ಸಿಎಂ ಪಟ್ಟಕ್ಕೆ ಪರಮೇಶ್ವರ್ ಹೆಸರು?: ಹೊಸ ದಾಳ ಉರುಳಿಸಲು ಸಿದ್ದರಾಮಯ್ಯ ಬಣ ಸಜ್ಜು..!

ವಿಧಾನಸಭೆಯಲ್ಲಿ "ಎರಡೂವರೆ ವರ್ಷದ ಅಧಿಕಾರ ಹಂಚಿಕೆ ತೀರ್ಮಾನವೇ ಆಗಿಲ್ಲ" ಎಂದು ಸಿಎಂ ಸ್ಪಷ್ಟಪಡಿಸಿದ್ದು, ಹೈಕಮಾಂಡ್ ಬೆಂಬಲದೊಂದಿಗೆ ಮುಂದುವರಿಯುವ ವಿಶ್ವಾಸದಲ್ಲಿದ್ದಾರೆ.
ಸಿಎಂ ಸಿದ್ದರಾಮಯ್ಯ, ಪರಮೇಶ್ವರ್
ಸಿಎಂ ಸಿದ್ದರಾಮಯ್ಯ, ಪರಮೇಶ್ವರ್
Updated on

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಪಾಲಿಟಿಕ್ಸ್ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಣ ಹೊಸ ರಾಜಕೀಯ ದಾಳ ಉರುಳಿಸಲು ಸಜ್ಜಾಗಿದೆ.

ವಿಧಾನಸಭೆಯಲ್ಲಿ "ಎರಡೂವರೆ ವರ್ಷದ ಅಧಿಕಾರ ಹಂಚಿಕೆ ತೀರ್ಮಾನವೇ ಆಗಿಲ್ಲ" ಎಂದು ಸಿಎಂ ಸ್ಪಷ್ಟಪಡಿಸಿದ್ದು, ಹೈಕಮಾಂಡ್ ಬೆಂಬಲದೊಂದಿಗೆ ಮುಂದುವರಿಯುವ ವಿಶ್ವಾಸದಲ್ಲಿದ್ದಾರೆ. ಒಂದು ವೇಳೆ ನಾಯಕತ್ವ ಬದಲಾವಣೆ ಅನಿವಾರ್ಯವಾದರೆ, ಡಿ.ಕೆ. ಶಿವಕುಮಾರ್ ಅವರಿಗೆ ಚೆಕ್ಮೇಟ್ ನೀಡಲು ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಹೆಸರನ್ನು ಮುನ್ನೆಲೆಗೆ ತರಲು ಸಿದ್ದು ಬಣ ರಣತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ.

ಕ್ಲೀನ್ ಇಮೇಜ್ ಮತ್ತು ಸೀನಿಯಾರಿಟಿ ಕಾರ್ಡ್ ಬಳಸಿ ಪರಮೇಶ್ವರ್ ಅವರನ್ನು ಸಿಎಂ ಕುರ್ಚಿಗೆ ಕೂರಿಸುವ ಲೆಕ್ಕಾಚಾರವನ್ನು ಸಿದ್ದರಾಯ್ಯ ಆಪ್ತ ಬಣ ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪರಮೇಶ್ವರ್ ಪರವಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಇದರ ಬೆನ್ನಲ್ಲೇ ಪರಮೇಶ್ವರ್ ಅವರೊಂದಿಗೂ ಬೆಳಗಾವಿಯಲ್ಲಿನ ತಮ್ಮ ನಿವಾಸದಲ್ಲಿ ಶುಕ್ರವಾರ ರಾತ್ರಿ 2 ಗಂಟೆಯವರೆಗೂ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ. ಈ ನಿರ್ಧಾರಕ್ಕೆ ಸಿದ್ದರಾಮಯ್ಯ ಕೂಡ ತಮ್ಮ ಮೌನದಿಂದಲೇ ಸಹಮತ ವ್ಯಕ್ತಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಮುಖ್ಯಮಂತ್ರಿ ಹುದ್ದೆಗೆ ಡಿಕೆ.ಶಿವಕುಮಾರ್ ಅವರನ್ನು ನೇಮಕಮಾಡಿದ್ದೇ ಆದರೆ, ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಉತ್ತರ ಕರ್ನಾಟಕದ ಸುಮಾರು 20–25 ಕಾಂಗ್ರೆಸ್ ಶಾಸಕರು ಬಿಜೆಪಿಯತ್ತ ಮುಖ ಮಾಡಲಿದ್ದಾರೆಂಬ ಸಂದೇಶವನ್ನು ಸಿದ್ಗು ಬಣ ಈಗಾಗಲೇ ಹೈಕಮಾಂಡ್'ಗೆ ರವಾನಿಸಿದೆ ಎಂದು ತಿಳಿದುಬಂದಿದೆ.

