ರಾಜ್ಯದ ಕೆಲ ಭಾಗಗಳನ್ನು ದ್ವೇಷದ ಪ್ರಯೋಗಾಲಯಗಳನ್ನಾಗಿ ಮಾಡುತ್ತಿದೆ BJP-RSS: ಪ್ರಿಯಾಂಕ್ ಖರ್ಗೆ

ಬಿಜೆಪಿ ಹಾಗೂ ಆರ್'ಎಸ್ಎಸ್ ಕರಾವಳಿ ಕರ್ನಾಟಕ, ಮಲೆನಾಡು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳನ್ನು ದ್ವೇಷದ ಪ್ರಯೋಗಾಲಯಗಳನ್ನಾಗಿ ಪರಿವರ್ತಿಸುತ್ತಿವೆ.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಬಿಜೆಪಿ ಮತ್ತು ಆರ್‌ಎಸ್‌ಎಸ್ ರಾಜ್ಯದ ಕೆಲವು ಭಾಗಗಳನ್ನು ದ್ವೇಷದ ಪ್ರಯೋಗಾಲಯಗಳನ್ನಾಗಿ ಮಾಡುತ್ತಿದೆ. ಕೋಮುದ್ವೇಷವನ್ನು ಹರಡುತ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರ ಷಡ್ಯಂತ್ರಕ್ಕೆ ಪ್ರತಿಯಾಗಿ ಕಲಬುರಗಿಯ ಪ್ರಜ್ಞಾವಂತ ನಾಗರೀಕರು ನನ್ನನ್ನು ಬೆಂಬಲಿಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆಂದೂ ಹೇಳಿದ್ದಾರೆ.

ರಾಜಕೀಯವಾಗಿ ಸೈದ್ಧಾಂತಿಕವಾಗಿ, ವೈಚಾರಿಕವಾಗಿ ನನ್ನನ್ನು ಎದುರಿಸಲು ಸಾಧ್ಯವಾಗದ ಬಿಜೆಪಿಯವರು ವೈಯಕ್ತಿಕ ದಾಳಿಗಳ ಮೂಲಕ ನನ್ನ ತೇಜೋವಧೆಗೆ ಪ್ರಯತ್ನಿಸಿದರು. ಇದನ್ನು ಕಂಡು ಸಹಿಸದೇ ಪ್ರಜ್ಞಾವಂತ ನಾಗರೀಕರಾದ ನೀವು ಸಿಡಿದೆದಿದ್ದೀರಿ ಎಂದು ಧನ್ಯವಾದ ಹೇಳಿದ್ದಾರೆ.

ವಚನ ಚಳವಳಿಯ ಮೂಲಕ ನಾಡಿಗೆ ವಿಚಾರ ಕ್ರಾಂತಿಯನ್ನು ಪರಿಚಯಿಸಿದ ಕಲ್ಯಾಣ ಕರ್ನಾಟಕವು ಅಂದಿನಿಂದ ಇಂದಿನವರೆಗೂ ವೈಚಾರಿಕ ಪ್ರಜ್ಞೆಯಲ್ಲಿ ಸದಾ ಮುಂದಿದ್ದಾರೆ. ಇಂತಹ ಕಲ್ಯಾಣ ಶರಣರ ನಾಡು ಎಂದಿಗೂ ಆರ್‌ಎಸ್‌ಎಸ್ ಬಿಜೆಪಿಯವರ ಮಲಿನ ಚಿಂತನೆಗಳಿಗೆ ಅವಕಾಶ ಕೊಡುವುದಿಲ್ಲ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಶಕ್ತಿಯನ್ನು ನಂಬಿರುವ ಕಲಬುರಗಿಯ ಜನರು ಇಂದು ನನ್ನ ಪರವಾಗಿ ಬೃಹತ್ ಮಟ್ಟದ ವೈಚಾರಿಕ ಬೆಂಬಲವನ್ನು ದಾಖಲಿಸಿದ್ದು ನನ್ನ ಋಣಭಾರವನ್ನು ಇನ್ನಷ್ಟು ಹೆಚ್ಚಿಸಿದೆ.

ಕಲಬುರಗಿಯ ಪ್ರಬುದ್ಧ ಜನರೇ, ಸತ್ಯದ ಹಾದಿಯಲ್ಲಿ ನಡೆಯುವವರಿಗೆ, ಜನಹಿತಕ್ಕಾಗಿ ಬದುಕುವವರಿಗೆ ಎಂದಿಗೂ ಬೆಂಬಲ ಇದ್ದೇ ಇರುತ್ತದೆ ಎಂಬುದನ್ನು ನೀವು ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ. ನನ್ನನ್ನು ಕೇವಲ ರಾಜಕಾರಣಿಯನ್ನಾಗಿ ನೋಡದೆ, ನಿಮ್ಮಲ್ಲಿ ಒಬ್ಬ ಎಂದು ಪರಿಗಣಿಸಿ ತೋರಿಸುತ್ತಿರುವ ಪ್ರೀತಿ, ಕಾಳಜಿ ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ.

