ಗಣಪತಿ, ವಾಸುಕಿ ವಿಗ್ರಹಗಳ ಪಾವಿತ್ರ್ಯತೆಗೆ ಧಕ್ಕೆ ತಂದ ದುಷ್ಠ ಶಕ್ತಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಿ: ಸರ್ಕಾರಕ್ಕೆ BJP ಆಗ್ರಹ
ಬೆಂಗಳೂರು: ಹಿಂದುಗಳು ಶ್ರದ್ಧೆಯಿಂದ ಪೂಜಿಸಲ್ಪಡುವ ಗಣಪತಿ, ವಾಸುಕಿ ವಿಗ್ರಹಗಳ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ದುಷ್ಠ ಶಕ್ತಿಗಳ ವಿರುದ್ಧ ಸರ್ಕಾರ ಈ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಭಾನುವಾರ ಆಗ್ರಹಿಸಿದೆ.
ಶಿವಮೊಗ್ಗದ ರಾಗಿಗುಡ್ಡದಲ್ಲಿನ ನಾಗರ ಕಟ್ಟೆಯ ಮೇಲಿದ್ದ ಗಣಪತಿ ಹಾಗೂ ಶೇಷನಾಗ ವಿಗ್ರಹಗಳನ್ನು ವಿರೂಪಗೊಳಿಸಿ ಕಾಲಿನಿಂದ ಒದ್ದು ಚರಂಡಿಗೆ ಎಸೆದ ಪ್ರಕರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಶಿವಮೊಗ್ಗದಲ್ಲಿ ಒಂದಷ್ಟು ದಿನಗಳ ಕಾಲ ಕಿಡಿಗೇಡಿತನದ ಕೃತ್ಯಗಳಿಗೆ ವಿರಾಮ ಹಾಡಿದ್ದ ಹಿಂದೂ ವಿರೋಧಿಗಳು, ಮತ್ತೆ ಕುಕೃತ್ಯ ಆರಂಭಿಸಿದ್ದಾರೆ. ಶಿವಮೊಗ್ಗದ ರಾಗಿಗುಡ್ಡದಲ್ಲಿನ ನಾಗರ ಕಟ್ಟೆಯ ಮೇಲಿದ್ದ ಗಣಪತಿ ಹಾಗೂ ಶೇಷನಾಗ ವಿಗ್ರಹಗಳನ್ನು ವಿರೂಪಗೊಳಿಸಿ ಕಾಲಿನಿಂದ ಒದ್ದು ಚರಂಡಿಗೆ ಎಸೆದು ದಾಷ್ಟ್ಯತನ ಮೆರೆದಿದ್ದಾರೆ.
ಹಿಂದೂ ಸಂಘಟನೆಗಳನ್ನು ಹಳದಿ ಕಣ್ಣಿನಿಂದ ನೋಡುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಶಕ್ತಿಗಳಿಗೆ ಸದಾ ಬೆನ್ನೆಲುಬಾಗಿ ನಿಂತಿದೆ, ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ದುಷ್ಟರ ಅಟ್ಟಹಾಸ ವಿಪರೀತಕ್ಕೆ ಹೋಗಿದೆ. ಹಿಂದೂ ಸಮಾಜದ ಸುಭದ್ರತೆಗಾಗಿ ಸದಾ ಸಂಘಟಿತವಾಗಿ ರಚನಾತ್ಮಕ ಕಾರ್ಯಗಳ ಮೂಲಕ ಉತ್ತಮ ಸಂದೇಶ ಬಿತ್ತರಿಸುವ ಶಿವಮೊಗ್ಗ ನೆಲದಲ್ಲಿ ಮತ್ತೆ ಶಾಂತಿ ಭಂಗ ಮಾಡಲು ಶ್ರದ್ಧೆಯಿಂದ ಪೂಜಿಸಲ್ಪಡುವ ಗಣಪತಿ, ವಾಸುಕಿ ವಿಗ್ರಹಗಳ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ದುಷ್ಠ ಶಕ್ತಿಗಳ ವಿರುದ್ಧ ಸರ್ಕಾರ ಈ ಕೂಡಲೇ ಕಠಿಣ ಕ್ರಮ ಜರುಗಿಸದಿದ್ದರೆ ಮುಂದಾಗುವ ಪರಿಣಾಮಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