
ಬೆಳಗಾವಿ: ಸಚಿವ ಸಂಪುಟ ಪುನರ್ರಚನೆ ಮತ್ತು ಹೊಸ ಕೆಪಿಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ಊಹಾಪೋಹಗಳು ಶುರುವಾಗುತ್ತಿದ್ದಂತೆಯೇ ಹುದ್ದೆಗೆ ಪ್ರಬಲ ಆಕಾಂಕ್ಷಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಂಗಳವಾರ ದೆಹಲಿಗೆ ದಿಢೀರ್ ಭೇಟಿ ನೀಡಿದ್ದು, ಈ ಬೆಳವಣಿಗೆ ಹಲವರ ಹುಬ್ಬೇರುವಂತೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಷ್ಟ್ರ ರಾಜಧಾನಿಗೆ ತೆರಳಿದ ಕೆಲವೇ ಗಂಟೆಗಳಲ್ಲೇ ಸತೀಶ್ ಅವರು ಕೂಡ ದೆಹಲಿಗೆ ತೆರಳಿದರು.
ಹೈಕಮಾಂಡ್ ಜೊತೆ ಸಚಿವ ಸಂಪುಟ ಬದಾಲವಣೆ ಕುರಿತು ಚರ್ಚೆಗಳು ನಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಾಕರಿಸಿದರೂ, ಈ ವಿಚಾರ ಕುರಿತು ಚರ್ಚೆ ನಡೆದಿದ್ದು, ಮುಂಬರುವ ಕೆಲ ವಾರಗಳಲ್ಲಿ ಕೆಪಿಸಿಸಿ ನಾಯಕತ್ವದಲ್ಲಿ ಬದಲಾಣೆಯಾಗುವ ಸಾಧ್ಯತೆ ಇದೆ ಎಂದು ಪಕ್ಶದ ಮೂಲಗಳು ಮಾಹಿತಿ ನೀಡಿವೆ.
ಕೆಪಿಸಿಸಿ ನಾಯಕತ್ವಕ್ಕೆ ಸತೀಶ್ ಪರವಾಗಿ ಸಿದ್ದರಾಮಯ್ಯ, ಎಚ್ಸಿ ಮಹಾದೇವಪ್ಪ, ರಾಜಣ್ಣ ಮತ್ತು ಡಾ. ಜಿ. ಪರಮೇಶ್ವರ ಸೇರಿದಂತೆ ಪ್ರಮುಖ ಅಹಿಂದ ನಾಯಕರು ಮತ್ತು 15 ಎಸ್ಟಿ ಸಮುದಾಯದ ಶಾಸಕರು ಬೆಂಬಲಕ್ಕೆ ನಿಂತಿದ್ದು, ಉತ್ತರ ಕರ್ನಾಟಕದ ಪಕ್ಷದ ಹೆಚ್ಚಿನ ಶಾಸಕರೂ ಕೂಡ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಹೈಕಮಾಂಡ್ ಜಾರಕಿಹೊಳಿಯವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಳಿಸಿದರೂ ಜಾರಕಿಹೊಳಿ ಮತ್ತು ಮತ್ತೊಬ್ಬ ನಾಯಕ ಈಶ್ವರ್ ಖಂಡ್ರೆ ಅವರನ್ನು ಸಚಿವ ಸ್ಥಾನದಲ್ಲೇ ಮುಂದುವರೆಸಬೇಕೆಂದೂ ಆಗ್ರಹಗಳು ವ್ಯಕ್ತವಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಭೇಟಿ ವೇಳು ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿಯವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಜೊತೆ ಹೈಕಮಾಂಡ್ ನಡೆಸಿದ ಚರ್ಚೆಗಳ ಬಗ್ಗೆ ನನಗೆ ತಿಳಿದಿಲ್ಲ. ನನ್ನ ದೆಹಲಿ ಭೇಟಿಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಆದರೆ, ಮೂಲಗಳು ಪಕ್ಷದ ನಾಯಕತ್ವದೊಂದಿಗೆ ರಾಜಕೀಯ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿವೆ.
ಈ ನಡುವೆ ಸಂಪುಟ ಜವಾಬ್ದಾರಿಗಳಿಲ್ಲದ ಪೂರ್ಣಾವಧಿ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದ್ದು, ಇದರಿಂದ ಸಚಿವ ಸ್ಥಾನದೊಂದಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿರುವ ಜಾರಕಿಹೊಳಿಯವರಿಗೆ ಕೆಲ ನಿರಾಸೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶರಣಬಸಪ್ಪ ದರ್ಶನಾಪುರ್ ಅವರು, ಹೈಕಮಾಂಡ್ ಸಿಎಂ ಮತ್ತು ಡಿಸಿಎಂ ಜೊತೆ "ಹೈ-ವೋಲ್ಟೇಜ್" ಸಭೆ ನಡೆಸಿದ್ದು, ಸಚಿವ ಸಂಪುಟ ಬದಲಾವಣೆ ಸನ್ನಿಹಿತವಾಗಿದೆ ಎಂಬ ಸುಳಿವು ನೀಡಿದರು.
ಯಾದಗಿರಿಯಲ್ಲಿ ಮಾತನಾಡಿದ ಅವರು, ಹಲವಾರು ಖಾತೆಗಳು ಬದಲಾಗಬಹುದು. ಆದರೂ ಅಂತಿಮ ನಿರ್ಧಾರ ಸಿದ್ದರಾಮಯ್ಯ ಅವರಿಗೆ ಬಿಟ್ಟದ್ದು ಎಂದು ಹೇಳಿದರು.
Advertisement