ಕಾಂಗ್ರೆಸ್‌ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್' ರ‍್ಯಾಲಿಗೆ ತಿರುಗೇಟು ನೀಡಲು BJP ಮುಂದು: ‘ಭೀಮ ಸಂಗಮ’ ಅಭಿಯಾನ ಆರಂಭಕ್ಕೆ ಸಿದ್ಧತೆ!

ಜ.25 ರವರೆಗೆ ರಾಜ್ಯ ಮಟ್ಟದಿಂದ ಬೂತ್‌ ಮಟ್ಟದವರೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಭೀಮ ಸಂಗಮ ನಡೆಸಲು ಹೆಚ್ಚಿನ ಒತ್ತು ನೀಡಬೇಕು. ನಾವು ಯಾವಾಗ ಮತ್ತು ಯಾವ ಕಾರಣಕ್ಕೆ ಸಂವಿಧಾನ ತಿದ್ದುಪಡಿ ಮಾಡಿದ್ದೆವು. ಕಾಂಗ್ರೆಸ್‌ ಯಾವಾಗ ಮತ್ತು ಯಾವ ಕಾರಣಕ್ಕೆ ತಿದ್ದುಪಡಿ ಮಾಡಿತ್ತು ಎಂಬುದನ್ನು ದಾಖಲೆ ಸಮೇತ ವಿವರಿಸಬೇಕು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಜನವರಿ 21 ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್‌ನ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್' ರ್ಯಾಲಿಗೆ ತಿರುಗೇಟು ನೀಡಲು ಬಿಜೆಪಿ ಮುಂದಾಗಿದ್ದು, ಭೀಮ ಸಂಗಮ ಅಭಿಯಾನ ಆರಂಭಿಸಲು ಚಿಂತನೆ ನಡೆಸುತ್ತಿದೆ.

ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ‘ಸಂವಿಧಾನ ಸನ್ಮಾನ ದಿನ, ನಮ್ಮ ಸಂವಿಧಾನ– ನಮ್ಮ ಹೆಮ್ಮೆ’ ಅಭಿಯಾನ ಕುರಿತ ಪಕ್ಷದ ಶಾಸಕರು, ಸಂಸದರ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

‘ಜ.25 ರವರೆಗೆ ರಾಜ್ಯ ಮಟ್ಟದಿಂದ ಬೂತ್‌ ಮಟ್ಟದವರೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಭೀಮ ಸಂಗಮ ನಡೆಸಲು ಹೆಚ್ಚಿನ ಒತ್ತು ನೀಡಬೇಕು. ನಾವು ಯಾವಾಗ ಮತ್ತು ಯಾವ ಕಾರಣಕ್ಕೆ ಸಂವಿಧಾನ ತಿದ್ದುಪಡಿ ಮಾಡಿದ್ದೆವು. ಕಾಂಗ್ರೆಸ್‌ ಯಾವಾಗ ಮತ್ತು ಯಾವ ಕಾರಣಕ್ಕೆ ತಿದ್ದುಪಡಿ ಮಾಡಿತ್ತು ಎಂಬುದನ್ನು ದಾಖಲೆ ಸಮೇತ ವಿವರಿಸಬೇಕು. ಜ. 25 ರಂದು ಪ್ರತಿ ಮತಗಟ್ಟೆಯಲ್ಲಿ 30 ರಿಂದ 40 ಜನರನ್ನು ಸೇರಿಸಿ ಅಂಬೇಡ್ಕರ್‌ ಭಾವಚಿತ್ರ ಮತ್ತು ಸಂವಿಧಾನದ ಪ್ರತಿಗೆ ಪುಷ್ಪ ಅರ್ಪಿಸಿ ಸಂವಿಧಾನದ ಪೀಠಿಕೆ ಓದಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.

ಪ್ರತಿಯೊಬ್ಬ ಶಾಸಕ, ಮಾಜಿ ಶಾಸಕ, ಸಂಸದ, ಮಾಜಿ ಸಂಸದರು ಸೇರಿ ತಮ್ಮ ಮನೆಗೆ ಕನಿಷ್ಠ 50 ದಲಿತ ಕುಟುಂಬಗಳನ್ನು ಕರೆಸಿ, ಊಟೋಪಚಾರ ಮಾಡಬೇಕು. ಪ್ರತಿ ಕ್ಷೇತ್ರದಲ್ಲಿ ಶಾಸಕರು, ಸಂಸದರು ಇದನ್ನು ನಡೆಸಬೇಕು. ಇದರ ಜತೆಗೆ ಸಂವಿಧಾನದ ಮಹತ್ವ ತಿಳಿಸುವುದು ಮತ್ತು ಯಾರು? ಏನೇನು ಮಾಡಿದರು ಎಂಬುದರ ಬಗ್ಗೆ ಅರಿವು ಮೂಡಿಸಬೇಕು. ಕಾಂಗ್ರೆಸ್‌ನ ನಯವಂಚಕತನವನ್ನೂ ವಿವರಿಸಬೇಕು. ಅಲ್ಲದೇ, ಪ್ರತಿ ವಿಧಾನಸಭಾ ಕ್ಷೇತ್ರ, ಮಂಡಲ ವ್ಯಾಪ್ತಿಯಲ್ಲಿ ಶಾಸಕರಿಂದ ಬಹಿರಂಗ ಸಮ್ಮೇಳನವನ್ನು ಸಹ ಆಯೋಜಿಸಬೇಕು ಎಂದು ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಸಂಗ್ರಹ ಚಿತ್ರ
ಬೆಳಗಾವಿಯಲ್ಲಿ ಜನವರಿ 21ಕ್ಕೆ ಜೈ ಬಾಪು, ಜೈಭೀಮ್, ಜೈ ಸಂವಿಧಾನ ಸಮಾವೇಶ: ಡಿಕೆ ಶಿವಕುಮಾರ್

