
ಬೆಂಗಳೂರು: 'ಜಾತಿ ಗಣತಿ' ಎಂದೇ ಕರೆಯಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯ ಅಂಕಿ ಅಂಶಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಶನಿವಾರ ಒತ್ತಾಯಿಸಿದ್ದಾರೆ.
ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಸಮುದಾಯಗಳ ಧಾರ್ಮಿಕ ಮುಖಂಡರು, ಬುದ್ಧಿಜೀವಿಗಳು ಮತ್ತು ಪ್ರತಿನಿಧಿಗಳನ್ನು ಸಮಾಲೋಚನೆಗೆ ಕರೆಯಬೇಕು. ಒಮ್ಮತದ ಮೂಲಕ ಪರಸ್ಪರ ಒಪ್ಪುವ ಪರಿಹಾರವನ್ನು ಕಂಡುಕೊಳ್ಳಬೇಕು ಎಂದರು.
ಜೆಡಿಎಸ್ ಯಾವುದೇ ಸಂದರ್ಭದಲ್ಲೂ ಸಮೀಕ್ಷೆಯನ್ನು ವಿರೋಧಿಸುವುದಿಲ್ಲ. ಆದರೆ, ಸಮೀಕ್ಷೆ ಪ್ರಕ್ರಿಯೆಯು ವ್ಯವಸ್ಥಿತವಾಗಿ ನಡೆದಿಲ್ಲ. ಸೋರಿಕೆಯಾದ ಅಂಕಿಅಂಶಗಳ ಸತ್ಯಾಸತ್ಯತೆಯನ್ನು ಮಾತ್ರ ಪ್ರಶ್ನಿಸಿದ್ದೇವೆ ಮತ್ತು ಮಾಹಿತಿ ಸತ್ಯದಿಂದ ಕೂಡಿಲ್ಲ ಎಂದು ಹೇಳಿದ್ದೇವೆ. ಸಮೀಕ್ಷೆಯ ವಿಧಾನವೇ ದೋಷಪೂರಿತವಾಗಿದೆ ಎಂದು ಅವರು ಹೇಳಿದರು.
ಯಾವ ಕುಟುಂಬಗಳನ್ನು, ಯಾವ ಮಾನದಂಡದ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗಿದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಹಾಗಾಗಿ ಸಂಪೂರ್ಣ ವರದಿಯನ್ನು ಮರು ಪರಿಶೀಲಿಸಬೇಕು. ವರದಿ ಕುರಿತು ಚರ್ಚಿಸಲು ಸರಕಾರ ಸರ್ವಪಕ್ಷ ಸಭೆ ಕರೆಯಬೇಕು ಎಂದರು.
ಜಾತಿಗಣತಿ ವಿಚಾರಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ನವದೆಹಲಿಗೆ ತೆರಳಿದ್ದರು. ಹೈಕಮಾಂಡ್ ಜೊತೆ ಕುಳಿತು ಚರ್ಚೆ ಮಾಡಿದ ಬಳಿಕ ಜಾತಿ ಗಣತಿ ವಿಚಾರ ಮಾಧ್ಯಮಗಳಲ್ಲಿ ಬಹಳ ಗಂಭೀರವಾದ ಸ್ವರೂಪ ಪಡೆದುಕೊಂಡಿತು. ಮಾಧ್ಯಮಗಳಲ್ಲಿ ಇತ್ತೀಚೆಗೆ ಸಾಕಷ್ಟು ಅಂಕಿ-ಅಂಶಗಳು ಸೋರಿಕೆಯಾಗಿದೆ. ಯಾವ ಜಾತಿ, ಯಾವ ಪಂಗಡ ಎಷ್ಟಿದೆ ಎಂಬುದು ಸೋರಿಕೆಯಾಗಿದೆ. ಅಂಕಿ-ಅಂಶಗಳು ಎಲ್ಲಿಂದ ಬಂತು? ಯಾಕೆ ಬಂತು? ಇದರ ಬಗ್ಗೆ ಚರ್ಚಿಸಬೇಕಿದೆ ಎಂದು ವಾಗ್ದಾಳಿ ನಡೆಸಿದರು.
Advertisement