Priyank Kharge
ಪ್ರಿಯಾಂಕ್ ಖರ್ಗೆ ವಜಾಗೊಳಿಸುವಂತೆ ಆಗ್ರಹಿಸಿ ಬಿಜೆಪಿಯಿಂದ 'ಕಲಬುರಗಿ ಚಲೋ'

ರಾಜಕೀಯವಾಗಿ, ಸೈದ್ದಂತಿಕವಾಗಿ, ವೈಚಾರಿಕವಾಗಿ ನನ್ನನ್ನು ಎದುರಿಸಲು ಸಾಧ್ಯವಾಗದ ಬಿಜೆಪಿಯವರು ವೈಯಕ್ತಿಕ ದಾಳಿಗಳ ಮೂಲಕ ನನ್ನ ತೇಜೋವಧೆಗೆ ಪ್ರಯತ್ನಿಸುತ್ತಿರುವುದನ್ನು ಕಂಡು ಸಹಿಸದೇ ಪ್ರಜ್ಞಾವಂತ ನಾಗರಿಕರಾದ ನೀವು ಸಿಡಿದೆದ್ದಿದ್ದೀರಿ. ನನ್ನ ಮೇಲೆ ಅಪಾರ ವಿಶ್ವಾಸ ಇರಿಸಿರುವ ನೀವು, ನನ್ನಲ್ಲಿನ ಸ್ಥೈರ್ಯ ಕೊಂಚವೂ ಕುಗ್ಗದಂತೆ ಬಲ ತುಂಬಿದ್ದೀರಿ. ನಿಮ್ಮ ಈ ಅಭಿಮಾನ, ಪ್ರೀತಿಯನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ.

ನನ್ನ ಮೇಲಿನ ಪ್ರತಿ ದಾಳಿಗೂ ಸಾವಿರಾರು ವಿರೋಧದ ಧ್ವನಿಗಳು ಅನುರಣಿಸುತ್ತವೆ, ಕೀಳು ತಂತ್ರಗಳಿಗೆ ಎದಿರೇಟು ನೀಡುವ ಜನಶಕ್ತಿ ನನ್ನೊಂದಿಗೆ ಇದೆ ಎಂಬುದನ್ನು ಮನುವಾದಿಗಳಿಗೆ ಮನವರಿಕೆ ಮಾಡಿದ್ದೀರಿ. ನಾವೆಲ್ಲರೂ ಬಾಬಾ ಸಾಹೇಬರ ಆದರ್ಶಗಳು, ಸಂವಿಧಾನದ ತತ್ವಗಳನ್ನು ಪಾಲಿಸುವವರು. ನಮ್ಮ ಹೋರಾಟಗಳು ಸತ್ಯದ ಪರವಾಗಿರುತ್ತದೆ. ಆಚಾರವಿಲ್ಲದ ನಿಮ್ಮ ನಾಲಿಗೆ ಆಡುವ ಹೊಲಸು ಮಾತುಗಳಿಂದ ನಮ್ಮನ್ನು ಹಣಿಯಲು ಸಾಧ್ಯವಿಲ್ಲ ಎಂಬುದನ್ನು ಮನುಸ್ಮೃತಿ ಆರಾಧಕರಿಗೆ ಮತ್ತೊಮ್ಮೆ ಅರ್ಥಮಾಡಿಸಿದ್ದೀರಿ.

