ಕುರ್ಚಿ ಉಳಿಸಿಕೊಳ್ಳಲು ಯತ್ನ: ಜಾತಿಗಣತಿ ವರದಿ ವಿವಾದದಿಂದಾಗಿ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ..!

ಜಾತಿಗಣತಿ ವರದಿಯನ್ನು ಹೊರತರಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಒತ್ತಾಯವೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್
Updated on

ಬೆಂಗಳೂರು: ಜಾತಿ ಜನಗಣತಿ ಎಂದು ಕರೆಯಲ್ಪಡುವ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ (SEES-2015) ವರದಿಯು ಕೆಲವು ಸಮುದಾಯಗಳು ವಿಶೇಷವಾಗಿ ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರ ಸಮುದಾಯಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಈ ವಿವಾದವು ಇದೀಗ ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬರುವಂತೆ ಮಾಡುತ್ತಿದೆ.

ಸಮೀಕ್ಷಾ ವರದಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

2023 ರಲ್ಲಿ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಾಗ ಮಾಡಿಕೊಂಡ ಒಪ್ಪಂದದ ಪ್ರಕಾರ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರವನ್ನು ವರ್ಗಾಯಿಸದಿರಲು ಸಿದ್ದರಾಮಯ್ಯ ಅವರು ಜಾತಿ ಜನಗಣತಿಯನ್ನು ಮುನ್ನೆಲೆಗೆ ತಂದಿದ್ದಾರೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆರೋಪಿಸಿದ್ದಾರೆ.

10 ವರ್ಷಗಳ ಅಂತರದ ನಂತರ ಜಾತಿ ಜನಗಣತಿ ವರದಿಯನ್ನು ತಂದಿರುವುದು ತಮ್ಮ ಕುರ್ಚಿಯನ್ನು ಭದ್ರ ಪಡಿಸಿಕೊಳ್ಳುವ ಸಲುವಾಗಿ ಎಂದು ಆರೋಪಿಸಿದ್ದಾರೆ.

ಅಶೋಕ್ ಅವರ ಹೇಳಿಕೆ ನಡುವಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.

ತಮ್ಮ ಸ್ಥಾನಕ್ಕೆ ಕುತ್ತಿ ಬಂದಾಗಲೆಲ್ಲಾ ಸಿದ್ದರಾಮಯ್ಯ ಅವರು ಜಾತಿ ಗಣತಿ ವಿಚಾರವನ್ನು ಪ್ರಸ್ತಾಪಿಸುತ್ತಾರೆಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್
ಅಶೋಕ್ ಹೇಳಿಕೆ ಹಾಸ್ಯಾಸ್ಪದ, ಜಾತಿಗಣತಿ ಮೂಲಪ್ರತಿ ನಮ್ಮ ಮನೆಯಲ್ಲಿ ಇರೋಕೆ ಹೇಗೆ ಸಾಧ್ಯ?: ಸಿಎಂ ಸಿದ್ದರಾಮಯ್ಯ ತಿರುಗೇಟು

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರ ಬೆಂಬಲಿಗ ಮತ್ತು ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರು, ಸಿದ್ದರಾಮಯ್ಯ ಅವರು ಜನಪ್ರಿಯ ಹಾಗೂ ಜನನಾಯಕರಾಗಿದ್ದು, ತಮ್ಮ ಸ್ಥಾನ ಭದ್ರಪಡಿಸಲು ಇಂತಹ ತಂತ್ರಗಳ ಪ್ರಯೋಗಿಸುವ ಅವಶ್ಯಕತೆ ಅವರಿಗಿಲ್ಲ ಎಂದು ತಿಳಿಸಿದ್ದಾರೆ.

ಎರಡನೇ ಅವಧಿಗೆ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಈ ನಡುವೆ ಜಾತಿಗಣತಿ ವರದಿಯನ್ನು ಹೊರತರಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಒತ್ತಾಯವೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕರ್ನಾಟಕದಲ್ಲಿ ವರದಿಯನ್ನು ಜಾರಿಗೆ ತಂದರೆ ಇತರೆ ರಾಜ್ಯಗಳಲ್ಲೂ ಇದನ್ನು ಮುನ್ನಲೆಗೆ ತರಲು ತಂತ್ರ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭಾನುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಹುಲ್ ಅವರನ್ನು ಭೇಟಿ ಮಾಡಿ, ಅವರ ಒಪ್ಪಿಗೆ ಪಡೆದ ನಂತರನೇ ಜಾತಿ ಜನಗಣತಿಯನ್ನು ಸಂಪುಟದಲ್ಲಿ ಮಂಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು.

ರಾಜಕೀಯ ತಜ್ಞ ಸಂದೀಪ್ ಶಾಸ್ತ್ರಿ ಅವರು ಮಾತನಾಡಿ, ನಾಯಕತ್ವ ಬದಲಾವಣೆಯಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಕೂಡ ಈ ವಿಚಾರವನ್ನು ಪ್ರಸ್ತಾಪಿಸಿರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಇದೇ ವೇಳೆ ಗೊಂದಲಗಳ ದೂರಾಗಿಸಲು ಹೊಸ ಸಮೀಕ್ಷೆ ನಡೆಸುವ ಸಲಹೆಯನ್ನೂ ಅವರು ನೀಡಿದ್ದಾರೆ.

ಸರ್ಕಾರವು ಸಮೀಕ್ಷೆಯ ಸತ್ಯಾಸತ್ಯತೆಯ ಬಗ್ಗೆ ಜನರನ್ನು ತೃಪ್ತಿಪಡಿಸದ ಹೊರತು, ವರದಿಗೆ ಒಪ್ಪಿಗೆ ಸಿಗುವುದಿಲ್ಲ. ಇದಲ್ಲದೆ, ಸರ್ಕಾರದ ಮುಂದಿನ ದಾರಿ ಸಾಮಾಜಿಕ ನ್ಯಾಯದ ಕುರಿತು ಸಮಿತಿಯನ್ನು ಸ್ಥಾಪಿಸುವುದು ಮತ್ತು ಹತ್ತು ವರ್ಷ ಹಳೆಯ ಸಮೀಕ್ಷೆಯನ್ನು ಪರಿಶೀಲಿಸುವುದು ಅಥವಾ ಹೊಸ ಸಮೀಕ್ಷೆಯನ್ನು ನಡೆಸುವುದಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com