'ಭೀಮ ಸಂಗಮ' ಅಭಿಯಾನವನ್ನು ಯಾವುದೇ ಸಮಯದಲ್ಲಿ ಆಯೋಜಿಸಬಹುದು, ಆದರೆ, ಜನವರಿ 25 ರೊಳಗೆ ಪೂರ್ಣಗೊಳ್ಳಬೇಕು, ಏಕೆಂದರೆ ಜನವರಿ 26 ಕ್ಕೆ ಪಕ್ಷ ಇತರೆ ಯೋಜನೆಗಳನ್ನು ಹಾಕಿಕೊಂಡಿದ್ದು, ನಂತರ ದಿನಗಳಲ್ಲಿ ಅಭಿಯಾನ ಮುಂದುವರೆಸುವ ಕುರಿತು ಚಿಂತನೆಗಳ ನಡೆಸಲಾಗುವುದು. ಈ ನಿಟ್ಟಿನಲ್ಲಿ ಪಕ್ಷ ನೀಡಿರುವ ಸೂಚನೆಗಳನ್ನು ನಿರ್ಲಕ್ಷಿಸುವವರ ವಿರುದ್ಧ ಕ್ರಮ ಕೈಗೊಳ್ಳಳಾಗುತ್ತದೆ. ಮುಂದಿನ ಚುನಾವಣೆಗಳಲ್ಲಿ ಟಿಕೆಟ್ ಕಳೆದುಕೊಳ್ಳಬೇಕಾಗುತ್ತದೆ ಎಂದೂ ಎಚ್ಚರಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಅಭಿಯಾನ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಅವರು, ಸಂವಿಧಾನಸ, ದಲಿತರ ವಿಶೇಷವಾಗಿ ಅಂಬೇಡ್ಕರ್‌ವಾದಿಗಳ ಕುರಿತು ಬಿಜೆಪಿ ಮತ್ತು ಬಿಜೆಪಿ ಹೈ ಕಮಾಂಡ್ ಯಾವುದೇ ವಿರೋಧವನ್ನು ಹೊಂದಿಲ್ಲ ಎಂಬುದರ ಕುರಿತು ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಇದಲ್ಲದೆ, ಕಮಲ ಪಕ್ಷವು 'ಅಸ್ಪೃಶ್ಯತೆಯ' ಆಚರಣೆಯನ್ನು ನಿರ್ಮೂಲನೆ ಮಾಡುವುದನ್ನು ಬೆಂಬಲಿಸುತ್ತದೆ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನ ಇದಾಗಿದೆ. ಅಭಿಯಾನದಡಿ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಮತ್ತು ನವದೆಹಲಿಯಲ್ಲಿ ಅವರ ಸಮಾಧಿಗೆ ಭೂಮಿಯನ್ನು ನೀಡದೆ ಹೇಗೆ ಕೆಟ್ಟದಾಗಿ ನಡೆಸಿಕೊಂಡಿದೆ ಎಂಬುದರ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಸಂವಿಧಾನಕ್ಕೆ ಈವರೆಗೆ 106 ಸಂವಿಧಾನಕ್ಕೆ ಕಾಂಗ್ರೆಸ್‌ನಿಂದ ಗರಿಷ್ಠ ತಿದ್ದುಪಡಿಗಳನ್ನು ಮಾಡಲಾಗಿದೆ. ಬಿಜೆಪಿ 22 ತಿದ್ದುಪಡಿ ಮಾಡಿದ್ದು, ಮಾಜಿ ಪ್ರಧಾನಿ ಎ.ಬಿ. ವಾಜಪೇಯಿಯವರ ಕಾಲದಲ್ಲಿ 14, ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ 8 ತಿದ್ದುಪಡಿ ಮಾಡಲಾಗಿದೆ. ಇವೆಲ್ಲವೂ ಸಂವಿಧಾನದ ಪರ, ಮೀಸಲಾತಿಯ ಪರ ಇದ್ದು, ಎಸ್ಸಿ, ಎಸ್ಟಿ ಮತ್ತು ಇತರೆ ವರ್ಗಗಳಿಗೆ ಶಕ್ತಿ ತುಂಬುವ ತಿದ್ದುಪಡಿಗಳಾಗಿವೆ. ಒಂದೇ ಒಂದು ತಿದ್ದುಪಡಿ ಸಂವಿಧಾನ ವಿರೋಧಿ, ಎಸ್ಸಿ ಎಸ್ಟಿ ವಿರೋಧಿ ಇದ್ದಲ್ಲಿ ಕಾಂಗ್ರೆಸ್ಸಿನವರು ತೋರಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷವು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಡಿದ ತಿದ್ದುಪಡಿಗಳು ಕರಾಳ ತಿದ್ದುಪಡಿಗಳಾಗಿವೆ. ವ್ಯಕ್ತಿಯ ಸ್ವಾತಂತ್ರ್ಯ ಹರಣ, ಜೀವಿಸುವ ಸ್ವಾತಂತ್ರ್ಯ ಹರಣ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ, ನ್ಯಾಯಾಲಯ ನಿಯಂತ್ರಣ ಮಾಡುವ ತಿದ್ದುಪಡಿಗಳನ್ನು ಕಾಂಗ್ರೆಸ್ಸಿಗರು ಮಾಡಿದ್ದರು ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com