ಸಮಾಜದ ಸ್ವಾಸ್ಥ್ಯ ಕೆಡಿಸುವ ಮನುವಾದದ ಮನಸ್ಥಿತಿಯವರ ಕುತಂತ್ರಗಳು ಸಫಲವಾಗುವುದಿಲ್ಲ. ಪ್ರಿಯಾಂಕ್ ಖರ್ಗೆ ಒಂಟಿಯಲ್ಲ, ನನ್ನೊಂದಿಗೆ ಬಾಬಾ ಸಾಹೇಬರನ್ನು ಅನುಸರಿಸುವ ಹಾಗೂ ಬಸವಣ್ಣನನ್ನು ಆರಾಧಿಸುವ ಸಾವಿರಾರು ಪಡೆಗಳಿವೆ ಎನ್ನುವ ಸಂಗತಿ ನನ್ನಲ್ಲಿ ಮತ್ತಷ್ಟು ಶಕ್ತಿ, ಆತ್ಮವಿಶ್ವಾಸ ತುಂಬಿದೆ. ನಿಮ್ಮೆಲ್ಲರ ಈ ಪ್ರೀತಿ, ಈ ಅಭಿಮಾನ, ಈ ಅಭೂತಪೂರ್ವ ಬೆಂಬಲವು ನನ್ನಲ್ಲಿ ಮತ್ತಷ್ಟು ಶಕ್ತಿ ತುಂಬಿದೆ, ಸಾಮಾಜಿಕ ಪಿಡುಗಿನಂತಾಗಿರುವ ಮನುವಾದಿಗಳನ್ನು ಎದುರಿಸುವ ಕೆಲಸವನ್ನು ನಿಮ್ಮೆಲ್ಲರ ಬೆಂಬಲದೊಂದಿಗೆ ನಾನು ಮುಂದುವರೆಸುತ್ತಲೇ ಇರುತ್ತೇನೆ, ಅಸಹಾಯಕರ, ಶೋಷಿತರ ಏಳಿಗೆಗಾಗಿ ನನ್ನ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರೆಸುತ್ತಿರುತ್ತೇನೆಂದು ತಿಳಿಸಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಅಮೆರಿಕದ ಹಿತಾಸಕ್ತಿಗಳಿಗೆ ಅನುಗುಣವಾಗಿ ಭಾರತದ ವಿದೇಶಾಂಗ ನೀತಿಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಒಮ್ಮೆ ತಮ್ಮ "ಸ್ನೇಹಿತ" ಎಂದು ಕರೆದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಕಾಶ್ಮೀರ ವಿಷಯದ ಬಗ್ಗೆ ಏಕೆ ಪ್ರತಿಕ್ರಿಯಿಸುತ್ತಿದ್ದಾರೆ? ಕಾಶ್ಮೀರ ನಮ್ಮ ಆಂತರಿಕ ವಿಚಾರ ಎಂದು ಮೋದಿಯವರೇ ಒತ್ತಿ ಹೇಳಿದ್ದರು. ಇದೀಗ ಸರ್ಕಾರವೇಕೆ ಅಂತರರಾಷ್ಟ್ರೀಯಗೊಳಿಸುತ್ತಿದೆ?

Priyank Kharge
ಸಾವಿನ ಮನೆಯ ಸೂತಕದ ಬೆಂಕಿಯಲ್ಲಿ ಹೋಳಿಗೆ ಬೇಯಿಸುವ ಬಿಜೆಪಿಯವರಿಗೆ ಹೆಣ-ಹಣ ಪ್ರೀತಿಪಾತ್ರ ವಿಷಯಗಳು: ಪ್ರಿಯಾಂಕ್ ಖರ್ಗೆ

ಪ್ರಧಾನಿ ಮೋದಿ ಇದರ ಬಗ್ಗೆ ಮೌನವಾಗಿದ್ದಾರೇಕೆ? ಸಾರ್ವಭೌಮ ರಾಷ್ಟ್ರವಾಗಿ ನಮ್ಮ ದೇಶದ ವಿದೇಶಾಂಗ ನೀತಿಯನ್ನು ಅಮೆರಿಕಕ್ಕೆ ಅಡವಿಡಲಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಆಡಳಿತ ಪಕ್ಷದ ಸದಸ್ಯರು ಆಗಾಗ್ಗೆ ಮಾಡುವ ವಿದೇಶ ಪ್ರವಾಸಗಳ ಕುರಿತಂತೆಯೂ ಪ್ರಶ್ನೆ ಮಾಡಿದ್ದಾರೆ.

ಹಲವು ದೇಶಗಳಿಗೆ ಹೋಗಿರುವವರೆಲ್ಲರೂ, ಆ ರಾಷ್ಟ್ರಗಳ ಮುಖ್ಯಸ್ಥರನ್ನು ಅಥವಾ ಸರ್ಕಾರದ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದಾರೆಯೇ? ಅವರು ನಿಜವಾಗಿಯೂ ಯಾರನ್ನು ಭೇಟಿಯಾಗುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಹಾಗೂ ಆರ್'ಎಸ್ಎಸ್ ಕರಾವಳಿ ಕರ್ನಾಟಕ, ಮಲೆನಾಡು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳನ್ನು ದ್ವೇಷದ ಪ್ರಯೋಗಾಲಯಗಳನ್ನಾಗಿ ಪರಿವರ್ತಿಸುತ್ತಿವೆ.

"ಸಂಘ ಪರಿವಾರ ಮತ್ತು ಅದರ ಅಂಗಸಂಸ್ಥೆಗಳು ಎಂದಿಗೂ ಉದ್ಯೋಗಗಳನ್ನು ಸೃಷ್ಟಿಸಲು ಆದ್ಯತೆ ನೀಡಿಲ್ಲ, ಬದಲಿಗೆ ದ್ವೇಷವನ್ನು ಹರಡುವತ್ತ ಗಮನಹರಿಸಿವೆ. ವಿಪರ್ಯಾಸವೆಂದರೆ ಅವರು ತಮ್ಮ ಮಕ್ಕಳನ್ನು ಈ ದ್ವೇಷದ ಜಾಲದಲ್ಲಿ ಸಿಲುಕಿಸುತ್ತಿಲ್ಲ. ಬದಲಿಗೆ ಬಡವರ ಮತ್ತು ಹಿಂದುಳಿದವರ ಮಕ್ಕಳನ್ನು ರವಾನಿಸುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com