
ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪ ಅಗ್ರೆಸಿವ್ ನಾಯಕ. ಉದ್ದೇಶಪೂರ್ವಕವಾಗಿ ಒಬ್ಬ ಅಧಿಕಾರಿ ಮೇಲೆ ಕೈ ಎತ್ತಿಲ್ಲ. ಭದ್ರತಾ ಲೋಪದ ಕಾರಣಕ್ಕಾಗಿ ಸಿಟ್ಟಾಗಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಯಾವುದೇ ತಪ್ಪು ಹುಡುಕಲು ಸಾಧ್ಯವಿಲ್ಲದೆ ಹೀಗೆ ಮಾಡುತ್ತಾರೆ. ಬಿಜೆಪಿಯವರು ರಾಜಕೀಯ ಜೀವನ ನಡೆಸಲು ಏನಾದರೂ ಈ ರೀತಿಯ ವಿವಾದ ಸೃಷ್ಟಿಸುತ್ತಾರೆ ಎಂದು ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕೇಂದ್ರ ಏನು ನಿರ್ಧಾರ ಬೇಕಾದರೂ ತೆಗೆದುಕೊಳ್ಳಲಿ. ಒಬ್ಬರ ಪ್ರಾಣವೂ ಒಂದೇ, ಸಾವಿರಾರು ಜನರ ಪ್ರಾಣಾನೂ ಒಂದೇ. ಪರಿಹಾರದ ಜತೆಗೆ ಕೇಂದ್ರ ಸರ್ಕಾರ ಮೃತರ ಕುಟುಂಬಸ್ಥರಿಗೆ ಉದ್ಯೋಗ ನೀಡಲಿ. ಇನ್ನು ಮುಂದೆ ಯಾವುದೇ ದಾಳಿಯಾಗದಂತೆ ಎಚ್ಚರಿಕೆ ವಹಿಸಲಿ. ಈ ನಿಟ್ಟಿನಲ್ಲಿ ಏನೇ ನಿರ್ಧಾರ ಮಾಡಿದರೂ ಬೆಂಬಲಿಸುತ್ತೇವೆ. ಆದರೆ ಸಾವಿನಲ್ಲೂ ರಾಜಕೀಯ ಮಾಡುವುದು ಬಿಜೆಪಿ ಸಂಸ್ಕೃತಿ. ಸಾವು, ನೋವಲ್ಲಿ ರಾಜಕಾರಣ ನಮಗಿಷ್ಟವಿಲ್ಲ ಎಂದರು.
ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭಕ್ಕೆ ಅನುಮೋದನೆ ಸಿಕ್ಕಿದೆ. ಆದರೆ, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡರು ಕೃಷಿ ವಿವಿ ಪ್ರಾರಂಭಕ್ಕೆ ನೇರವಾಗಿ ವಿರೋಧ ಮಾಡಲಾಗದೆ ಎಚ್.ಡಿ.ರೇವಣ್ಣ ಅವರನ್ನು ಮುಂದೆ ಬಿಟ್ಟಿದ್ದರು. ಎಚ್.ಡಿ.ರೇವಣ್ಣ ಪ್ರತಿಭಟನೆ ಮಾಡಿ ಅಧಿವೇಶನದಲ್ಲೂ ವಿರೋಧ ಮಾಡಿದ್ದರು. ಮಂಡ್ಯ ಜಿಲ್ಲೆ ಮೇಲೆ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡರಿಗೆ ಏನೋ ಒಂದು ದ್ವೇಷ. ಯಾರಾದರೂ ದ್ವೇಷ ಮಾಡಲಿ, ನಾನು ಅಭಿವೃದ್ಧಿ ಪರ. ಕೃಷಿ ವಿವಿ ಸ್ಥಾಪನೆಗೆ ಕೈಮುಗಿದು ಮನವಿ ಮಾಡಿದ್ದೆ ಎಂದು ಹೇಳಿದರು.
Advertisement