ಮುಸ್ಲಿಮರಿಗೆ ಮಾತ್ರ ಮೀಸಲಾತಿ, ಹಿಂದೂಗಳು ಏನ್ ದ್ರೋಹ ಮಾಡಿದ್ದಾರೆ: ರಾಜ್ಯ ಸರ್ಕಾರಕ್ಕೆ BSY ಪ್ರಶ್ನೆ
ಬೆಂಗಳೂರು: ಕಾಂಗ್ರೆಸ್ಗೆ ಅಜೀರ್ಣ ಆಗುವಷ್ಟು ಬಹುಮತ ನೀಡಿದ್ದರಿಂದ ಇಂದು ಜನ ಹಿತ ಮರೆತು ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆದವರು ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳಬೇಕು. ಆದರೆ, ಸಿದ್ದರಾಮಯ್ಯ ಅವರು ಮುಸ್ಲಿಮರಿಗೆ ನಾಲ್ಕು ಪರ್ಸೆಂಟ್ ಮೀಸಲಾತಿ ನೀಡಿ, ಹಿಂದೂಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು ಒಂದಲ್ಲ ಒಂದು ಬೆಲೆ ಏರಿಕೆ ಮಾಡಿದೆ. ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆಯಾದರೆ. ಕರ್ನಾಟಕದಲ್ಲಿ ಮಾತ್ರ ಲೀಟರ್ಗೆ ಮೂರು ರೂಪಾಯಿ ಹೆಚ್ಚಳ ಮಾಡಿದ್ದಾರೆ. ವಿಶೇಷವಾಗಿ ಮೆಟ್ರೋ ದರವನ್ನು ಶೇ.100ರಷ್ಟು ಹೆಚ್ಚಿಸಿದ್ದಾರೆ. ಜನಸಾಮಾನ್ಯರು ಬಳಸುವ ಹಾಲಿನ ದರ ಹಿಂದೆಂದೂ ಇಲ್ಲದ ರೀತಿಯಲ್ಲಿ ಏರಿಕೆ ಮಾಡಿದ್ದಾರೆ. ಬಹಳ ಮುಖ್ಯವಾಗಿ ವಿದ್ಯುತ್ ದರವನ್ನು ಪ್ರತಿ ಯ್ಯೂನಿಟ್ಗೆ 36 ಪೈಸೆ ಹೆಚ್ಚು ಮಾಡಿದ್ದಾರೆ. ಈ ಸರ್ಕಾರ ಬಂದ ಮೇಲೆ ಎರಡು ಬಾರಿ ವಿದ್ಯುತ್ ದರ ಏರಿಕೆಯಾಗಿದೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಉಸಿರುಗಟ್ಟುವ ಪರಿಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.
ಜನರು ಸಮಾಧಾನವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಇದರ ವಿರುದ್ಧ ನಾವು ಅಹೋರಾತ್ರಿ ಹೋರಾಟ ಮಾಡುತ್ತಿದ್ದೇವೆ. ನಾನು ಕೂಡ ಈ ಹೋರಾಟದಲ್ಲಿ ಭಾಗಿಯಾಗುತ್ತಿದ್ದೇನೆ. ಪಕ್ಷ ಭೇದ ಮರೆತು ನೋವು ಅನುಭವಿಸಿರುವ ಎಲ್ಲಾ ಜನರು ಈ ಹೋರಾಟದಲ್ಲಿ ಭಾಗಿಯಾಗಬೇಕಂದು ಮನವಿ ಮಾಡಿದರು.
ಸಿಎಂ ಖುರ್ಚಿಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಅವರಿಗೆ ಮುಖ್ಯವಾದುದು ಸಿಎಂ ಆಗುವುದಷ್ಟೇ ಎಂದು ಕಿಡಿಕಾರಿದರು. ಇದೇ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