ್ಷದ ಕಾಂಗ್ರೆಸ್ ಪಕ್ಷದ ದುರಾಡಳಿತ ಮತ್ತು ದೌರ್ಜನ್ಯಕ್ಕೆ ಉಪಚುನಾವಣೆಯಲ್ಲಿ ಜನರು ತಕ್ಕ ಉತ್ತರ ಕೊಡುತ್ತಾರೆಂದು ತಿಳಿಸಿದರು.
ಕಾಂಗ್ರೆಸ್ ನಾಯಕರ ಆರೋಪಗಳಿಗೆ ಉತ್ತರಿಸಿ, ಈ ವಿಷಯಗಳ ಬಗ್ಗೆ ಕಾಂಗ್ರೆಸ್ ನಾಯಕತ್ವವೇ ಸ್ಪಷ್ಟಪಡಿಸಬೇಕು ಎಂದರು.
ಶಿಗ್ಗಾಂವಿ ಕ್ಷೇತ್ರದಲ್ಲಿ ಬೊಮ್ಮಾಯಿ ಒಂದೇ ಒಂದು ಮನೆ ಕೊಟ್ಟಿಲ್ಲ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಮಾತನಾಡಿ, ಇದು ಹಾಸ್ಯಾಸ್ಪದ ಅಷ್ಟೆ, ಹೋಗಿ ನೋಡಿಕೊಂಡು ಬರಲಿ. ಕಾಂಗ್ರೆಸ್ ನಾಯಕರ ಭಾಷಣ ಸುಳ್ಳಿನ ಕಂತೆ ಅಷ್ಟೆ. ನಾವು ಎಲ್ಲರೂ ಒಗ್ಗಟ್ಟಿನಲ್ಲಿದ್ದೇವೆ. ನನಗಿಂತ ಹೆಚ್ಚು ಬೆಂಬಲ ಭರತ್ಗೆ ಸಿಕ್ಕಿದೆ. ದೊಡ್ಡ ಪ್ರಮಾಣದಲ್ಲಿ ಎಲ್ಲಾ ಸಮುದಾಯದವರು ಭರತ್ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚು ಮತಗಳ ಅಂತರದಿಂದ ಭರತ್ ಗೆಲ್ಲುತ್ತಾನೆ. ಖಾದ್ರಿ ಮನವೊಲಿಕೆ ಮಾಡಿದ್ದಾರೆ. ಆದರೆ, ಅದರಿಂದ ನಮಗೇನೂ ಪರಿಣಾಮ ಬೀರಲ್ಲ ಎಂದರು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಪ್ರತಿ ಹೋಬಳಿಗೆ ಸಚಿವರನ್ನು ನಿಯೋಜಿಸುವ ಕಾಂಗ್ರೆಸ್ ಪಕ್ಷದ ಕಾರ್ಯತಂತ್ರದ ಬಗ್ಗೆ ಪ್ರತಿಯಿಸಿ, ಸಚಿವರನ್ನು ತೊಡಗಿಸಿಕೊಂಡಿರುವುದು ಸ್ವಾಗತ. ಬರಲಿ ಅವರಿಗೆ ಸ್ವಾಗತ ಎಂದು ವ್ಯಂಗ್ಯವಾಗಿ ಹೇಳಿದರು.
Advertisement