
ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಗೂಂಡಾ, ಬೊಗಳೋ ನಾಯಿ ಆನೆ ಬೆದರಿಸಲಾಗಲ್ಲ ಎಂಬ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ಟಿ ನಾರಾಯಣಸ್ವಾಮಿ ಹೇಳಿಕೆ ವಿಧಾನಪರಿಷತ್ತಿನಲ್ಲಿ ಸೋಮವಾರ ಕೋಲಾಹಲ ಸೃಷ್ಟಿಸಿತು,
ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮಗೆ ಫೇರಾವ್ ಹಾಕಿ ಕೆಲ ಗಂಟೆ ದಿಗ್ಧಂಧನದಲ್ಲಿಟ್ಟ ವಿಷಯವನ್ನು ಸೋಮವಾರ ಸದನದಲ್ಲಿ ಪ್ರಸ್ತಾಪಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿದರಲ್ಲದೆ, ಗೂಂಡಾ ಎಂದು ಟೀಕಿಸಿದರು.
ಇದು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಗದ್ದಲಕ್ಕೆ ಕಾರಣವಾಯಿತು. ಕೊನೆಗೆ ಸಭಾಪತಿ ಸ್ಥಾನದಲ್ಲಿದ್ದ ಭೋಜೇಗೌಡ ಅವರು 'ಗೂಂಡಾ' ಪದವನ್ನುಕಡತದಿಂದ ತೆಗೆಸಿ ವಿಷಯದ ಚರ್ಚೆ ಮುಗಿಸಿದರು.
ಶೂನ್ಯವೇಳೆ ಬಳಿಕ ಈ ವಿಷಯ ಪ್ರಸ್ತಾಪಿಸಿದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಭಾಪತಿ ಅವರು, ಈ ಪ್ರಸ್ತಾಪವನ್ನು ಸದನದ ಹಕ್ಕುಬಾಧ್ಯತಾ ಸಮಿತಿಗೆ ವರ್ಗಾಯಿಸಲಾಗಿದೆ. ವರದಿ ಬಂದ ಬಳಿಕ ಚರ್ಚಿಸಿ ಎಂದರು.
ಆದರೂ, ನಾರಾಯಣಸ್ವಾಮಿ ಅವರು ಈ ಬಗ್ಗೆ ಸದನದಲ್ಲಿ ಚರ್ಚಿಸಲು ಅವಕಾಶ ಕೋರಿದರು. ಭೋಜನ ವಿರಾಮದ ಬಳಿಕ ಚರ್ಚೆಗೆ ಅವಕಾಶ ನೀಡಲಾಯಿತು.
ಬಳಿಕ ಮಾತನಾಡಿದ ನಾರಾಯಣಸ್ವಾಮಿ ಅವರು, ಚಿತ್ತಾಪುರದಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗ ಪ್ರಧಾನಿ ಮೋದಿ ಅವರ ಬಗ್ಗೆ ಕೆಲವರು ಮಾಡಿದ ಟೀಕೆಯ ಮಾತುಗಳಿಗೆ ರೂಢಿಗತವಾಗಿ ನಾಯಿ ಬೊಗಳಿದರೆ ಆನೆ ಹೆದರುವುದೇ ಎಂದು ಟೀಕಿಸಿದ್ದೆ. ಅದಕ್ಕೆ 25ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದರು. ಐದು ಗಂಟೆ ಕೂಡಿ ಹಾಕಿದ್ದರು. ಇದಕ್ಕೆ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಅವರನ್ನು ಸದನಕ್ಕೆ ಕರೆಸಿ ಉತ್ತರ ಕೊಡಿಸಬೇಕು ಇಲ್ಲವೇ ಮುಖ್ಯಮಂತ್ರಿ ಅವರು ಸಚಿವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಆಡಳಿತಾರೂಢ ಪಕ್ಷಧ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಚೋದನಕಾರಿ, ಉದಟತನದ ಹೇಳಿಕೆ ನೀಡಿ ಜನರು ನಿಮ್ಮನ್ನು ಕೂಡಿಹಾಕುವಂತೆ ಮಾಡಿಕೊಂಡಿದ್ದು ನೀವು, ನಮ್ಮ ಸಚಿವರೇಕೆ ರಾಜೀನಾಮೆ ಕೊಡಬೇಕು. ಈ ವಿಷಯ ಹಕ್ಕು ಬಾಧ್ಯತಾ ಸಮಿತಿ ಮುಂದಿದೆ. ವರದಿ ಬಂದ ಮೇಲೆ ಮಾತನಾಡಿ ಎಂದರು.
ಬಳಿಕ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ನಮ್ಮ ಪ್ರಧಾನಿಯವರನ್ನು ವಿಷಸರ್ಪ ಅನ್ನಬಹುದು, ನಾವು ಶ್ವಾನ ಎಂದರೆ ತಪ್ಪಾ? ನಾನು ದೂರು ನೀಡಿದಾಗ ಸಚಿವರ ಹೆಸರು ಬರೆದಿರಲಿಲ್ಲ. ಆದರೆ, ಈ ವಿಚಾರದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ದಿಬ್ಬಂಧನ ಹಾಕದೆ ನಾನೇನು ಪ್ರಶಸ್ತಿಗೆ ಶಿಫಾರಸು ಮಾಡಬೇಕಿತ್ತಾ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಇದರಿಂದ ಅವರೇ ಕಾರ್ಯಕರ್ತರನ್ನು ಕಳುಹಿಸಿರುವುದು ಎನ್ನುವುದು ತಿಳಿಯುತ್ತದೆ. ಈಗಲೂ ಹೇಳುತ್ತೇನೆ. ಪ್ರಿಯಾಂಕ್ ಖರ್ಗೆ ಗೂಂಡಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಈ ಪದವನ್ನು ಕಡತದಿಂದ ತೆಗೆಸಬೇಕೆಂದು ಆಡಳಿತಾರೂಢ ಪಕ್ಷದ ನಾಯಕರು ಆಗ್ರಹಿಸಿದರು. ಕೊನೆಗೆ ಸಭಾಪತಿ ಪೀಠದಲ್ಲಿದ್ದ ಭೋಜೇಗೌಡ ಅವರು ಗೂಂಡಾ ಪದವನ್ನು ಕಡತದಿಂದ ತೆಗೆಸಿ ವಿಷಯ ಪ್ರಸ್ತಾಪ ಮುಗಿಸಿದರು.
Advertisement