
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಮತ್ತು ಶಾಸಕರು ಸಿದ್ದರಾಮಯ್ಯ ಅವರ ನಾಯಕತ್ವದ ಪರವಾಗಿರುವುದರಿಂದ ಸಿದ್ದರಾಮಯ್ಯ ಅವರು 19ನೇ ಬಜೆಟ್ ಕೂಡ ಮಂಡಿಸುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಂದಿನ 2026ರಲ್ಲಿಯೂ ಸೇರಿದಂತೆ 19 ಬಜೆಟ್ ಮಂಡಿಸುವುದು ನಿಶ್ಚಿತ. ಇದರಲ್ಲಿ ಯಾವ ಅನುಮಾನ ಇಲ್ಲ ಎಂದು ಹೇಳಿದರು.
ಹೈಕಮಾಂಡ್ ಮತ್ತು ಶಾಸಕರು ಸಿದ್ದರಾಮಯ್ಯ ಪರವಿದ್ದಾರೆ. ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಮುಡಾ ಹಗರಣ ಕುರಿತು ಮಾತನಾಡಿದ ಅವರು, ತಾಯಿ ಪಾರ್ವತಿ ಅವರಿಗೆ ಇ.ಡಿ ನೋಟಿಸ್ಗೆ ಹೈಕೋರ್ಟ್ನಿಂದ ರಿಲೀಫ್ ದೊರೆತಿದ್ದರಿಂದ ಸಂತಸವಾಗಿದೆ. ನಮ್ಮ ತಾಯಿ ಮಾನಸಿಕವಾಗಿ ನೊಂದಿದ್ದರು. ಹೈಕೋರ್ಟ್ ತೀರ್ಪಿನಿಂದ ಸಮಾಧಾನವಾಗಿದೆ ಎಂದರು.
ಯಾವ ತಪ್ಪು ಮಾಡದೇ ಇದ್ದರೂ ಸುಮ್ಮನೇ ಗೂಬೆ ಕೂರಿಸಿದ್ದರು. ನಮ್ಮ ತಂದೆಯನ್ನು ಪ್ರಕರಣದಲ್ಲಿ ಸಿಲುಕಿಸಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಈ ಕಾರಣಕ್ಕಾಗಿ ನಾವು 14 ನಿವೇಶನಗಳನ್ನು ವಾಪಸ್ ಕೊಟ್ಟಿದ್ದೆವು. ನ್ಯಾಯಯುತವಾಗಿ ನಮಗೆ ಆ ಸೈಟುಗಳು ಬರಬೇಕಿದೆ. ತನಿಖಾ ಪ್ರಕ್ರಿಯೆ ಮುಗಿದ ಮೇಲೆ ಕೋರ್ಟ್ ಮೂಲಕವೇ ಅವುಗಳನ್ನು ವಾಪಸ್ ಪಡೆಯುವ ಬಗ್ಗೆ ನಮ್ಮ ತಾಯಿ ನಿರ್ಧಾರ ಮಾಡುತ್ತಾರೆ. ವಿನಾಕಾರಣ ಟೀಕೆಗಳನ್ನು ನಿಲ್ಲಿಸಬೇಕಿತ್ತು. ಹೀಗಾಗಿ, ನಾವು ಸೈಟುಗಳನ್ನು ವಾಪಸ್ ಕೊಟ್ಟಿದ್ದೆವು. ಕಾನೂನಿನಲ್ಲಿ ನಮ್ಮದು ತಪ್ಪಿಲ್ಲ ಎಂದು ಬರುತ್ತಿದೆ. ಆದ್ದರಿಂದ ಸೈಟ್ ವಾಪಸ್ ಪಡೆಯುವ ಬಗ್ಗೆ ನಮ್ಮ ತಾಯಿ ತೀರ್ಮಾನ ಮಾಡುತ್ತಾರೆಂದು ಹೇಳಿದರು.
ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಎಲ್ಲರಿಗೂ ಮುಪ್ಪು ಬರುತ್ತದೆ. ವಯಸ್ಸಾಗುತ್ತದೆ. ಕಾಯಿಲೆ ಬರುವುದು, ಸಾವು ಬರುವುದು ಸಹಜ. ಆಗ ಅದನ್ನೇ ಇಂತಹ ಕಾರಣಕ್ಕೆ ಬಂತು ಎಂದು ಟೀಕೆ ಮಾಡಿದರೆ ಅದರಲ್ಲಿ ಸಭ್ಯತೆ ಇರುವುದಿಲ್ಲ ಎಂದು ತಿರುಗೇಟು ನೀಡಿದರು.
ಬಜೆಟ್ ಬಗ್ಗೆ ಬಿಜೆಪಿ ನಾಯಕರು ಟೀಕಿಸುವುದರಲ್ಲಿ ಅರ್ಥವಿಲ್ಲ. ಬಿಜೆಪಿ ನಾಯಕರಿಗೆ ಹೇಳಲು ಏನು ಸಿಗದೆ ಟೀಕೆ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿಲ್ಲ. ಅಲ್ಪಸಂಖ್ಯಾತರು ಅಂದರೆ ಬರೀ ಮುಸ್ಲಿಮರು ಮಾತ್ರವಲ್ಲ. ಅದಕ್ಕೆ ಬೇರೆ ಬೇರೆಯವರು ಬರುತ್ತಾರೆ. ಸರ್ಕಾರದ ಬಜೆಟ್ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಸಬಲೀಕರಣದ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದರು.
Advertisement