ಸಿಎಂ ಸಿದ್ದರಾಮಯ್ಯ, ಪರಮೇಶ್ವರ್
'ಹೈಕಮಾಂಡ್ ನಿಂದ ಕಾಲ್ ಬಂದಾಗ ನಾನು-ಸಿಎಂ ಹೋಗ್ತೀವಿ'; ನಿವಾಸದಲ್ಲಿ ನಾಗಸಾಧುಗಳನ್ನು ಭೇಟಿ ಮಾಡಿದ ಡಿಕೆಶಿ

ಈ ನಿಟ್ಟಿನಲ್ಲಿ ಈಗಾಗಲೇ ಕೆಲ ನಾಯಕರು ಈಗಾಗಲೇ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಯತ್ನಿಸಿದ್ದು, ಕೇಂದ್ರ ಸಚಿವ ಪ್ರಲಹದ್ ಜೋಶಿ ಮೂಲಕ ಸಂದೇಶವನ್ನೂ ರವಾನಿಸಿದ್ದಾರೆಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ಪಕ್ಷದ ಶಾಸಕರ ನಿರ್ಧಾರದಂತೆ ನಡೆಯುವಂತೆ ಹೈಕಮಾಂಡ್‌ಗೆ ಸಲಹೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಆದರೆ, ಕೆಲ ನಾಯಕರು ವಿದೇಶದಲ್ಲಿ ಶಿಕ್ಷಣ ಪಡೆದ ದಲಿತ ನಾಯಕರಾದ ಪರಮೇಶ್ವರ ಅವರಿಗೆ ಸಿಎಂ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆನ್ನಲಾಗಿದೆ.

ಪರಮೇಶ್ವರ ಅವರು ಎಂಟು ವರ್ಷಗಳ ಕಾಲ (2010-13) ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2013 ರಲ್ಲಿ ಪಕ್ಷವು ಅಧಿಕಾರಕ್ಕೆ ಬರಲು ಸಾಕಷ್ಟು ಶ್ರಮ ಪಟ್ಟಿದ್ದರು. 2018 ರಲ್ಲಿ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದ್ದರು, ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಆಗಿದ್ದರು.

ಪರಮೇಶ್ವರ್ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ. ರಾಹುಲ್ ಗಾಂಧಿಯವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆದರೆ, ಪರಮೇಶ್ವರ್ ಅವರಿಗೆ ಸಿಎಂ ಹುದ್ದೆ ಗಿಟ್ಟಿಸಲು ಸಿದ್ದು ಬಣ ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೇಗೆ ಮನವೊಲಿಸಲಿದದ್ದಾರೆಂಬುದು ಕುತೂಹಲ ಮೂಡಿಸಿದೆ.

ಈ ನಡುವೆ, ಡಿಕೆ.ಶಿವಕುಮಾರ್ ಅವರು ಶನಿವಾರ ಸಂಜೆ ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಭೇಟಿ ಮಾಡಿದ್ದು, ಈ ಭೇಟಿ ಹಲವರ ಹುಬ್ಬೇರುವಂತೆ ಮಾಡಿದೆ. ಡಿಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿದರೆ, ಅವರ ಸಂಪುಟದಲ್ಲಿ ಸಚಿವನಾಗುವುದಿಲ್ಲ ಎಂದು ಈ ಹಿಂದೆ ರಾಜಣ್ಣ ಅವರು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com