
ಮಂಡ್ಯ: ಸಿಎಂ ಸಿದ್ದರಾಮಯ್ಯರನ್ನು ಮೊದಲು ಸೋನಿಯಾ ಗಾಂಧಿಗೆ ಭೇಟಿ ಮಾಡಿಸಿದ್ದೇ ನಾನು, ಆತನ ಅದೃಷ್ಟ ಚೆನ್ನಾಗಿತ್ತು ಹೀಗಾಗಿ ಸಿಎಂ ಆದ ಎಂದಿದ್ದ ಶಾಸಕ ಬಿ.ಆರ್ ಪಾಟೀಲ್ ಅವರು ಇದೀಗ ತಮ್ಮ ಹೇಳಿಕೆ ಸಂಬಂಧ ಯೂಟರ್ನ್ ಹೊಡೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ನನ್ನ ಹಾಗೂ ಸಿಎಂ ಸಿದ್ದರಾಮಯ್ಯರ ಸಂಬಂಧ ಹಾಳು ಮಾಡಲು ಈ ವಿಡಿಯೋ ಬಿಟ್ಟಿದ್ದಾರೆ .ನನ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ.
ನಾನು ನನ್ನ ಕೆ.ಆರ್ ಪೇಟೆಯಲ್ಲಿ ಸ್ನೇಹಿತರ ಜೊತೆ ಮಾತನ್ನಾಡುವಾಗ ಸಿದ್ದರಾಮಯ್ಯರ ವಿಚಾರ ಪ್ರಸ್ತಾಪವಾಯಿತು. ಆಗ ಸಿದ್ದರಾಮಯ್ಯ ಲಕ್ಕಿ ಲಾಟರಿಯಿಂದ ಸಿಎಂ ಆದರು ಎಂದು ಹೇಳಿದೆ. ಆದರೆ, ಸೋನಿಯಾ ಗಾಂಧಿಯನ್ನ ಭೇಟಿ ಮಾಡಿಸಿದ್ದು ನಾನೇ ಎಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.
ನಾನೂ ಕೂಡ ಸೋನಿಯಾ ಗಾಂಧಿ ಭೇಟಿಗೆ ಅವರ ಜೊತೆ ಹೋಗಿದ್ದೆ. ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್ .ಅವರನ್ನ ಸಿಎಂ ಮಾಡುವ ಶಕ್ತಿ ನನಗೆ ಇಲ್ಲ. ನನ್ನ ಅವರ ಆತ್ಮೀಯ ಸಂಬಂಧವನ್ನು ಹಾಳು ಮಾಡಲು ಕೆಲವರು ಉದ್ದೇಶಪೂರ್ವಕವಾಗಿ ಯತ್ನಿಸುತ್ತಿದ್ದಾರೆಂದು ಹೇಳಿದ್ದಾರೆ.
ಜೆಡಿಎಸ್ ಬಿಟ್ಟು ಬಂದ 8 ಶಾಸಕರಲ್ಲಿ ನಾನು ಒಬ್ಬ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದೇವೆ. ಈ ಪೈಕಿ ಕೆಲವರು ಮಂತ್ರಿಗಳಾಗಿದ್ದಾರೆ. ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದು ಮುಖ್ಯಮಂತ್ರಿ ಆಗಿದ್ದಾರೆ. ಅಪಸ್ವರ ಎದ್ದಿದ್ದಕ್ಕೆ ಸುರ್ಜೇವಾಲಾ ರಾಜ್ಯಕ್ಕೆ ಬಂದಿದ್ದರು. ಶಾಸಕರ ನೋವು ಏನಿದೆ ಎಂದು ತಿಳಿದುಕೊಳ್ಳಲು ನನ್ನನ್ನು ಕರೆಸಿದ್ದರು. ನಾನು 45 ನಿಮಿಷ ಮಾತನಾಡಿ ಎಲ್ಲಾ ವಿವರ ನೀಡಿದ್ದೇನೆ. ನನ್ನ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ. ಮುಂದೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದು ಅವರಿಗೆ ಬಿಟ್ಟದ್ದು.
ನಾನು ಸಿದ್ದರಾಮಯ್ಯ ರೈತ ಚಳುವಳಿ ಮೂಲಕ ಬಂದಿದ್ದೇವೆ. ನಂಜುಂಡಸ್ವಾಮಿ ಅವರು ಹುರಿದುಂಬಿಸಲಿಲ್ಲ ಎಂದರೆ ಸಿದ್ದರಾಮಯ್ಯ ರಾಜಕೀಯಕ್ಕೆ ಬರುತ್ತಿರಲಿಲ್ಲ. ಕೆಲವರಿಗೆ ಗಾಡ್ ಇದ್ದರೆ ಕೆಲವರಿಗೆ ಗಾಡ್ಫಾದರ್ ಇದ್ದಾರೆ. ನನಗೆ ಗಾಡ್ ಇಲ್ಲ, ಗಾಡ್ಫಾದರ್ ಇಲ್ಲ, ಸಿದ್ದಾಂತವೇ ನನ್ನ ಗಾಡ್ಫಾದರ್ ಎಂದು ವ್ಯಂಗ್ಯವಾಡಿದರು.
ಸಿಎಂ ಬದಲಾವಣೆ ಬಗ್ಗೆ ಮಾತನಾಡುವ ಶಕ್ತಿ ನನಗೆ ಇಲ್ಲ. ಸಿಎಂ ಬದಲಾವಣೆ ಹೈಕಮಾಂಡ್ಗೆ ಬಿಟ್ಟ ವಿಚಾರ. ಡಿಕೆ ಶಿವಕುಮಾರ್ ಸಿಎಂ ಆಗುವುದು ನನಗೆ ಗೊತ್ತಿಲ್ಲ ಎಂದರು.
ನಾಯಕತ್ವದ ವಿಚಾರದ ಬಗ್ಗೆ ಸುರ್ಜೇವಾಲಾ ಮಾತಾಡಿಲ್ಲ. ಸಿದ್ದರಾಮಯ್ಯ ಮೇಲೆ ಕೆಲ ವಿಚಾರ ಅದರಲ್ಲೂ ಅನುದಾನ ನೀಡುವ ವಿಚಾರದಲ್ಲಿ ನನಗೆ ಬೇಸರ ಇದೆ. ಇದನ್ನು ಹೈಕಮಾಂಡ್ ಬಳಿಯೂ ಹೇಳಿಕೊಂಡಿದ್ದೇವೆ ಎಂದರು.
Advertisement