
ಬೆಂಗಳೂರು: ಜುಲೈ 14ರಿಂದ ವಿಧಾನಸಭೆ ಮುಂಗಾರು ಅಧಿವೇಶನ ಆರಂಭವಾಗುವ ಸಾಧ್ಯತೆಗಳಿದ್ದು, ಈ ನಡುವಲ್ಲೇ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಹಾಗೂ ಜಾತಿಗಣತಿ ಮರು ಸಮೀಕ್ಷೆ ವಿಚಾರ ಹಿಡಿದು ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.
ಕೆಲವು ವಾರಗಳ ಹಿಂದಷ್ಟೇ ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದ ಕಾಂಗ್ರೆಸ್ ಸರ್ಕಾರ, ಇದೀಗ ಆಂತರಿಕ ಹಗ್ಗಜಗ್ಗಾಟ ಎದುರಿಸುತ್ತಿದೆ, ಹಲವು ನಾಯಕರು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆಗಾಗಿ ಲಾಭಿ ನಡೆಸುತ್ತಿದ್ದಾರೆ.
ಇತ್ತ ಕಾಂಗ್ರೆಸ್ ಸರ್ಕಾರ ಸಾಕಷ್ಟು ಇಕ್ಕಟ್ಟಿನಲ್ಲಿ ಸಿಲುಕಿದ್ದರೂ, ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಧ್ವನಿಯೆತ್ತುವಲ್ಲಿ ವಿಫಲವಾಗುತ್ತಿದ್ದೇವೆಂಬ ಭಾವನೆ ಬಿಜೆಪಿ ನಾಯಕರಲ್ಲೂ ಮೂಡತೊಡಗಿದೆ.
ಇದೀಗ ಅಧಿವೇಶನಕ್ಕೆ ಬಿಜೆಪಿ ಸಜ್ಜಾಗುತ್ತಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಹಾಗೂ ರಾಜ್ಯಪಾಲರಿಗೆ ದೂರು ನೀಡಲು ಸಜ್ಜಾಗುತ್ತಿದೆ.
ಆರ್'ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ, ಜಾತಿ ಗಣತಿ ಮರು ಸಮೀಕ್ಷೆ, ಕರಾವಳಿಯಲ್ಲಿ ಕೋಮು ಸಂಘರ್ಷ ವಿಚಾರಗಳ ಕುರಿತು ಧ್ವನಿಯೆತ್ತಲು ಸಿದ್ಧತೆ ನಡೆಸುತ್ತಿದೆ.
ರಾಜ್ಯ ಸರ್ಕಾರದ ವೈಫಲ್ಯ ಕುರಿತು ನಾವು ಧ್ವನಿಯೆತ್ತಿದಾಗಲೆಲ್ಲಾ ರಾಷ್ಟ್ರೀಯ ಸುದ್ದಿಗಳು ಹೈಲೈಟ್ ಆಗಿ ಅದು ಬದಿಗೊತ್ತುವಂತಾಗುತ್ತಿದೆ. ಕಳೆದ ಬಾರಿ ಬೆಲೆ ಏರಿಕೆ ವಿರುದ್ಧ ಧ್ವನಿಯೆತ್ತಿದ್ದೆವು. ಈ ವೇಳೆ ಪಹಲ್ಗಾಮ್ ಉಗ್ರರ ದಾಳಿ ಘಟನೆ ನಡೆದಿತ್ತು. ಬೆಂಗಳೂರು ಕಾಲ್ತುಳಿತ ವಿಚಾರ ಹಿಡಿದು ಪ್ರತಿಭಟನೆ ನಡೆಸಲು ಮುಂದಾದಾಗ ಅಹಮದಾಬಾದ್ ವಿಮಾನ ದುರಂತ ಸಂಭವಿಸಿತು. ಹಾಗೆಂದು ದುರಂತಗಳೇ ನಮಗೆ ಅಡ್ಡಿಯಾಯಿತು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಮೇಲ್ಮನೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಮತ್ತು ಎಂಎಲ್ಸಿ ಎನ್ ರವಿಕುಮಾರ್ ಅವರು ಮಾತನಾಡಿ, ಪಕ್ಷದ ಸಭೆಯಲ್ಲಿ ಅಧಿವೇಶನದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಉತ್ತಮ ಆಡಳಿತ ನೀಡುವಲ್ಲಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ, ಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣವಾದ ಓಲೈಕೆ ರಾಜಕೀಯದಲ್ಲಿ ತೊಡಗಿದೆ. ಕಾಲ್ತುಳಿತದಿಂದ ಉಂಟಾಗುವ ಸಾವುಗಳು, ಜಾತಿ ಜನಗಣತಿಗೆ ತೆರಿಗೆದಾರರ ಹಣವನ್ನು ವ್ಯರ್ಥ ಮಾಡುವುದು ಮತ್ತು ಇನ್ನೂ ಹಲವು ವಿಷಯಗಳ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಕೆಲ ಬಿಜೆಪಿ ನಾಯಕರು ಪಕ್ಷ ಪುನರಾಚನೆಗೆ ಸಲಹೆ ನೀಡುತ್ತಿರುವುದಾಗಿ ತಿಳಿದುಬಂದಿದೆ. ನಾಯಕತ್ವ ಹಾಗೂ ವಿಧಾನಸಭೆಯಲ್ಲಿ ಪಕ್ಷದ ಕಾರ್ಯಕ್ಷಮತೆಯ ಕುರಿತು ಆಂತರಿಕ ಕಿತ್ತಾಟ ನಡೆಯುತ್ತಲೇ ಇವೆ. ಆಶಿಸ್ತಿನ ಕಾರಣದಿಂದ ಕೆಲ ನಾಯಕರನ್ನು ಅಮಾನತುಗೊಳಿಸಲಾಗಿದೆ. ಆದರೆ, ಪಕ್ಷದಲ್ಲಿ ಅಸಮಾಧಾನ ಇನ್ನು ಹೊಗೆಯಾಡುತ್ತಲೇ ಇದ್ದು, ಅತೃಪ್ತರು ಮೌನತಾಳಿದ್ದಾರೆಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.
ಕಳೆದ ವಾರವಷ್ಟೇ ಬಿಜೆಪಿ ಎಲ್ಲಾ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತ್ತು. ಶೀಘ್ರದಲ್ಲೇ ರಾಜ್ಯಾಧ್ಯಕ್ಷ ಆಯ್ಕೆ ಕೂಡ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ನಾಯಕರು ಹೇಳಿದ್ದಾರೆ.
ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಗಳು ಮತ್ತು ಬಿಬಿಎಂಪಿ ಸೇರಿದಂತೆ ಸ್ಥಳೀಯ ಚುನಾವಣೆಗಳು ಸೇರಿದಂತೆ ಹತ್ತಿರ ಬರುತ್ತಿದ್ದು, ನಮಗೆ ಬಲವಾದ ನಾಯಕತ್ವ ಬೇಕು. ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷ ಸಂಘಟನೆಯನ್ನು ಬಲಪಡಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement